ಜ. 1 ರಿಂದ ರಾಜ್ಯಾದ್ಯಂತ ಆರಂಭವಾಗಲಿದೆ ಇಂದಿರಾ ಕ್ಯಾಂಟೀನ್
Recommended Video

ಮೈಸೂರು, ಅಕ್ಟೋಬರ್ 4 : ಹಸಿದು ಬಂದವರ ಒಡಲಿಗೆ ಅನ್ನ ನೀಡುವ, ಅದರಲ್ಲೂ ಕೂಲಿ ಕಾರ್ಮಿಕರು, ಬಡವರು, ಶ್ರಮಿಕರ ಹಸಿವು ನೀಗಿಸುವ 'ಇಂದಿರಾ ಕ್ಯಾಂಟೀನ್' ಅನ್ನು ಜ.1ರಿಂದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.
ಚಾಮುಂಡೇಶ್ವರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶಯದಲ್ಲಿ ಹೂಟಗಳ್ಳಿ ಸಂತೆ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ಈಗಾಗಲೇ 200 ಕಡೆ ಇಂದಿರಾ ಕ್ಯಾಂಟೀನ್ ಕಾರ್ಯ ನಿರ್ವಹಿಸುತ್ತಿದ್ದು, ಅದರ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಹಿಂದಿನ ಯಾವ ಸರ್ಕಾರಗಳಿಗೂ ಈ ಚಿಂತನೆಯೇ ಇರಲಿಲ್ಲ. ಹೆಸರಿಗೆ ಮಾತ್ರ ಬಡವರ ಪರ ಸರ್ಕಾರ ಎನ್ನುತ್ತಿದ್ದವು. ನಮ್ಮ ಸರ್ಕಾರ ಜಾರಿಗೊಳಿಸಿದ ಯಾವ ಯೋಜನೆಗಳೂ ಹಿಂದೆ ಇದ್ದವರಿಗೆ ಹೊಳೆದೇ ಇರಲಿಲ್ಲ. ರಾಜ್ಯದ 4 ಕೋಟಿ ಜನತೆಗೆ ತಲಾ 7 ಕೆಜಿ ಉಚಿತ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ ದೇಶದ ಏಕೈಕ ಸರ್ಕಾರ ನಮ್ಮದು ಎಂದು ಹೇಳಿದರು.
ಜನರ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಯೋಜನೆಗಳನ್ನು ಒಂದೇ ಯೋಜನೆಯಡಿ ತರಲಾಗುತ್ತಿದೆ. ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ದಾರರಿಗೂ ಈ ಯೋಜನೆಯ ಪ್ರಯೋಜನ ಸಿಗಲಿದೆ. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನಮ್ಮದು ಜಾತ್ಯತೀತ ಸರ್ಕಾರ
ವಿಶ್ವಕರ್ಮ ಅಭಿವೃದ್ಧಿ ನಿಗಮ, ಬೋವಿ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು ನಮ್ಮ ಸರ್ಕಾರ. ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಅಕ್ಕಮಹಾದೇವಿ ಅವರ ಹೆಸರಿಟ್ಟಿದ್ದು ನಾವು. ಬಸವ ಕಲ್ಯಾಣದಲ್ಲಿ 300 ಕೋಟಿ ರೂ. ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಿಸುತ್ತಿದ್ದೇವೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಿದ್ದೇವೆ. ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸರ್ಕಾರರವೇ ಆಚರಿಸುತ್ತಿದೆ. ಇದೆಲ್ಲವೂ ನಮ್ಮದು ಜಾತ್ಯತೀತ ಸರ್ಕಾರ ಎಂಬುದಕ್ಕೆ ಸಾಕ್ಷಿ ಎಂದರು.

ನುಡಿದಂತೇ ನಡೆದಿದ್ದೇವೆ
ನಮ್ಮದು ಬರೀ ಮಾತನಾಡುವ ಸರ್ಕಾರವಲ್ಲ. ಕೆಲಸ ಮಾಡುವ ಸರ್ಕಾರ. ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳ ಪೈಕಿ 155 ಭರವಸೆಗಳನ್ನು ಈಡೇರಿಸಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ನುಡಿದಂತೆಯೇ ನಡೆದಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು. 'ಯಾವುದೇ ಸರ್ಕಾರ ಹೀಗೆ ಭರವಸೆ ಈಡೇರಿಸಲು ಯತ್ನಿಸುವುದಿಲ್ಲ. ಆದರೆ ನಮ್ಮ ಸರ್ಕಾರ ಪತ್ರಿ ವರ್ಷ ಪ್ರಣಾಳಿಕೆಯನ್ನು ಮುಂದಿಟ್ಟುಕೊಂಡೇ ಬಜೆಟ್ ಸಿದ್ಧಪಡಿಸುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ 5 ವರ್ಷದಲ್ಲಿ ಒಟ್ಟು 86 ಸಾವಿರ ಕೋಟಿರೂ. ವಿನಿಯೋಗಿಸಲಾಗಿದೆ. ಈ ವರ್ಷವೊಂದರಲ್ಲೇ 27,300 ಕೋಟಿ ರೂ. ಮೀಸಲಿಡಲಾಗಿದೆ' ಎಂದು ಸರ್ಕಾರದ ಕಾರ್ಯ ವೈಖರಿಯನ್ನು ವಿವರಿಸಿದರು.

