ಸಿನಿಮಾ ನಟರ ಬಗ್ಗೆ ವೈಯಕ್ತಿಕ ಟೀಕೆ ಬೇಡ:ಸಾ.ರಾ.ಮಹೇಶ್ ಕಿವಿಮಾತು
ಮೈಸೂರು, ಮಾರ್ಚ್ 22: ದರ್ಶನ್, ಯಶ್ ವಿಚಾರದಲ್ಲಿ ನಮ್ಮ ಪಕ್ಷದ ಮುಖಂಡರು ವೈಯಕ್ತಿಕವಾಗಿ ಮಾತನಾಡಿರುವುದನ್ನು ಜೆಡಿಎಸ್ ಪಕ್ಷ ಗಂಭೀರವಾಗಿ ಪರಿಗಣಿಸುತ್ತದೆ. ಇನ್ನು ಮುಂದೆ ಯಾರೂ ನಟರನ್ನ ವೈಯುಕ್ತಿಕವಾಗಿ ಟೀಕಿಸಬೇಡಿ ಎಂದು ಸಾ.ರಾ. ಮಹೇಶ್ ಕಿವಿಮಾತು ತಿಳಿಸಿದರು.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಮೈಸೂರಿನಲ್ಲಿ ಮಾತನಾಡಿದ ಅವರು, ಯಾವುದೇ ಪಕ್ಷದ ಬೆಂಬಲಿತರ ಬಗ್ಗೆ ಯಾರೂ ವೈಯಕ್ತಿಕವಾಗಿ ಮಾತನಾಡಬಾರದು. ಅವರು ಮಾತನಾಡಿರುವ ವಿಚಾರದ ಕುರಿತು ಪಕ್ಷದ ಮುಖಂಡರೊಂದಿಗೆ ಚರ್ಚಿಸುತ್ತೇವೆ ಎಂದರು.
ಮೈತ್ರಿ ಅಭ್ಯರ್ಥಿ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದರೆ, ಚುನಾವಣೆ ನಂತರ ಅದಕ್ಕೆ ನೀವು ಉತ್ತರ ಕೊಡಬೇಕಾಗುತ್ತದೆ. ವಿಧಾನಸಭಾ ಚುನಾವಣೆ ಮತ ಪ್ರಮಾಣದ ಆಧಾರದ ಮೇಲೆ ಈ ಚುನಾವಣೆ ಮತಗಳನ್ನು ನೋಡುತ್ತೇವೆ ಎಂದು ಜೆಡಿಎಸ್ ವರಿಷ್ಠರು ಸೂಚಿಸಿದ್ದಾರೆ.

ಕೈ ನಾಯಕರು ಸುಮಲತಾಗೆ ಬೆಂಬಲ ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿ, ಈಗಾಗಲೇ ಕಾಂಗ್ರೆಸ್ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಸಿದ್ದರಾಮಯ್ಯ ಕೂಡ ಫೋನ್ ಮೂಲಕ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಹಳೆ ಮೈಸೂರು ಪ್ರಾಂತ್ಯದಲ್ಲಿ ಈ ಸಮಸ್ಯೆ ಬಹಳ ವರ್ಷಗಳಿಂದ ಇದೆ. ಹೀಗಾಗಿ ಇದು ನಂಬಿಕೆ ಮೇಲೆ ನಡೆಯುವ ಚುನಾವಣೆ. ಕೆ.ಆರ್.ನಗರದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ಇದೆ ಎಂದರು.
ಮೈಸೂರಿನಲ್ಲಿ ಸಿ.ಎಚ್.ವಿಜಯಶಂಕರ್, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಸಿದ್ದರಾಮಯ್ಯ, ಜಿ.ಟಿ.ದೇವೇಗೌಡ ಕೂಡ ಒಟ್ಟಾಗಿ ಬಹಿರಂಗ ಸಭೆಯಲ್ಲಿ ಭಾಗವಹಿಸುತ್ತಾರೆ. ಮೈತ್ರಿ ಧರ್ಮ ಪಾಲಿಸದ ಕಾರ್ಯಕರ್ತರಿಗೆ ಮೊದಲು ವಾರ್ನಿಂಗ್.ನಂತರ ಕ್ರಮ ನಿಶ್ಚಿತ. ಕಾಂಗ್ರೆಸ್ ಕೂಡ ಇದೇ ನಿಲುವು ಪಾಲಿಸುತ್ತಿದೆ. ನಾವು ಇದನ್ನೇ ಪಾಲಿಸುತ್ತೇವೆ. ಈ ನಿಯಮ ಇದ್ದರೆ ಮಾತ್ರ ಚುನಾವಣೆಯಲ್ಲಿ ಫಲಿತಾಂಶ ಪಡೆಯಲು ಸಾಧ್ಯ ಎಂದು ಹೇಳಿದರು.












Click it and Unblock the Notifications