ಶ್ರೀಕಂಠೇಶ್ವರನಿಗೆ ಕುಮಾರ ಸ್ವಾಮಿ ನಮೋ ಎಂದಿದ್ದೇಕೆ?
ಮೈಸೂರು, ಮೇ 10: ಕಳೆದ ಅಮಾವಾಸ್ಯೆಗೆ ಆದಿಚುಂಚನಗಿರಿಗೆ ತೆರಳಿದ್ದ ಮಾಜಿಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಈ ಬಾರಿಯ ಬುದ್ಧಹುಣ್ಣಿಮೆಗೆ ನಂಜನಗೂಡಿನ ಶ್ರೀಕಂಠೇಶ್ವರನ ಸನ್ನಿಧಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಬುದ್ಧಹುಣ್ಣಿಮೆಯಂದು ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಪೂಜೆ ಮಾಡಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿಯೇ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಕುಮಾರಸ್ವಾಮಿ ಅವರು ಶ್ರೀಕಂಠೇಶ್ವರನಿಗೆ ಪೂಜೆ ಸಲ್ಲಿಸಿರುವುದು ಎಲ್ಲರ ಗಮನಸೆಳೆದಿದೆ.[ಕಾರ್ಯಕರ್ತನ ಕಪಾಳಕ್ಕೆ ಹೊಡೆದ ಎಚ್ ಡಿ ಕುಮಾರಸ್ವಾಮಿ]
ಮೊದಲಿನಿಂದಲೂ ದೇವೇಗೌಡರು ಸೇರಿದಂತೆ ಕುಟುಂಬದ ಎಲ್ಲರೂ ದೈವ ಭಕ್ತರಾಗಿದ್ದು, ಆಗಾಗ್ಗೆ ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ. ಆದರೆ ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ಇಷ್ಟಾರ್ಥ ನೆರವೇರಿಸುವ ದೇವರ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿರುವುದು ಅವರ ಬಹಳ ದಿನಗಳ ಬಯಕೆ ಈಡೇರಲು ಮಾಡುತ್ತಿರುವ ಸಂಕಲ್ಪ ಎಂದರೂ ತಪ್ಪಾಗಲಾರದು.
ಹಾಗಿದ್ದಲ್ಲಿ, ಎಚ್ ಡಿಕೆಯವರ ನಂಜುಂಡೇಶ್ವರ ಸನ್ನಿಧಾನದ ಭೇಟಿಯ ಹಿಂದಿನ ಉದ್ದೇಶವೇನು ಎಂಬುದರ ಬಗ್ಗೆ ಒಂದಿಷ್ಟು ಅನಿಸಿಕೆಗಳು ಇಲ್ಲಿವೆ.
ಚುನಾವಣೆಗೆ ಸಜ್ಜು
ಮುಂಬರುವ 2018ರ ವಿಧಾನಸಭಾ ಚುನಾವಣೆ ವೇಳೆಗೆ ಜೆಡಿಎಸ್ ಪಕ್ಷವನ್ನು ಸಂಘಟಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವ ತವಕದಲ್ಲಿ ಅವರು ಇದ್ದಾರೆ. ಅದಕ್ಕಾಗಿ ಈಗಿನಿಂದಲೇ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದಾರೆ. ಮತ್ತೊಂದೆಡೆ ಅವರ ಕುಟುಂಬದ ಸದಸ್ಯರು ಕೂಡ ಚುನಾವಣೆಗೆ ಸಜ್ಜಾಗತೊಡಗಿದ್ದಾರೆ.
ಎಚ್ ಡಿಕೆ ಸ್ಪಷ್ಟನೆ
ಬಂಡಾಯ ಶಾಸಕರನ್ನು ಮತ್ತೆ ಜೆಡಿಎಸ್ಗೆ ಸೇರಿಸಿಕೊಳ್ಳುವುದಿಲ್ಲ ಎಂದು ಘೋಷಿಸಿರುವ ಕುಮಾರಸ್ವಾಮಿ ಅವರು, ಪಕ್ಷದಿಂದ ಹೊರ ಹೋದ ನಾಯಕರಿಗೆ ಪರ್ಯಾಯ ನಾಯಕರ ತಲಾಸೆಯಲ್ಲಿದ್ದಾರೆ. ಈಗಾಗಲೇ ಹೆಚ್.ವಿಶ್ವನಾಥ್ ಅವರ ಪ್ರವೇಶದ ಮಾತುಗಳು ಕೇಳಿ ಬರುತ್ತಿವೆ.
