ಜಾವಗಲ್ ಶ್ರೀನಾಥ್ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ
ಮೈಸೂರು, ಅಕ್ಟೋಬರ್. 29: ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಜಾವಗಲ್ ಶ್ರೀನಾಥ್ ಅವರ ತಂದೆ ಚಂದ್ರಶೇಖರ್ (85) ಅಕ್ಟೋಬರ್ 28 ರಂದು ಮುಂಜಾನೆ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಚಂದ್ರಶೇಖರ್ ಅವರು ಪತ್ನಿ ಭಾಗ್ಯಲಕ್ಷ್ಮಿ, ಮಕ್ಕಳಾದ ಜಾವಗಲ್ ಶ್ರೀನಾಥ್, ಶ್ರೀನಿವಾಸ್, ಶ್ರೀಲಕ್ಷ್ಮಿ ಮತ್ತು ಶ್ರೀಲತಾ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಕಳೆದ 7-8 ವರ್ಷಗಳಿಂದ ಅಲ್ಜೈಮರ್ ಎಂಬ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಚಂದ್ರಶೇಖರ್ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆಗೆ ದೇಹ ಸ್ಪಂದಿಸದ ಹಿನ್ನೆಲೆಯಲ್ಲಿ ಮೈಸೂರಿನ ಕುವೆಂಪುನಗರದ ನಿವಾಸಕ್ಕೆ ಕರೆದುಕೊಂಡು ಬರಲಾಗಿತ್ತು.

ಮೃತರ ಅಂತ್ಯಕ್ರಿಯೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚಂದ್ರ ಘಾಟ್ ನಲ್ಲಿ ಸಮುದಾಯದ ವಿಧಿವಿಧಾನಗಳ ಮೂಲಕ ನೆರವೇರಿತು. ಈ ವೇಳೆ ಮಾಜಿ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಪದಾಧಿಕಾರಿಗಳು ಸೇರಿದಂತೆ ಗಣ್ಯರು ಹಲವರು ಹಾಜರಿದ್ದು, ಕುಟಂಬಕ್ಕೆ ಸಾಂತ್ವನ ಹೇಳಿದರು.
ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಚಂದ್ರಶೇಖರ್ ಅವರು ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.
ಜಾವಗಲ್ ನ ಶಾಂತಿ ಕಲಾ ಸೇವಾ ಸಂಘದ ವತಿಯಿಂದ ಅನೇಕ ನಾಟಕಗಳಲ್ಲೂ ನಟಿಸಿದ್ದರು. ಇವರು ನಟಿಸಿದ 'ನಾಗರಿಕ' ಎಂಬ ಹೆಸರಿನ ನಾಟಕ ಜನರಿಂದ ಮೆಚ್ಚುಗೆ ಗಳಿಸಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.












Click it and Unblock the Notifications