"ಶರ್ಟ್ ಕಳಚಿ ಹೋಮ ಮಾಡಿದ ಸಿದ್ದರಾಮಯ್ಯ ಮೌಢ್ಯ ವಿರೋಧಿಯೇ?"
Recommended Video
ಮೈಸೂರು, ಅಕ್ಟೋಬರ್ 6 : 'ಸಿದ್ದರಾಮಯ್ಯನವರೇ ಮೂಕಂಬಿಕಾ ದೇವಸ್ಥಾನದಲ್ಲಿ ಶರ್ಟ್ ಬಿಚ್ಚಿ ಹೋಮ - ಹವನ ಮಾಡಿಸಿದ ನೀವು ಅದ್ಹೇಗ್ರಿ ಮೂಢನಂಬಿಕೆ ವಿರೋಧಿ ಕಾಯ್ದೆ ಜಾರಿಗೆ ತರುತ್ತೀರಾ...? ನಿಮಗೆ ನಾಚಿಕೆಯಾಬೇಕು' ಎಂದು ಸಿಎಂ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡವರು ಶಾಸಕ ಜಿ .ಟಿ ದೇವೇಗೌಡ.
ಸಿದ್ದರಾಮಯ್ಯಗೆ ಪಿತ್ತ ನೆತ್ತಿಗೇರಿದಂತಿದೆ ಎಂದು ಗುಡುಗಿದ ವಿಶ್ವನಾಥ್
ಮೈಸೂರಿನಲ್ಲಿ ಜೆಡಿಎಸ್ ನಾಯಕರು ಚುನಾವಣೆಗೆ ತಂತ್ರ- ಪ್ರತಿತಂತ್ರಗಳ ಲೆಕ್ಕಾಚಾರವನ್ನು ಆರಂಭಿಸಿದ್ದಾರೆ. ನಿನ್ನೆಯಿನ್ನೂ ಮಾಜಿ ಶಾಸಕ ಹೆಚ್. ವಿಶ್ವನಾಥ್ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ ಇಂದು ಅದೇ ಪಕ್ಷದ ಹಿರಿಯ ಮುಖಂಡ ಜಿ. ಟಿ. ದೇವೇಗೌಡ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ನಾಯಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ನೀವು ಎಲ್ಲಿಯ ಸಮಾಜವಾದಿ? ನೀವು ದೇವಸ್ಥಾನಕ್ಕೆ ಹೋಗಿಲ್ವಾ? ದೇವರ ಬಗ್ಗೆ ಮೂಢನಂಬಿಕೆ ಅಂತೀರಾ. ಅಲ್ಲಾ ಸ್ವಾಮಿ ನೀವೂ ದೇಗುಲಕ್ಕೆ ಹೋಗಿಲ್ವಾ. ಮೂಕಾಂಬಿಕಾ ದೇವಸ್ಥಾನದಲ್ಲಿ ಶರ್ಟೂ, ಎಲ್ಲಾ ಬಿಚ್ಚಿದ್ದೀರಿ. ಬರೀ ಮೈಯಲ್ಲಿ ಹೋಮ ಹವನ ಮಾಡಿಸಿದ್ದೀರಿ. ತಿರುಪತಿಗೆ ಹೋಗಿಲ್ವಾ ನೀವು? ಕೇಳಿದರೆ ದೇವರನ್ನು ನಂಬಲ್ಲಾ ಅಂತೀರಲ್ಲ ಸ್ವಾಮಿ ಸಿದ್ದರಾಮಯ್ಯನವರೇ ಎಂದು ವಾಗ್ದಾಳಿ ನಡೆಸಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಮ್ಮ ಗೆಲುವಿಗೆ ಶ್ರಮಿಸಿದ ಯಾರನ್ನು ಬೆಳೆಸಿದ್ದೀರಿ? ನಿಮ್ಮ ಸಮಾಜದ ಯುವ ಮುಖಂಡರನ್ನೆ ನೀವು ಹೊಸಕಿ ಹಾಕಿದಿರಿ. ಕ್ಷೇತ್ರದಲ್ಲಿ 80 ಸಾವಿರ ಒಕ್ಕಲಿಗ, 40 ಸಾವಿರ ಕುರುಬ ,30 ಸಾವಿರ ಲಿಂಗಾಯತ,50 ಸಾವಿರ ದಲಿತ ಮತದಾರರಿದ್ದಾರೆ. ಯಾವ ಸಮುದಾಯಕ್ಕೆ ಏನು ಉಪಯೋಗ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ದಸರಾ ಮಹೋತ್ಸವದ ಉದ್ಘಾಟನೆ ಸಂದರ್ಭದಲ್ಲಿ ಪ್ರೊ.ನಿಸಾರ್ ಅಹಮದ್ ಅವರ ಜತೆಯಲ್ಲಿ ಕಾಲಿನ ಮೇಲೆ ಕಾಲು ಹಾಕಿ ಕೂರುತ್ತೀರಿ. ಚಾಮುಂಡೇಶ್ವರಿ ಕ್ಷೇತ್ರದೊಂದಿಗೆ ನೀವು ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದೀರಿ.? ನಿಮ್ಮ ಗೆಲುವಿಗೆ ಶ್ರಮಿಸಿದ ಮುಖಂಡರಿಗೆ ಯಾವ ಅಧಿಕಾರ ಕೊಟ್ಟಿದ್ದೀರಿ. ಅವರಿಗೆ ಯಾವ ನಿಗಮ ಮಂಡಳಿ ಕೊಟ್ಟಿದ್ದೀರಿ. ಕನಿಷ್ಠ ಪಕ್ಷ ಅವರನ್ನು ಕರೆದು ಮಾತನಾಡಿಸಿದ್ದೀರ ?
ನೀವು 1983ರಿಂದಲೂ ಶಾಸಕರಾಗಿದ್ದೀರಿ. ಆದರೆ ಇಷ್ಟು ಅವಧಿಯಲ್ಲಿ ಎಷ್ಟು ಕಾಲೇಜು ಕೊಟ್ಟಿದ್ದೀರಿ, ಎಷ್ಟು ಶಾಲೆ ಕೊಟ್ಟಿದ್ದೀರಿ ? ಬೇರೆ ಸಮುದಾಯಗಳು ಬೇಡ ಕುರುಬ ಸಮುದಾಯದ ಬೀದಿಗಳಿಗೆ ರಸ್ತೆ ರಿಪೇರಿ ಮಾಡಿಸಿದ್ದೀರಾ ಎಂದು ಪ್ರಶ್ನೆಗಳ ಮಳೆ ಸುರಿಸಿದರು
ನಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಗಾಳಿ ಸುದ್ದಿ ಹಬ್ಬಿಸಲಾಗುತ್ತಿದೆ. ಇದು ಶುದ್ದ ಸುಳ್ಳು, ನಾನು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಸೋನಿಯ ಗಾಂಧಿ ವಿದೇಶಿ ಮಹಿಳೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜರೆದಿದ್ದರು. ಈಗ ಅವರ ಕೃಪಾಕಟಾಕ್ಷದಲ್ಲೇ ಆಡಳಿತ ನಡೆಸುತ್ತಿದ್ದಾರೆ. ಇದು ನಗು ಬರಬೇಕಾದ ವಿಷಯ ಎಂದು ಸಿಎಂ ಗೆ ಟಾಂಗ್ ನೀಡಿದ್ರು.