ದಸರೆಯೊಳಗೆ ನಡೆಯಲಿದೆ ಮೈಸೂರು ಮೇಯರ್ ಆಯ್ಕೆ ಪ್ರಕ್ರಿಯೆ, ಬಿಜೆಪಿಗೆ ವಿಪಕ್ಷ ಸ್ಥಾನ ನಿಕ್ಕಿ
ಮೈಸೂರು, ಸೆಪ್ಟೆಂಬರ್.06: ಮಹಾನಗರಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾಗಿರುವ ನೂತನ ಸದಸ್ಯರ ಹೆಸರು ರಾಜ್ಯ ಪತ್ರದಲ್ಲಿ ಪ್ರಕಟವಾಗುತ್ತಿದ್ದಂತೆ ಹೊಸ ನಗರಪಾಲಿಕೆ ಅಸ್ತಿತ್ವಕ್ಕೆ ಬರಲಿದ್ದು, ರಾಜಕೀಯ ಗರಿಗೆದರಲಿದೆ.
ಈಗಾಗಲೇ ಮಹಾಪೌರರು ಮತ್ತು ಉಪಮಹಾಪೌರರ ಮೀಸಲಾತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಹೊಸ ಆಡಳಿತಕ್ಕೆ ಚಾಲನೆ ದೊರೆತಿದೆ. ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತರಾತುರಿಯಲ್ಲೇ ಮಹಾಪೌರರು ಮತ್ತು ಉಪಮಹಾಪೌರರ ಆಯ್ಕೆಯೂ ನಡೆಯಲಿದೆ.
ಮೈಸೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ, ಜೆಡಿಎಸ್ಗೆ ಮೇಯರ್ ಸ್ಥಾನ
ಸದ್ಯ ಈಗಿರುವ ನಗರಪಾಲಿಕೆ ಸದಸ್ಯರ ಅಧಿಕಾರಾವಧಿ ಮುಗಿದಿದ್ದು, ಇವರೆಲ್ಲರೂ ಇಂದಿನಿಂದ ಮಾಜಿಗಳೇ. ಇದು 6ನೇ ಮಹಾನಗರಪಾಲಿಕೆ ಅವಧಿಯಾಗಿದ್ದರೂ 1996ರ ಸ್ಥಳಿಯ ಸಂಸ್ಥೆಗಳ ಕಾಯಿದೆ ತಿದ್ದುಪಡಿ ನಂತರ 4ನೇ ಅವಧಿಯಾಗಿದೆ.
ನೂತನ ಮಹಾಪೌರ, ಉಪಮಹಾಪೌರರು, ಸ್ಥಾಯಿ ಸಮಿತಿ ಸದಸ್ಯರು ಹಾಗೂ ಸದಸ್ಯರ ಅಧಿಕಾರಾವಧಿ 2018 ಸೆ.4ರವರೆಗೆ ಎಂದು ಮಹಾ ಪೌರರ ಚುನಾವಣೆಯಂದೇ ಘೋಷಿಸಲಾಗಿತ್ತು. 2013ರ ಮಾರ್ಚ್ನಲ್ಲೇ ಮಹಾನಗರಪಾಲಿಕೆ ಚುನಾವಣೆ ನಡೆದಿದ್ದರೂ ನಗರಪಾಲಿಕೆ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದ್ದು ಸೆ.4 ರಂದು ಹೀಗಾಗಿ ಅಂದಿನಿಂದ 5 ವರ್ಷ ನಿಗದಿಯಾಗಿತ್ತು.
ರಾಜ್ಯ ವಿಧಾನಸಭೆ ಚುನಾವಣೆ ನಂತರ ಜಾ.ದಳ ಕಾಂಗ್ರೆಸ್ ಕೈಕುಲುಕಿ ಸರ್ಕಾರ ರಚಿಸಿದಂತೆ ರಾಜ್ಯದ ಎಲ್ಲೆಡೆ ಇದೇ ಮಾದರಿಯಲ್ಲಿ ದೋಸ್ತಿ ಮುಂದುವರಿಸಲು ಎರಡೂ ಪಕ್ಷಗಳು ತೀರ್ಮಾನಿಸಿವೆ.
