ನಮ್ಮ ಮನೆ ಮೇಲೆ ಯಾವಾಗಲಾದರೂ ಐಟಿ ದಾಳಿ ನಡೆಯಲಿ
ಯಾವಾಗ ಬೇಕಾದರೂ ನಮ್ಮ ಮೇಲೆ ಐಟಿ ದಾಳಿ ನಡೆಸಲಿ ನಮಗೆ ಯಾವುದೇ ಭಯವಿಲ್ಲ,ಕಪ್ಪುಹಣವುಳ್ಳವರಿಗೆ ಆದಾಯ ತೆರಿಗೆ ಅಧಿಕಾರಿಗಳ ಭಯವಿರುತ್ತದೆ. ನಾವು ಕಪ್ಪು ಹಣ ಹೊಂದಿಯೂ ಇಲ್ಲ, ನಮಗೆ ಯಾವುದೇ ಭಯವೂ ಇಲ್ಲ ಎಂದು ಎಚ್.ಡಿ. ದೇವೇಗೌಡ ತಿಳಿಸಿದರು.
ನಂಜನಗೂಡು/ಮೈಸೂರು, ಡಿಸೆಂಬರ್ 22: ರಾಷ್ಟ್ರದಲ್ಲಿ ಅಪನಗದೀಕರಣ ಮಾಡಿರುವ ಹಿನ್ನೆಲೆ ಪ್ರಧಾನಿ ಮೋದಿ ಕಾರ್ಯವೈಖರಿ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದರು. ನಂತರ ಮೈಸೂರಿನಲ್ಲಿ ನಮ್ಮ ಮನೆ ಮೇಲೆ ಯಾವಾಗ ಬೇಕಾದರೂ ಐಟಿ ದಾಳಿ ಮಾಡಲಿ ನನಗೆ ಭಯವಿಲ್ಲ ಎಂದರು.
ಮೈಸೂರಿನಲ್ಲಿ ನಡೆಯಲಿರುವ ಜೆಡಿಎಸ್ ಸದಸ್ಯರ ನೋಂದಣಿ ಅಭಿಯಾನದ ಹಿನ್ನೆಲೆ ಗುರುವಾರ ಬೆಳಗ್ಗೆ ನಂಜನಗೂಡಿನ ಶ್ರೀಕಂಠೇಶ್ವರ ದರ್ಶನ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಈ ರೀತಿ ಹದಗೆಡಲು ಮೋದಿ ಹೊಸ ನೀತಿಯೇ ಕಾರಣ. ದೇವರ ದರ್ಶನಕ್ಕೆ ಬಂದು ಆರತಿ ತಟ್ಟೆಗೆ ಹಣವನ್ನು ಹಾಕದ ಸ್ಥಿತಿ ಆಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ನಂಜನಗೂಡಿನಲ್ಲಿ ನಡೆಯಲಿರುವ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಕೇಶವಮೂರ್ತಿ ಕಣಕ್ಕಿಳಿಯಲಿದ್ದಾರೆ. ಯಾವುದೇ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಂತರ ಮೈಸೂರಿಗೆ ತೆರಳಿ ಅಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವಾಗ ಬೇಕಾದರೂ ನಮ್ಮ ಮೇಲೆ ಐಟಿ ದಾಳಿ ನಡೆಸಲಿ ನಮಗೆ ಯಾವುದೇ ಭಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು. ಕಪ್ಪುಹಣವುಳ್ಳವರಿಗೆ ಆದಾಯ ತೆರಿಗೆ ಅಧಿಕಾರಿಗಳ ಭಯವಿರುತ್ತದೆ. ನಾವು ಕಪ್ಪು ಹಣ ಹೊಂದಿಯೂ ಇಲ್ಲ, ನಮಗೆ ಯಾವುದೇ ಭಯವೂ ಇಲ್ಲ ಎಂದು ಹೇಳಿದರು.
ನೋಟ್ ಬ್ಯಾನ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. ಮೊದಲೇ ಯೋಜನೆ ಹಾಕಿ ಇದನ್ನು ಜಾರಿಗೆ ತಂದಿದ್ದರೆ ಜನರಿಗೆ ಸಮಸ್ಯೆ ಆಗುತ್ತಿರಲಿಲ್ಲ ಎಂದರು.
ಮಾಜಿ ಸಚಿವ ವಿ.ಶ್ರೀನಿವಾಸ್ಪ್ರಸಾದ್ ಅವರು ಸ್ವತಂತ್ರವಾಗಿ ಸ್ಪರ್ಧಿಸಿದ್ದರೆ ಜೆಡಿಎಸ್ ಬೆಂಬಲ ನೀಡುತ್ತಿತ್ತು. ಆದರೆ ಅವರು ಒಂದು ಪಕ್ಷದಿಂದ ನಿಲ್ಲುತ್ತಿರುವುದರಿಂದ ಬೆಂಬಲ ನೀಡುವುದಿಲ್ಲ. ಶ್ರೀನಿವಾಸಪ್ರಸಾದ್ ವಿರುದ್ದ ನಮ್ಮ ಪಕ್ಷದ ಅಭ್ಯರ್ಥಿ ನಿಲ್ಲಿಸಬೇಕೋ ಬೇಡವೊ ಎಂಬುದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸುತ್ತೇವೆ ಎಂದು ಹೇಳಿದರು.












Click it and Unblock the Notifications