ಜಯಲಲಿತಾ ಗುಣವಾಗಲೆಂದು ಚಾಮುಂಡಿಗೆ ಹರಕೆ ಸಲ್ಲಿಕೆ
ತಾಯಿ ಚಾಮುಂಡೇಶ್ವರಿ ಜಯಲಲಿತಾ ಅವರ ಆರಾಧ್ಯದೈವವಾಗಿದ್ದಾರೆ. ಸಂತೋಷ ಹೆಚ್ಚಾದಾಗ, ಸಂಕಷ್ಟ ಬಂದಾಗ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವ ಪರಿಪಾಠ ಜಯಲಲಿತಾ ಪಾಲಿಸಿಕೊಂಡು ಬಂದಿದ್ದಾರೆ.
ಮೈಸೂರು, ಅಕ್ಟೋಬರ್ 22 : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅನಾರೋಗ್ಯದಲ್ಲಿ ಬಳಲುತ್ತಿರುವುದರಿಂದ ಅತಿಶೀಘ್ರದಲ್ಲಿ ಆರೋಗ್ಯ ಸುಧಾರಿಸಲಿ ಎಂದು ಆರಾಧ್ಯ ದೈವ ಆದಿದೇವತೆ ಚಾಮುಂಡೇಶ್ವರಿಗೆ ಹರಕೆ ಸಲ್ಲಿಸಲಾಗಿದೆ.
ಶುಕ್ರವಾರ ನಗರದ ಚಾಮುಂಡಿಬೆಟ್ಟದ ಚಾಮುಂಡಿ ದೇವಾಲಯದ ಒಳಾಂಗಣದಲ್ಲಿನ ಆಂಜನೇಯ ಹಾಗೂ ಗಣಪತಿ ವಿಗ್ರಹಗಳಿಗೆ ಚಿನ್ನದ ಲೇಪನದ ಮುಖವಾಡವನ್ನು ಜಯಲಲಿತಾ ಅವರು ತಮ್ಮ ಕಾರ್ಯಕರ್ತರ ಮೂಲಕ ಕಾಣಿಕೆಯಾಗಿ ನೀಡಿದ್ದಾರೆ. ಈ ಕಾಣಿಕೆಯನ್ನು ದೇವಾಲಯದ ಸಿಬ್ಬಂದಿ ದೇವರಿಗೆ ಅರ್ಪಿಸಿದ್ದಾರೆ.

ಆಂಜನೇಯ ವಿಗ್ರಹಕ್ಕೆ ಮುಖವಾಡ ಸಹಿತ ಚಿನ್ನದ ಕವಚ, ಗಣಪತಿ ವಿಗ್ರಹಕ್ಕೆ ಚಿನ್ನದ ಕವಚ ಮತ್ತು ಆಯುಧಗಳನ್ನು ಅರ್ಪಿಸಲಾಗಿದೆ. ತಾಯಿ ಚಾಮುಂಡೇಶ್ವರಿ ಜಯಲಲಿತಾ ಅವರ ಆರಾಧ್ಯದೈವವಾಗಿದ್ದಾರೆ. ಸಂತೋಷ ಹೆಚ್ಚಾದಾಗ, ಸಂಕಷ್ಟ ಬಂದಾಗ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವ ಪರಿಪಾಠ ಜಯಲಲಿತಾ ಪಾಲಿಸಿಕೊಂಡು ಬಂದಿದ್ದಾರೆ.
ಕಳೆದ ಒಂದು ತಿಂಗಳಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಸಿಎಂ ಜಯಲಲಿತಾ ಅವರು ಚಾಮುಂಡೇಶ್ವರಿಯ ಭಕ್ತರಾಗಿದ್ದಾರೆ. ಆರೋಗ್ಯ ಸುಧಾರಿಸಲಿ ಎಂದು ಈ ಕಾಣಿಕೆಯನ್ನು ದೇವರಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಈ ನಡುವೆ, ಜಯಲಲಿತಾ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬ ವರದಿಗಳು ಬಂದಿವೆ. ಕೈಸನ್ನೆಗಳ ಮೂಲಕ ಸೂಚನೆಗಳನ್ನು ನೀಡುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಅಕ್ಟೋಬರ್ 27ರ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದೆ ಎಂಬ ಮಾತುಗಳೂ ಕೇಳಿಬಂದಿವೆ.












Click it and Unblock the Notifications