ಹುರುಪು ತಂದಿದೆ ಎಲ್ಲರಲ್ಲಿ
ಮುಂದಿನ ದಿನಗಳಲ್ಲಿ ಇತರೆ ಪಕ್ಷಗಳು ಒಂದಷ್ಟು ಅತೃಪ್ತ ನಾಯಕರು ಇತ್ತ ಮುಖ ಮಾಡುವ ಸಾಧ್ಯತೆಯೂ ಇಲ್ಲದಿಲ್ಲ. ಜತೆಗೆ ಬಿಜೆಪಿ ಮತ್ತು ಕಾಂಗ್ರೆಸ್ನ ಒಳಜಗಳಗಳು ಜೆಡಿಎಸ್ಗೆ ವರದಾನ ಆಗುವ ಸಾಧ್ಯತೆ ಇರುವುದರಿಂದಲೇ ಕುಮಾರಸ್ವಾಮಿ ಅವರು ಹುರುಪಿನಲ್ಲಿದ್ದಾರೆ. ಪಕ್ಷದ ಸಂಘಟನೆಯ ಜತೆಜತೆಯಲ್ಲೇ ದೇವರ ಮೊರೆ ಹೋಗುತ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಪ್ರಾರ್ಥನೆ ಸಲ್ಲಿಸಿದ್ದಾಗಿ ಹೇಳಿದ ಮಾಜಿ ಸಿಎಂ
ಕುಮಾರಸ್ವಾಮಿ ಅವರು ಹೇಳುತ್ತಿರುವುದೇನೆಂದರೆ, ಬರದಿಂದ ರೈತಾಪಿವರ್ಗ ಅದರಲ್ಲೂ ಇತ್ತೀಚೆಗೆ ತುಮಕೂರು ಮತ್ತು ಶಿವಮೊಗ್ಗಕ್ಕೆ ಭೇಟಿ ನೀಡಿದಾಗ ತೆಂಗು ಮತ್ತು ಅಡಿಕೆ ಬೆಳೆಯನ್ನೇ ನಂಬಿರುವ ರೈತರ ಪರಿಸ್ಥಿತಿ ಶೋಚನೀಯವಾಗಿದ್ದು, ಅದನ್ನು ನೋಡಿ ಗಾಬರಿಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಉತ್ತಮ ಮಳೆ ಬಂದು ಜಲಾಶಯಗಳು ತುಂಬಿ ರೈತರ ಸಂಕಷ್ಟ ದೂರವಾಗಬೇಕೆಂದು ಶ್ರೀಕಂಠನಲ್ಲಿ ಪ್ರಾರ್ಥಿಸಿಕೊಂಡಿದ್ದಾಗಿ ಹೇಳಿದ್ದಾರೆ.
ದೇವರಲ್ಲಿ ಬೇಡಿಕೆ
ಎಲ್ಲಕ್ಕೂ ಮಿಗಿಲಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಕೆಲವು ಭಾಗಗಳ ಮತದಾರರು ಜೆಡಿಎಸ್ ಪರ ಒಲವು ತೋರಿದ್ದಾರೆಂಬುದು ಅಷ್ಟೇ ಸತ್ಯ. ಜನರ ಅಭಯ ಹಸ್ತ ನಿಜಕ್ಕೂ ಜೆಡಿಎಸ್ ಗೆ ಸಿಕ್ಕಲ್ಲಿ ಈ ಬಾರಿಯ ಚುನಾವಣೆಯಲ್ಲಿ ಅವರ ಗೆಲವು ನಿಶ್ಚಿತ. ಅದು ಮತ್ತಷ್ಟು ಸುಗಮವಾಗಿ ಸಾಗಲೆಂದು ನಂಜುಂಡೇಶ್ವರ ದೇವರಲ್ಲಿ ಕುಮಾರಸ್ವಾಮಿ ಪ್ರಾರ್ಥಿಸಿರಲಿಕ್ಕೂ ಸಾಕು.