ಅಂಬಾರಿ ಹೊತ್ತ ಆನೆಗಳ ಇತಿಹಾಸ: ಜಯಮಾರ್ತಾಂಡನೇ ಮೊದಲಿಗ
Recommended Video

ಮೈಸೂರು, ಅಕ್ಟೋಬರ್.09: ಮೈಸೂರು ದಸರಾ ಅಂದರೆ ನೆನಪಾಗುವುದು ವೈಭವೋಪೇತ ಅಂಬಾರಿ ಮತ್ತು ದಸರೆಯ ಆನೆಗಳ ವೈಭವ. ಜಂಬೂಸವಾರಿಯ ವೈಭವವನ್ನು ಕಣ್ತುಂಬಿಕೊಳ್ಳುವುದೇ ಒಂದು ಚೆಂದ.
ರಾಜ ಕೃಷ್ಣದೇವರಾಯ ಒಡೆಯರ್ ಕಾಲದಲ್ಲಿ ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಸೆರೆಸಿಕ್ಕ ಜಯಮಾರ್ತಾಂಡ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತ ಮೊದಲ ಆನೆಯಾಗಿದೆ.
ಒಡೆಯರ್ ಕಾಲದಲ್ಲಿ ಪ್ರಾರಂಭವಾದ ವಿಜಯದಶಮಿಯಿಂದ ಅಂದಾಜು 45 ವರ್ಷಗಳ ಕಾಲ ಚಿನ್ನದ ಅಂಬಾರಿಯನ್ನು ಹೊತ್ತ ಹಿನ್ನೆಲೆಯಲ್ಲಿ ಜಯಮಾರ್ತಾಂಡ ಮಹಾರಾಜರ ಪ್ರೀತಿಗೆ ಪಾತ್ರವಾಗಿತ್ತು. ಆದ್ದರಿಂದ ಅರಮನೆಯ ಮಹಾದ್ವಾರಗಳಲ್ಲೊಂದಾದ ಜಯಮಾರ್ತಾಂಡ ದ್ವಾರಕ್ಕೆ ಈ ಆನೆ ಹೆಸರು ಇಡಲಾಗಿದೆ.
ಉಲ್ಲೇಖದ ಪ್ರಕಾರ 1902 ರಿಂದ ಅಂಬಾರಿ ಹೊತ್ತ ಆನೆಗಳೆಂದರೆ ವಿಜಯಬಹದ್ದೂರ್, ನಂಜುಂಡ, ರಾಮಪ್ರಸಾದ್, ಮೋತಿಲಾಲ್ ರಾಜ್ ಎನ್ನುತ್ತದೆ ಇತಿಹಾಸ. ಇದಾದ ಬಳಿಕ ಅಂಬಾರಿ ಹೊತ್ತ ಆನೆಗಳ ಇತಿಹಾಸ ಇಂತಿದೆ...

ಐರಾವತ
1935ರಲ್ಲಿ ಐರಾವತ ಆನೆಯನ್ನು ಹಾಲಿವುಡ್ ಚಿತ್ರ 'ದಿ ಎಲಿಫೆಂಟ್ ಬಾಯ್'ಗೆ ಬಳಸಿಕೊಳ್ಳಲಾಯಿತು. ಆನೆಯ ಮಾವುತನೇ ಚಿತ್ರದ ನಾಯಕ. ಚಿತ್ರ ಜಗತ್ತಿನಾದ್ಯಂತ ಪ್ರದರ್ಶನಗೊಂಡಿತು. ಆ ಮಾವುತ ಮತ್ಯಾರು ಅಲ್ಲ ಮೈಸೂರು ಸಾಬು.

ಬಿಳಿಗಿರಿ
ಇದು ಅಂಬಾರಿ ಹೊತ್ತ ಆನೆಗಳಲ್ಲಿ ಅತ್ಯಂತ ದೈತ್ಯ ಆನೆಯಾಗಿದ್ದು, ಇದರ ಎತ್ತರ 10.5 ಅಡಿ. ಸುಮಾರು 7 ಸಾವಿರ ಕೆ.ಜಿ. ಇತ್ತಂತೆ. 1975ರಲ್ಲಿ ಇದು ಮರಣ ಹೊಂದಿತು. ಇದರ ಮಾವುತ ಗೌಸ್ ಅಂತ. ಬಿಳಿಗಿರಿ ಹೆಗ್ಗಳಿಕೆ ಏನೆಂದರೆ ಇದೇ ಮಹಾರಾಜರನ್ನು ಹೊತ್ತೊಯ್ದ ಕೊನೆಯ ಆನೆ.

