ಜೆಡಿಎಸ್ ಶಾಸಕನ ಬೆಂಬಲಿಗರಿಂದ ಮಹಿಳಾ ಕಾನ್ಸ್ಟೇಬಲ್ ಮೇಲೆ ದರ್ಪ
ಶ್ರೀರಂಗಪಟ್ಟಣ, ಜುಲೈ 19: ತನ್ನ ಪಾಡಿಗೆ ತನ್ನ ಕರ್ತವ್ಯ ನಿಭಾಯಿಸುತ್ತಿದ್ದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಜೆಡಿಎಸ್ ಶಾಸಕನ ಚೇಲಾಗಳು ಗೂಂಡಾಗಿರಿ ನಡೆಸಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ಶ್ರೀರಂಗಪಟ್ಟಣದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತು ಅವರ ಬೆಂಬಲಿಗರು ಕೆಆರ್ಎಸ್ನ ಪ್ರದೇಶದೊಳಕ್ಕೆ ಹೋಗಲು ಪ್ರಯತ್ನಿಸಿದಾಗ ಅವರನ್ನು ತಡೆದ ಮಹಿಳಾ ಕಾನ್ಸ್ಟೇಬಲ್ ಮೇಲೆ ಶಾಸಕರ ಚೇಲಾಗಳು ದರ್ಪ ತೋರಿದ್ದಾರೆ.
ಜನರು ವಿಶ್ವಾಸ ತೋರಲಿಲ್ಲವೆಂದು ನೊಂದು ಕುಮಾರಸ್ವಾಮಿ ಕಣ್ಣೀರು
ಮಹಿಳಾ ಪೊಲೀಸ್ ಅನ್ನು ನಿಂದಿಸಿರುವ ಚೇಲಾಗಳು, ಅಸಹಾಯಕ ಸ್ಥಿತಿಯಲ್ಲಿದ್ದ ಆಕೆಯ ಮುಂದೆಯೇ ಬ್ಯಾರಿಕೇಡ್ಗಳನ್ನು ತೆಗೆದು ಬಿಸಾಡಿ ದರ್ಪ ಮೆರೆದಿದ್ದಾರೆ.
ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಎಷ್ಟು ಕೇಳಿಕೊಂಡರೂ ಸಹಿತ ಆಕೆಯೊಂದಿಗೆ ವಾಗ್ವಾದ ನಡೆಸಿರುವ ಈ ಫುಂಡರು ಆಕೆಯನ್ನೇ ತೆಗಳಿದ್ದಾರೆ. ಈ ಎಲ್ಲಾ ದೃಶ್ಯಗಳು ಮೊಬೈಲ್ನಲ್ಲಿ ರೆಕಾರ್ಡ್ ಆಗಿದೆ.
ಶಾಸಕರ ಚೇಲಾಗಳು ಇಷ್ಟೆಲ್ಲಾ ದರ್ಪ ಮೆರೆಯುವಾಗ ಸ್ಥಳೀಯರಾರೂ ಆಕೆಯ ಸಹಾಯ ಬಂದಿಲ್ಲ ಅಷ್ಟೆ ಅಲ್ಲದೆ, ಆಕೆಯ ಸಹೋದ್ಯೋಗಿ ಕಾನ್ಸ್ಟೇಬಲ್ ಸಹ ಆಕೆಯ ಸಹಾಯಕ್ಕೆ ಬರದೆ ಮೂಕನಂತೆ ನಿಂತಿದ್ದ.
ಇಂದು ಕೆಆರ್ಎಸ್ಗೆ ಮುಖ್ಯಮಂತ್ರಿಗಳು ಭೇಟಿ ಕಾರ್ಯಕ್ರಮ ಇದ್ದದ್ದರಿಂದ ವ್ಯವಸ್ಥೆಗಳನ್ನು ನೋಡಲೆಂದು ಶಾಸಕರು ಹಾಗೂ ಅವರ ಬೆಂಬಲಿಗರು ತೆರಳುವಾಗ ಈ ಘಟನೆ ನಡೆದಿದೆ.