ಮೈಸೂರು ಪಾಲಿಕೆಯಲ್ಲಿ ಮೂಲೆಗುಂಪಾದ ಶಕ್ತಿಮಾನ್!
ಮೈಸೂರು, ಏಪ್ರಿಲ್ 29:ಮೈಸೂರು ನಗರ ವ್ಯಾಪ್ತಿಯಲ್ಲಿ ಒಣಗಿದ ಮರಗಳ ಕಟಾವಿಗೆ ಗುಜರಾತಿನಿಂದ ತಂದಿರುವ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರ ಚಾಲಕರಿಲ್ಲದೆ ನಿಷ್ಪ್ರಯೋಜಕವಾಗಿದೆ.
ನಗರ ವ್ಯಾಪ್ತಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಒಣಗಿದ ಮರಗಳ ರೆಂಬೆ-ಕೊಂಬೆಗಳ ಕಟಾವು ಮಾಡಲು ನಗರಪಾಲಿಕೆ ಫೆಬ್ರವರಿಯಲ್ಲಿ ಟೆಂಡರ್ ಮೂಲಕ ಶಕ್ತಿಮಾನ್ ಕಂಪೆನಿ ವತಿಯಿಂದ 21.60 ಲಕ್ಷ ರೂ.ನೀಡಿ ಯಂತ್ರ ತರಿಸಿದೆ.
ಈ ಯಂತ್ರವು ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ್ದು ಬಹುಪಯೋಗಿಯಾಗಿದೆ. ಇದು 30 ಅಡಿಗಳ ಎತ್ತರದಲ್ಲಿರುವ ಒಣಗಿದ ಮರವನ್ನು ಕಟಾವು ಮಾಡಲಿದೆ. ಇದರಿಂದ ಅನುಕೂಲವೂ ಆಗಲಿದೆ ಎಂದು ನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದರು. ಆದರೆ ಈ 30 ಅಡಿಗಳ ಎತ್ತರದಲ್ಲಿರುವ ಮರವನ್ನು ಕಟಾವು ಮಾಡಬೇಕಾಗಿರುವುದರಿಂದ ಇದರ ಚಾಲನೆ ಮಾಡಲು ಚಾಲಕರು ಭಯಪಡುತ್ತಿದ್ದಾರೆ.

ಈಗಾಗಲೇ ಶಕ್ತಿಮಾನ್ ಕಂಪನಿಯವರು ಮೈಸೂರು ಶಾಖೆಯವರೆಗೆ ತರಬೇತಿ ನೀಡಿದ್ದಾರೆ. ಒಂದಿಬ್ಬರು ಚಾಲಕರನ್ನು ಗುರುತಿಸಲಾಗಿದೆ ಅವರು ತರಬೇತಿ ಪಡೆಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರೂ, ಇಷ್ಟು ದಿನ ಈ ಯಂತ್ರ ಮೂಲೆಗುಂಪಾಗಿರುವುದುಕ್ಕೆ ಕಾರಣ ಏನೆಂಬುದು ತಿಳಿಯುತ್ತಿಲ್ಲ.
ಇದು ಒಂದೆಡೆಯ ವಾದವಾದರೆ ಮತ್ತೊಂದೆಡೆ ಒಣ ಮರ ಕಡಿಯಲು ಮುಂದಾದರೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸುತ್ತಾರೆ. ಪರಿಸರವಾದಿಗಳ ಸಮನ್ವಯ ಮಾಡಿಕೊಂಡು ಒಣಗಿದ ಮರ ತೆರವು ಮಾಡುವ ಕೆಲಸ ನಡೆದಿದೆ. ಮರ ಕಟಾವು ಮಾಡುವ ಯಂತ್ರ ಶಕ್ತಿಮಾನ್ ಗೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಚಾಲಕರನ್ನು ನೇಮಕ ಮಾಡುತ್ತೇವೆ ಎನ್ನುತ್ತಾರೆ ಮಹಾಪೌರರಾದ ಪುಷ್ಪಲತಾ ಜಗನ್ನಾಥ್.












Click it and Unblock the Notifications