ರಾಜೇಂದ್ರ
ಗಂಧದ ಗುಡಿ ಚಿತ್ರದಲ್ಲಿ ಡಾ. ರಾಜ್ ಆನೆಯ ದಂತದ ಮೇಲೆ ಕುಳಿತು ಹಾಡುವ ಹಾಡು ಯಾರಿಗೆ ತಾನೇ ನೆನಪಿಲ್ಲ. ಈ ಆನೆಯ ಹೆಸರು ರಾಜೇಂದ್ರ. ಚಿತ್ರದುದ್ದಕ್ಕೂ ಇದು ಭಾಗವಹಿಸಿದೆ. ಡಾ. ರಾಜ್ಗೆ ಅಚ್ಚುಮೆಚ್ಚಿನ ಆನೆ ಕೂಡ.

ದ್ರೋಣ
ದ್ರೋಣ 10.25 ಎತ್ತರದ ಆನೆ. ಇದು ಸುಮಾರು 6,400 ಕೆ.ಜಿ ತೂಕ ಇತ್ತು. 18 ವರ್ಷ ಸತತವಾಗಿ ಅಂಬಾರಿಗೆ ಬೆನ್ನುಕೊಟ್ಟ ಖ್ಯಾತಿ. ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ದಿ ಸೋರ್ಡ್ ಆಫ್ ಟಿಪ್ಪುಸುಲ್ತಾನ್'ನ ಟಿಪ್ಪು ಪಾತ್ರಧಾರಿಯನ್ನು ಹೊತ್ತೂಯ್ದದ್ದೂ ಇದೇ ದ್ರೋಣ. 1998ರಲ್ಲಿ ಹೈ ಟೆನ್ಶನ್ ವಿದ್ಯುತ್ ತಗುಲಿ ಸಾವನ್ನಪ್ಪಿತು.

ಅರ್ಜುನ
ದ್ರೋಣನ ನಂತರ ಅರ್ಜುನ ಒಮ್ಮೆ ಅಂಬಾರಿ ಹೊತ್ತಿದ್ದ. ಆದರೆ ನಂತರದ ದಿನಗಳಲ್ಲಿ ಮಾವುತನನ್ನು ಕೊಂದ ಆರೋಪದಲ್ಲಿ ಅರ್ಜುನನನ್ನು ಉತ್ಸವದಿಂದ ಹೊರಗುಳಿಸಲಾಯಿತು.

ಬಲರಾಮ
ಅರ್ಜುನನ ನಂತರ ಬಲರಾಮನಿಗೆ ಅಂಬಾರಿ ಹೊರಿಸಲಾಯಿತು. ಬಲರಾಮ ಶಾಂತ ಸ್ವಭಾವದ ಆನೆ ಆಗಿದ್ದು, 1987ರಲ್ಲಿ ಕಟ್ಟೆಪುರದಲ್ಲಿ ಬಲರಾಮ, ಗಜೇಂದ್ರ, ವಿಕ್ರಮ, ಹರ್ಷ, ಪ್ರಶಾಂತ ಈ ಐದೂ ಆನೆಗಳನ್ನು ಹಿಡಿದಿದ್ದರು. ಹನ್ನೊಂದು ವರ್ಷಗಳ ಕಾಲ ಅಂಬಾರಿ ಹೊತ್ತ ಬಲರಾಮನಿಗೆ ಕಳೆದ ವರ್ಷ ನಿವೃತ್ತಿ ದೊರೆತಿದೆ.

ಅರ್ಜುನ
ದ್ರೋಣನ ಮರಣದ ನಂತರ ಒಮ್ಮೆ ಅಂಬಾರಿ ಹೊತ್ತಿದ್ದ ಅರ್ಜುನನ ಗುಣದ ಬಗ್ಗೆ ಸಾಕಷ್ಟು ಟೀಕೆಗಳು ಬಂದಿತ್ತು. ಆದರೂ ಬಲರಾಮನಿಗೆ ವಯಸ್ಸಾದ ಕಾರಣ ಕಳೆದ 3 ವರ್ಷದಿಂದ ಅಂಬಾರಿ ಹೊರುವ ಜವಾಬ್ದಾರಿ ಅರ್ಜುನನಿಗೆ ನೀಡಲಾಗಿದೆ. ಅರ್ಜುನ ಬರೋಬ್ಬರಿ 5,250 ಕೆಜಿ ತೂಕವನ್ನು ಹೊಂದುವ ಮೂಲಕ ತಂಡದ ಎಲ್ಲಾ ಆನೆಗಳಿಗಿಂತಲೂ ಬಲಿಷ್ಠನಾಗಿದ್ದಾನೆ.












Click it and Unblock the Notifications