ಈಗಾಗಲೇ ಜಾ.ದಳದ ರಾಜ್ಯಾಧ್ಯಕ್ಷ ಅಡಗೂರು ಎಚ್.ವಿಶ್ವನಾಥ್ ಅವರು, ಈ ವಿಷಯ ಸ್ಪಷ್ಟಪಡಿಸಿದ್ದು, ರಾಜ್ಯದ ಯಾವ ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ಪಕ್ಷಕ್ಕೂ ಬಹುಮತವಿಲ್ಲದೇ ಅತಂತ್ರವಾಗಿದೆಯೋ ಅಂತಹ ಕಡೆಗಳಲ್ಲಿ ಜಾ.ದಳವು ಕಾಂಗೆಸ್ ಜೊತೆ ಕೈಜೋಡಿಸಲಿದೆ. ಇದು ಪಕ್ಷದ ನಿರ್ಧಾರ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ನನ್ನ ವಿರುದ್ಧ ಸ್ಪರ್ಧಿಸಲಿ: ಸಿಂಹ ಸವಾಲ್
ಮೈಸೂರಿನ 65 ವಾರ್ಡ್ ಗಳಲ್ಲಿ ಬಿಜೆಪಿ 22, ಕಾಂಗ್ರೆಸ್ 19, ಜಾ.ದಳ 18, ಪಕ್ಷೇತರ 5, ಬಿಎಸ್ ಪಿ 1 ಸ್ಥಾನಗಳಲ್ಲಿ ಗೆದ್ದಿದೆ. ಕಳೆದ 2013ರ ಪಾಲಿಕೆ ಚುನಾವಣೆಯಲ್ಲಿ ಕಾಂಗೆಸ್ 22, ಜಾ.ದಳ 20, ಬಿಜೆಪಿ 12, ಎಸ್ಡಿಪಿಐ 2, ಕೆಜೆಪಿ 1, ಬಿಎಸ್ ಆರ್ ಕಾಂಗೆಸ್ 1 ಹಾಗೂ ಪಕ್ಷೇತರರು 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು.
ಈ ಬಾರಿ ಬಿಜೆಪಿ 10 ಸ್ಥಾನಗಳನ್ನು ಹೆಚ್ಚು ಮಾಡಿಕೊಂಡಿದ್ದರೆ, ಕಾಂಗೆಸ್ 4, ಜಾ.ದಳ 2 ಸ್ಥಾನಗಳನ್ನು ಕಳೆದುಕೊಂಡಿವೆ. ಬಿಎಸ್ ಪಿ ಮೊದಲ ಬಾರಿಗೆ ಖಾತೆ ತೆರೆದಿದೆ.
ಕರ್ನಾಟಕದಲ್ಲಿ ಕಾಂಗೆಸ್-ಜಾ.ದಳ ಸಮ್ಮಿಶ್ರ ಸರ್ಕಾರವಿದ್ದರೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿರಲಿಲ್ಲ. ಏಕಾಂಗಿಯಾಗಿಯೇ ಪಕ್ಷಗಳು ಚುನಾವಣೆ ಎದುರಿಸಿದ್ದವು. ಕೆಲವು ಕಡೆಗಳಲ್ಲಿ ಪ್ರಬಲ ಪೈಪೋಟಿಯನ್ನು ನೀಡಿದ್ದವು.
ಮೈಸೂರು ಮಹಾನಗರ ಪಾಲಿಕೆಯಲ್ಲಿ ಇನ್ನು ಮುಂದೆ ಮಹಿಳೆಯರ ಪಾರುಪತ್ಯ!
ಇಲ್ಲಿ ಯಾವುದೇ ಸ್ನೇಹ ಸ್ಪರ್ಧೆ ಇರಲಿಲ್ಲ. ಪತ್ಯೇಕ ಪ್ರಣಾಳಿಕೆ ಮೂಲಕ ಎಲ್ಲಾ ವಾರ್ಡ್ ಗಳಲ್ಲೂ ಪರಸ್ಪರ ಸೆಣಸಿದ್ದವು.
ಮೈಸೂರು ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಅತಂತ್ರ ಮಹಾ ನಗರಪಾಲಿಕೆ ರಚನೆಯಾಗಿದ್ದು, ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ವಿಪಕ್ಷದಲ್ಲಿ ಕೂರುವುದು ಅನಿವಾರ್ಯವಾಗಿದೆ. ಕಾಂಗೆಸ್-ಜಾ.ದಳ ಮೈತ್ರಿ ಸಾಧಿಸಿ ನಗರಪಾಲಿಕೆ ಆಡಳಿತ ಹಿಡಿಯಲು ನಿರ್ಧರಿಸಿವೆ.