ಜೆಡಿಎಸ್ ತೊರೆಯುವೆ ಎಂದ ಪರಿಷತ್ ಸದಸ್ಯ ಮರಿತಿಬ್ಬೇಗೌಡ!
ಮೈಸೂರು, ಮೇ 17: "ಮುಂದಿನ ಚುನಾವಣೆಗೆ ನಾನು ಜೆಡಿಎಸ್ನಲ್ಲಿ ಇರುವುದಿಲ್ಲ" ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಘೋಷಣೆ ಮಾಡಿದರು.
ಮಂಗಳವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ಹೋಗುವವರೆಲ್ಲಾ ಹೋಗಲಿ, ಪಕ್ಷ ಬಿಟ್ಟೋರು ಫುಟ್ಪಾತ್ ಆಗುತ್ತಾರೆ ಅಂತ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಮಾತು ಆಡಲು ಅವರಿಗೆ ಯೋಗ್ಯತೆ ಇಲ್ಲ. ಪಕ್ಷ ಬಿಡುವವರು ಬೀದಿಯಲ್ಲಿ ಮಲಗಿದರೆ ಅವರು ಮಾತ್ರ ಪಂಚತಾರಾ ಹೋಟೆಲ್ನಲ್ಲಿ ಮಲಗಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
"ಮೂರು ಅವಧಿಯಿಂದಲೂ ಈ ಬಾರಿ ಅಧಿಕಾರಕ್ಕೆ ಬಾರದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಹೇಳುತ್ತಲೇ ಇದ್ದಾರೆ. ಆದರೆ ಮಾಡಿದ್ದಾರಾ?. ಕುಮಾರಸ್ವಾಮಿ ಮಾಡುವ ತಪ್ಪುಗಳನ್ನು ದೇವೇಗೌಡರಿಗೆ ಹಲವಾರು ಸಲ ಬಿಡಿಸಿ ಹೇಳಿದ್ದೇನೆ. ಆದರೆ ಪ್ರಯೋಜನವಾಗುತ್ತಿಲ್ಲ. ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ಕೀಲಾರ ಜಯರಾಂಗೆ ಟಿಕೆಟ್ ಏಕೆ ಕೊಡಲಿಲ್ಲ? ಎಂದು ಹೇಳಲಿ. ಈ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧ" ಎಂದು ಸವಾಲು ಹಾಕಿದರು.

ಅನೇಕರು ಪಕ್ಷ ಬಿಟ್ಟರು; "ಪ್ರಮುಖರು ಸೇರಿದಂತೆ ಅನೇಕರು ಪಕ್ಷ ಬಿಟ್ಟು ಹೋಗಿದ್ದಾರೆ. ಪಕ್ಷದ ಬಗ್ಗೆ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಆತ್ಮವಿಮರ್ಶೆ ಮಾಡಿಕೊಳ್ಳದೇ ಹೋದರೆ ಮುಂದೆ ಕಷ್ಟವಾಗಲಿದೆ. ನಮ್ಮಲ್ಲಿ ಸೂಟ್ಕೇಸ್ ಇದ್ದವರನ್ನು ಮುಂದಿನ ಸಾಲಿನಲ್ಲಿ ಕೂರಿಸುತ್ತಾರೆ ಅಂತ ಸಂಸದ ಪ್ರಜ್ವಲ್ ರೇವಣ್ಣನವರೇ ಹೇಳಿದ್ದಾರೆ. ಆದರೆ ನನ್ನ ಹೇಳಿಕೆ ತಿರುಚಿ ಕುಮಾರಸ್ವಾಮಿ ಸ್ಟೇಟ್ಮೆಂಟ್ ಕೊಡುತ್ತಾರೆ. 1983ರಿಂದ ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಬ್ಯಾನರ್, ಬಂಟಿಂಗ್ಸ್ ಕಟ್ಟಿ ಪಕ್ಷದ ಪರ ಪ್ರಚಾರ ಮಾಡಿದ್ದೇನೆ" ಎಂದು ಮರಿತಿಬ್ಬೇ ಗೌಡ ಹೇಳಿದರು.
Recommended Video
ನನ್ನ ಪರ ಪ್ರಚಾರ ಮಾಡಲಿಲ್ಲ; "ನಾನು ಸಾಮಾನ್ಯ ಕಾರ್ಯಕರ್ತನಾಗಿ ದುಡಿದದ್ದು ಜೆಡಿಎಸ್ನಲ್ಲಿ. ಆದರೆ ಶಾಸನ ಸಭೆಗೆ ಹೋಗಿದ್ದು ಕಾಂಗ್ರೆಸ್ನಿಂದ, ಎರಡು ಬಾರಿ ಎಂಎಲ್ಸಿ ಆದ ಮೇಲೆ ಎಚ್. ಡಿ. ದೇವೇಗೌಡ ಕರೆದು ಟಿಕೆಟ್ ಕೊಟ್ಟರು. ಆದರೆ ಕುಮಾರಸ್ವಾಮಿ ಎಂದೂ ನನ್ನ ಪರ ಪ್ರಚಾರ ಮಾಡಲಿಲ್ಲ. ನನ್ನ ಪರ ಪ್ರಚಾರ ಮಾಡಿದ ಒಂದೇ ಒಂದು ಪೋಟೋ ತೋರಿಸಲಿ. ಟಿಕೆಟ್ ಕೊಟ್ಟು ಎರಡು ಬಾರಿ ಸೋಲಿಸುವ ಹುನ್ನಾರ ನಮ್ಮ ವರಿಷ್ಠರಿಂದಲೇ ನಡೆಯಿತು" ಎಂದು ದೂರಿದರು.












Click it and Unblock the Notifications