ಐಟಿ ದಾಳಿ, ವರದಿ ಇನ್ನು ಕೈಸೇರಿಲ್ಲವೆಂದ ಸಿದ್ದರಾಮಯ್ಯ
ಮೈಸೂರು, ಜನವರಿ 25: ಸಚಿವ ರಮೇಶ್ ಜಾರಕಿ ಹೊಳಿ ಹಾಗೂ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಮನೆಗಳ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ನೀಡಿರುವ ವರದಿ ಇನ್ನೂ ನನ್ನ ಕೈ ಸೇರಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ತಮ್ಮ ನಿವಾಸದ ಎದುರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಐಟಿ ದಾಳಿಯ ಕುರಿತಾದ ಯಾವುದೇ ಮಾಹಿತಿಗಳೂ ನನ್ನ ಬಳಿ ಇಲ್ಲ. ಈ ಕುರಿತು ಮಾಧ್ಯಮಗಳಲ್ಲಿ ಮಾತ್ರ ವರದಿಯಾಗಿದೆ. ಐಟಿ ಅಧಿಕಾರಿಗಳೇನು ನನಗೆ ವರದಿ ಕೊಡುವುದಿಲ್ಲ. ಆದರೂ ವರದಿ ತರಿಸಿಕೊಂಡು ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.[ಐಟಿ ದಾಳಿ: ಕಾಂಗ್ರೆಸ್ ಮುಖಂಡರ ಮನೆಯಲ್ಲಿ ಸಿಕ್ಕ ಒಟ್ಟು ನಗದೆಷ್ಟು?]
ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಂತ ಪ್ರಶ್ನೆಗೆ ವಿಸ್ತರಣೆ ಸದ್ಯಕ್ಕಿಲ್ಲ ಎಂದರು. ನಂಜನಗೂಡು ವಿಧಾನಸಭಾ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾರನ್ನು ಕಣಕ್ಕಿಳಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗೇನೂ ಕೊರತೆಯಿಲ್ಲ. ಆದರೂ ಚುನಾವಣೆ ದಿನಾಂಕ ಘೋಷಣೆಯಾಗುವವರೆಗೂ ಅಭ್ಯರ್ಥಿಯ ಹೆಸರನ್ನು ಪ್ರಕಟಿಸುವುದಿಲ್ಲ ಎಂದು ತಿಳಿಸಿದರು. ಬಿ.ಎಸ್ ಯಡಿಯೂರಪ್ಪ ಮತ್ತು ಕೆ.ಎಸ್ ಈಶ್ವರಪ್ಪನವರು ಸುಖಾಸುಮ್ಮನೆ ರಾಜ್ಯ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದರು.
ಮಸೀದಿಯಲ್ಲಿ ರಾಜಕೀಯ ಹಿನ್ನೆಲೆ ಸಿಎಂಗೆ ಮನವಿ
ಮೈಸೂರಿನ ಮಸೀದಿಯೊಂದರ ಚುನಾವಣೆ ನಡೆಸಿದ್ದು, ಮಸೀದಿಯಲ್ಲೂ ರಾಜಕೀಯ ನಡೆಯುತ್ತಿದೆ ಎಂದು ಆರೋಪಿಸಿ ಮುಸ್ಲಿಂ ಸಮುದಾಯದ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು. ಮೈಸೂರಿನ ಮಂಡಿಮೊಹಲ್ಲಾದ ಸಾಡೇ ರಸ್ತೆಯಲ್ಲಿರುವ ದರ್ಗಾ ಇ ಮಸ್ಜಿದ್ ಗೆ ಇತ್ತೀಚೆಗೆ ಚುನಾವಣೆ ನಡೆಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.[ಐಟಿ ದಾಳಿ: ರಮೇಶ್ ಜಾರಕಿಹೊಳಿ ರಾಜೀನಾಮೆ ಸಾಧ್ಯತೆ]
ಮಸೀದಿಗೆ ಇದೇ ಮೊದಲ ಬಾರಿ ಚುನಾವಣೆ ನಡೆಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು ಮಸೀದಿಯಲ್ಲೂ ರಾಜಕೀಯ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ಬಗ್ಗೆ ಸಚಿವ ತನ್ವೀರ್ ಸೇಠ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಅವರು ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದರು. ಮನವಿ ಸ್ವೀಕರಿಸಿದ ಸಿದ್ದರಾಮಯ್ಯ ಪರಿಶೀಲಿಸುವುದಾಗಿ ತಿಳಿಸಿದರು.