ಬಿಜೆಪಿ ಸರ್ಕಾರ ಏನು ಮಾಡಿದೆ?
ಆದರೆ, ಹಿಂದಿನ ಬಿಜೆಪಿ ಸರ್ಕಾರ ತನ್ನ ಅಧಿಕಾರವಧಿಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗಾಗಿ ಕೇವಲ 21 ಸಾವಿರ ಕೋಟಿ ರೂ. ಖರ್ಚು ಮಾಡಿತ್ತು. ಅದೇನೋ ಆ ಪಕ್ಷಕ್ಕೆ ಈಗ ಈ ಸಮುದಾಯಗಳ ಬಗ್ಗೆ ದಿಢೀರ್ ಕಾಳಜಿ ಬಂದುಬಿಟ್ಟಿದೆ. ಚುನಾವಣೆ ವರ್ಷವಾದ್ದರಿಂದ ದಲಿತರ ಮನೆಗೆ ಹೋಗಿ ತಿಂಡಿ ತಿನ್ನುವ ನಾಟಕವಾಡುತ್ತಿದ್ದಾರೆ. ಹೋಗಲಿ ಆ ಮನೆಯಲ್ಲಿ ತಿಂಡಿ ತಿನ್ನುತ್ತಿದ್ದಾರಾ ಎಂದರೆ ಅದೂ ಇಲ್ಲ. ಅಲ್ಲಿಯೂ ಹೊಟೇಲ್ ನಿಂದ ತಿಂಡಿ ತರಿಸಿ ತಿನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ಸನ್ನೇ ಬೆಂಬಲಿಸಬೇಕು ಎಂದು ಸಭಿಕರಲ್ಲಿ ಮನವಿ ಮಾಡಿದ ಮುಖ್ಯಮಂತ್ರಿಗಳು, ಭ್ರಷ್ಟಾಚಾರದ ಆರೋಪ ಹೊತ್ತು ಜೈಲಿಗೆ ಹೋಗಿ ಬಂದಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ನನ್ನ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಲು ನೈತಿಕ ಹಕ್ಕಿಲ್ಲ. ನಮ್ಮದು ಕಳಂಕರಹಿತ ಸರ್ಕಾರ ಎಂದು ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದಿಂದಲೇ ನನ್ನ ಸ್ಪರ್ಧೆ
ಚಾಮುಂಡೇಶ್ವರಿ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತೇನೆ ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಬಾರಿಗೆ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಇದು ನನ್ನ ಕೊನೆ ಚುನಾವಣೆ. ನನ್ನ ಕೊನೆ ಚುನಾವಣೆ ಚಾಮುಂಡೇಶ್ವರಿ ಕ್ಷೇತ್ರದಿಂದಲೇ. ನನಗೆ ರಾಜಕೀಯವಾಗಿ ಮರು ಹುಟ್ಟು ನೀಡಿದ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. 2018 ರ ಸಾರ್ವತ್ರಿಕ ಚುನಾವಣೆಯಲ್ಲಿ ಇಲ್ಲಿಂದಲೇ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ. ನಾನು ಸಿ ಎಂ ಆಗಿ ನಿಮ್ಮ ಮುಂದೆ ನಿಲ್ಲಲು ನಿಮ್ಮೆಲ್ಲರ ಆಶಿರ್ವಾದ ಅಗತ್ಯ. ನಿಮ್ಮೆಲ್ಲರ ಆಶೀರ್ವಾದ ಇದ್ದರೆ ಪಿಎಂ ಕೂಡ ಆಗ್ತೇನೆ ಎಂದು ಹೇಳಿದರು. ಜೆ ಡಿಎಸ್ ನವರು ಅವಕಾಶವಾದಿಗಳು. ಅವರು ಟೈಮ್ ಗಾಗಿ ಕಾಯುತ್ತಿದ್ದಾರೆ. ಒಂದು ವೇಳೆ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಯಾರೊಂದಿಗಾದರೂ ಮೈತ್ರಿ ಮಾಡಿಕೊಳ್ಳಲು ವೇಟ್ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಆಸೆ ಈಡೇರಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.












Click it and Unblock the Notifications