ಮೈಸೂರಲ್ಲಿ 85 ಕಾಲೇಜುಗಳಿದ್ದರೂ ಉದ್ಯೋಗಾವಕಾಶ ಕಡಿಮೆ:ಪ್ರತಾಪ್ ಸಿಂಹ
ಮೈಸೂರು, ಡಿಸೆಂಬರ್ 7: ಮೈಸೂರಿಗೆ ಸರಿಯಾದ ಸಂಪರ್ಕ ವ್ಯವಸ್ಥೆಯೇ ಇರಲಿಲ್ಲ. 12 ಎಂಜಿನಿಯರಿಂಗ್ ಕಾಲೇಜು, 85 ಕಾಲೇಜುಗಳು ಇದ್ದರೂ ಉದ್ಯೋಗಾವಕಾಶ ಕಡಿಮೆ. ಸಾಫ್ಟ್ವೇರ್ ಕಂಪನಿಗಳು ಬರುತ್ತಿಲ್ಲ. ಹೀಗಾಗಿ, ಸಂಪರ್ಕಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.
ಮೈಸೂರಿನಲ್ಲಿ ನಡೆದ ಕ್ರೆಡಾಯ್ 'ನ್ಯೂ ಇಂಡಿಯಾ ಸಮ್ಮೇಳನ'ದಲ್ಲಿ ಮಾತನಾಡಿದ ಅವರು ಏಕಕಾಲದಲ್ಲಿ ರಸ್ತೆ, ವಿಮಾನ ನಿಲ್ದಾಣ ಹಾಗೂ ರೈಲು ನಿಲ್ದಾಣ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. 2022ರೊಳಗೆ ಪ್ರತಿ ಕುಟುಂಬ ಸ್ವಂತ ಮನೆ ಹೊಂದಬೇಕೆಂಬ ಯೋಜನೆಯನ್ನು ಪ್ರಧಾನಿ ಮೋದಿ ಹೊಂದಿದ್ದಾರೆ. ಈ ಯೋಜನೆಗೆ ಕ್ರೆಡಾಯ್ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕ್ರೆಡಾಯ್ ಮುಖ್ಯಸ್ಥ ಗೀತಾಂಬರ್ ಆನಂದ್ ಮಾತನಾಡಿ, ಮೈಸೂರು ಸೇರಿದಂತೆ 2 ಹಾಗೂ 3ನೇ ಹಂತದ ನಗರಗಳಲ್ಲಿ ಹೆಚ್ಚು ಹೂಡಿಕೆ ಮಾಡುವ ಗುರಿ ಹೊಂದಲಾಗಿದೆ. ಇದರಿಂದ ಈ ನಗರಗಳಲ್ಲಿ ಮೂಲ ಸೌಲಭ್ಯ, ಸಂಪರ್ಕ ವ್ಯವಸ್ಥೆಗೆ ಆದ್ಯತೆ ಸಿಗಲಿದೆ. ಉದ್ಯೋಗವೂ ಹೆಚ್ಚಲಿದೆ.

ಬೆಳೆಯುತ್ತಿರುವ ನಗರಿಗಳಲ್ಲಿ ದೇಶದ ಭವಿಷ್ಯ ಅಡಗಿದೆ. ದೇಶದ ಆರ್ಥಿಕ ಹಾಗೂ ಕೈಗಾರಿಕೆ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸಲಿವೆ. ಹೀಗಾಗಿ, ಮಹಾನಗರಗಳಷ್ಟೇ ಆದ್ಯತೆಯನ್ನು ಮೈಸೂರಿನಂಥ ನಗರಗಳಿಗೂ ನೀಡಬೇಕಿದೆ. ನವ ಭಾರತ ನಿರ್ಮಾಣದಿಂದ ಹೊಸ ಅವಕಾಶಗಳು ಸೃಷ್ಟಿ ಆಗಲಿವೆ. ರಿಯಲ್ ಎಸ್ಟೇಟ್ ಉದ್ಯಮದಿಂದ ಲಕ್ಷಾಂತರ ಮಂದಿಗೆ ಉದ್ಯೋಗ ಲಭಿಸಿದೆ ಎಂದರು.
ಈ ಸಮ್ಮೇಳನ ಮೈಸೂರಿನ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ. ಹಲವು ಅವಕಾಶಗಳು ತೆರೆದುಕೊಳ್ಳಲಿವೆ. ಆದರೆ, ಉತ್ತಮ ಸಂಪರ್ಕದ ಕೊರತೆ ಇದೆ. ಮುಂಬೈ-ಅಹಮದಾಬಾದ್ನಂತೆ ಬೆಂಗಳೂರು-ಮೈಸೂರಿಗೂ ಬುಲೆಟ್ ರೈಲು ಅಗತ್ಯವಿದೆ. ಒಟ್ಟಿನಲ್ಲಿ ಪ್ರಯಾಣ ಅವಧಿ ತಗ್ಗಬೇಕು ಎಂದು ಹೇಳಿದರು.












Click it and Unblock the Notifications