ಯಡಿಯೂರಪ್ಪ ಪರ ಬ್ಯಾಟ್ ಬೀಸಿದ ಜೆಡಿಎಸ್ ಶಾಸಕ
ಮೈಸೂರು, ಜುಲೈ 22; ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜೀನಾಮೆ?. ಸದ್ಯ ಕರ್ನಾಟಕದಲ್ಲಿ ಈ ವಿಚಾರದ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಪ್ರತಿಪಕ್ಷಗಳ ನಾಯಕರು ಸಹ ಈ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಗುರುವಾರ ಮೈಸೂರಿನಲ್ಲಿ ಮಾತನಾಡಿದ ಕೆ. ಆರ್. ನಗರ ಕ್ಷೇತ್ರದ ಜೆಡಿಎಸ್ ಶಾಸಕ ಸಾ. ರಾ. ಮಹೇಶ್, "ಈ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಸೂಕ್ತ ಅಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಅಪ್ರಸ್ತುತ" ಎಂದು ಹೇಳಿದರು.
"ರಾಜ್ಯದಲ್ಲಿ ಕೊರೊನಾದಿಂದಾಗಿ ಜನ ಸಂಕಷ್ಟಕ್ಕೀಡಾಗಿದ್ದಾರೆ. ಕೊರೊನಾ 3ನೇ ಅಲೆ ಬಗ್ಗೆ ಈಗಾಗಲೇ ತಜ್ಞರು ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆಯಾಗುತ್ತಿರುವುದು ಸರಿಯಲ್ಲ" ಎಂದು ತಿಳಿಸಿದರು.

"ನಾನು ಕೂಡಾ ಯಡಿಯೂರಪ್ಪ ಅವರ ಜೊತೆ 20 ವರ್ಷಗಳ ಕಾಲ ಇದ್ದೆ. ನಾಯಕತ್ವ ಬದಲಾವಣೆ ವಿಚಾರ ಅವರ ಪಕ್ಷದ ತೀರ್ಮಾನ. ಆದರೆ ವ್ಯಯಕ್ತಿಕವಾಗಿ ನಾಯಕತ್ವ ಬದಲಾವಣೆ ಸೂಕ್ತವಲ್ಲ ಅನ್ನೊದು ನನ್ನ ಅಭಿಪ್ರಾಯ" ಎಂದು ಸ್ಪಷ್ಟಪಡಿಸಿದರು.
ಮಠಾಧೀಶರು ಸಿಎಂ ಬೆಂಬಲಕ್ಕೆ ನಿಂತಿರುವ ಬಗ್ಗೆ ಮಾತನಾಡಿದ ಅವರು, "ಇದು ಹೊಸದೇನಲ್ಲ, ಯಾರ ಮೇಲೆ ವಿಶ್ವಾಸ ಇರುತ್ತೋ. ಮಠಗಳಿಗೆ ಯಾರು ಸಹಕಾರ ನೀಡಿದ್ದಾರೋ ಅವರ ಪರವಾಗಿ ಮಠಾಧೀಶರು ಹೇಳಿಕೆ ನೀಡುತ್ತಿದ್ದು, ಇದು ಅವರವರಿಗೆ ಬಿಟ್ಟ ವಿಚಾರ" ಎಂದರು.
ಯಡಿಯೂರಪ್ಪ ಮಾತು; ಗುರುವಾರ ಬೆಳಗ್ಗೆ ನಾಯಕತ್ವ ಬದಲಾವಣೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಮೊದಲ ಬಾರಿ ಮಾತನಾಡಿದರು. "ಇದೇ 26ಕ್ಕೆ ಸರ್ಕಾರ ಎರಡು ವರ್ಷವನ್ನು ಪೂರೈಸುತ್ತದೆ. ಆ ದಿನ ಪಕ್ಷದ ವರಿಷ್ಠರು ಯಾವ ಸಂದೇಶ ಕಳುಹಿಸುತ್ತಾರೋ ಅದನ್ನು ಚಾಚೂ ತಪ್ಪದೇ ಪಾಲಿಸುತ್ತೇನೆ" ಎಂದು ಹೇಳಿದ್ದರು.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಹ ಈ ಬೆಳವಣಿಗೆ ಬಗ್ಗೆ ರಾಮನಗರದಲ್ಲಿ ಮಾತನಾಡಿದ್ದಾರೆ. "ಕಳೆದ ಎರಡು ದಿನಗಳಿಂದ ಹೊಸ ರೀತಿಯ ಬೆಳವಣಿಗೆ ನಡೆಯುತ್ತಿದೆ. ವಿವಿಧ ಮಠಗಳ ಸ್ವಾಮೀಜಿಗಳು ಯಡಿಯೂರಪ್ಪ ಅವರು ಮುಂದುವರಿಬೇಕು ಅಂತಾ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಸ್ವಾಮೀಜಿಗಳ ಭಾವನೆಗಳಿಗೆ ಬಿಜೆಪಿ ನಾಯಕರು ಯಾವ ರೀತಿ ಸ್ಪಂದನೆ ಮಾಡುತ್ತಾರೆ ಎಂಬುದನ್ನು ಅವರು ಹೇಳಬೇಕು" ಎಂದು ಹೇಳಿದ್ದಾರೆ.
"ಮೈತ್ರಿ ಸರಕಾರ ಕೆಡವಿ ಕಷ್ಟಪಟ್ಟು ಬಿಜೆಪಿ ಸರಕಾರ ತಂದಿದ್ದಾರೆ. ಇದೀಗ ರಾಜ್ಯದಲ್ಲಿ ಕೋವಿಡ್, ನೆರೆ ಸಂಕಷ್ಟಗಳು ಇದೆ. ಇಂತಹ ಸಮಯದಲ್ಲಿ ಜನರ ಜೀವದ ಬಗ್ಗೆ ಚೆಲ್ಲಾಟ ಆಡಬೇಡಿ" ಎಂದು ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.












Click it and Unblock the Notifications