ಮಿಠಾಯಿ ತೋರಿಸಿದವರ ಕಡೆ ಜೆಡಿಎಸ್: ಅದು ಬಿಜೆಪಿ-ಕಾಂಗ್ರೆಸ್ಸಿನ ಕೂಸು
ಮೈಸೂರು, ಡಿ 16: "ಜಾತ್ಯಾತೀತ ಜನತಾದಳಕ್ಕೆ ಸ್ವಂತಿಕೆ ಅನ್ನೋದು ಇಲ್ಲ. ಅದು ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಸಿನ ಕೂಸು. ಮಿಠಾಯಿ ತೋರಿಸಿದವರ ಕಡೆ ಹೋಗುತ್ತೆ"ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಲೇವಡಿ ಮಾಡಿದ್ದಾರೆ.
"ನಮ್ಮ ಪ್ರಧಾನಿಯವರು ಲೋಕಸಭೆಗೆ ಪ್ರವೇಶಿಸುವಾಗ ನಮಸ್ಕರಿಸುತ್ತಾರೆ. ಅಂತಹ ಪ್ರಜಾಪ್ರಭುತ್ವದ ಸದನದ ಬಾಗಿಲನ್ನು ಬೂಟು ಕಾಲಿನಲ್ಲಿ ಇಲ್ಲಿ ಒದೆಯುತ್ತಾರೆ. ಬಹಳ ವಿಷಾದನೀಯ ಘಟನೆಯದು"ಎಂದು ವಿಶ್ವನಾಥ್ ಬೇಸರ ವ್ಯಕ್ತ ಪಡಿಸಿದರು.
ವಿಧಾನ ಪರಿಷತ್ತಿನಲ್ಲಿ ಅವಿಶ್ವಾಸ ಗೊತ್ತುವಳಿಗೆ ಜೆಡಿಎಸ್ ಬೆಂಬಲ ನೀಡುವ ಬಗ್ಗೆ ಮಾತನಾಡಿದ ವಿಶ್ವನಾಥ್,"ಅವರಾದರೂ ಏನು ಮಾಡೋಕಾಗುತ್ತೆ. ಎಲ್ಲಿ ಮಿಠಾಯಿ ಸಿಗುತ್ತೋ ಅಲ್ಲಿಗೆ ಜೆಡಿಎಸ್ ನವರು ಹೋಗುತ್ತಾರೆ"ಎಂದು ವ್ಯಂಗ್ಯವಾಡಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ದ ಕಿಡಿಕಾರುತ್ತಲೇ ಇರುವ ವಿಶ್ವನಾಥ್, "ಸೋಮನಹಳ್ಳಿ ಮುದುಕಿ ಹುಂಜ ಇಟ್ಕೊಂಡು ನನ್ನ ಕೋಳಿಯಿಂದಲೇ ಬೆಳಗಾಗೋದು ಅಂದ್ಕೊಂಡ್ರೆ ಅದು ಮೂರ್ಖತನ" ಎಂದು ಸಿದ್ದರಾಮಯ್ಯನವರನ್ನು ಕುಟುಕಿದ್ದರು.
ಸದಾ ಒಂದಲ್ಲಾ ಒಂದು ಹೇಳಿಕೆಯನ್ನು ನೀಡುತ್ತಾ ಆಡಳಿತ ಪಕ್ಷ ಬಿಜೆಪಿಗೂ ಹಲವು ಬಾರಿ ವಿಶ್ವನಾಥ್ ಮುಜುಗರ ತಂದೊಡ್ಡಿದ್ದಾರೆ. ಕಳೆದ ಹುಣಸೂರು ಉಪಚುನಾವಣೆಯಲ್ಲಿ ನನ್ನ ಸೋಲಿಗೆ ಸಿ.ಪಿ.ಯೋಗೇಶ್ವರ್ ಮತ್ತು ಎನ್.ಆರ್. ಸಂತೋಷ್ ಕಾರಣ ಎಂದಿದ್ದರು.
ಮೇಲ್ಮನೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸದಸ್ಯರು ನೂಕಾಟ, ತಳ್ಳಾಟ ನಡೆಸಿ ಕೈ-ಕೈ ಮಿಲಾಯಿಸಿದ ಘಟನೆ ಮಂಗಳವಾರ (ಡಿ 15) ನಡೆದಿತ್ತು. ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರು ಸದನದ ಸಭಾಂಗಣ ಪ್ರವೇಶಿಸದಂತೆ ಬಿಜೆಪಿ ಸದಸ್ಯರು ಬಾಗಿಲನ್ನು ಬಂದ್ ಮಾಡಿದ್ದರು.












Click it and Unblock the Notifications