ಅಕ್ರಮ ಮರಳು ದಂಧೆ, ಕಪಿಲೆ, ನುಗು ಜಲಾಶಯಕ್ಕೆ ಆತಂಕ
ಮೈಸೂರು,ಮಾರ್ಚ್,03: ಒಂದೆಡೆ ಮರಳಿಗೆ ಅಭಾವ ಸೃಷ್ಠಿಯಾಗಿ ಬೇಡಿಕೆ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ನಂಜನಗೂಡು ತಾಲೂಕಿನ ಕಾಡಂಚಿನ ಕಪಿಲ ನದಿ ಮತ್ತು ಹೆಚ್.ಡಿ.ಕೋಟೆ ನುಗು ಜಲಾಶಯದ ಹಿನ್ನೀರಿನ ಒಡಲು ಬಗೆದು ತೆಗೆದ ಮರಳನ್ನು ಅಕ್ರಮವಾಗಿ ಲಾರಿಗಳಲ್ಲಿ ಕೇರಳಕ್ಕೆ ಸಾಗಿಸುವ ಕಾರ್ಯಗಳು ಸದ್ದಿಲ್ಲದೆ ಸಾಗುತ್ತಿವೆ.
ನಂಜನಗೂಡು ತಾಲೂಕಿನ ಕಪಿಲ ನದಿ ಪಾತ್ರದಲ್ಲಿ ಮರಳು ಹುಡುಕುವ ಕಾರ್ಯ ಬಿಡುವಿಲ್ಲದೆ ನಡೆಯುತ್ತಿದೆ. ನದಿ ಪಾತ್ರದಲ್ಲಿ ಅಡ್ಡಾಡುತ್ತಾ ಅಕ್ರಮವಾಗಿ ಮರಳನ್ನು ಸಂಗ್ರಹಿಸಿ ಲಾರಿಯಲ್ಲಿ ಕೇರಳದತ್ತ ಸಾಗಿಸಲಾಗುತ್ತಿದೆ. ನದಿ ಹರಿಯುವ ಕಾಡಂಚಿನ ಗಡಿಭಾಗದಲ್ಲಿ ಮರಳು ಸಂಗ್ರಹಣೆ ನಡೆಯುತ್ತಿದ್ದರೂ ಯಾರೂ ಕೂಡ ತಲೆಕೆಡಿಸಿಕೊಳ್ಳದಿರುವುದು ಈ ದಂಧೆಗೆ ಪ್ರಮುಖ ಕಾರಣವಾಗಿದೆ.[ಅಕ್ರಮ ಮರಳು ದಂಧೆ ವಿರುದ್ಧ ಏಕಾಂಗಿಯಾಗಿ ದನಿ ಎತ್ತಿದ ರೈತ]

ಅಕ್ರಮ ಮರಳಿನ ದಂಧೆಕೋರರು ಎಗ್ಗಿಲ್ಲದೆ ಹೆಚ್.ಡಿ.ಕೋಟೆ ಮಾರ್ಗವಾಗಿ ಕೇರಳಕ್ಕೆ ಮರಳು ಸಾಗಿಸುತ್ತಿದ್ದರೂ ಹೆಡಿಯಾಲ ಗ್ರಾಮದಲ್ಲಿರುವ ಉಪ ಪೊಲೀಸ್ ಠಾಣೆಯಲ್ಲಿ ಅದನ್ನು ತಡೆಯುವ ಕೆಲಸವಾಗುತ್ತಿಲ್ಲ. ದಿನನಿತ್ಯ ಐದರಿಂದ ಆರು ಮರಳು ತುಂಬಿದ ಲಾರಿಗಳು ನುಗು ಜಲಾಶಯ ಹಿಂಬದಿಯ ರಸ್ತೆಯಿಂದ ಸಂಚರಿಸುತ್ತವೆ.
ಇನ್ನು ನುಗು ಜಲಾಶಯದ ಹಿನ್ನೀರಿನಿಂದಲೇ ಮರಳು ಎತ್ತುವ ಕೆಲಸವೂ ನಡೆಯುತ್ತಿದ್ದು, ಇಲ್ಲಿ ಮರಳು ಸಂಗ್ರಹಣೆಯಲ್ಲಿ ತೊಡಗಿರುವ ಕೂಲಿ ಕಾರ್ಮಿಕರು ಕಾಣಸಿಗುತ್ತಾರೆ. ಅಲ್ಲಲ್ಲಿ ಮರಳು ಗಣಿಗಾರಿಕೆ ಮೇಲೆ ದಾಳಿ ಎಂಬಂತಹ ಸುದ್ದಿಗಳು ಇಲ್ಲಿ ಮಾಮೂಲಿಯಾಗಿದ್ದು, ಒಂದು ಕಡೆ ದಾಳಿ ನಡೆಯುತ್ತಿದ್ದರೆ ಮತ್ತೊಂದೆಡೆ ಅಕ್ರಮ ಮರಳು ದಂಧೆಕೋರರು ತಮ್ಮ ಕೈಚಳಕ ಪ್ರದರ್ಶಿಸುತ್ತಲೇ ಇದ್ದಾರೆ.[ಕಾವೇರಿ ನದಿಯೊಳಗೆ 15 ಕೊಪ್ಪರಿಕೆ ಪ್ರತ್ಯಕ್ಷ!]
ಇನ್ನೊಂದು ದುರಂತದ ವಿಚಾರ ಎಂದರೆ ಮೈಸೂರು ವ್ಯಾಪ್ತಿಯಲ್ಲಿ ಮರಳಿಗಾಗಿ ಬೊಬ್ಬೆ ಹೊಡೆಯುತ್ತಿದ್ದರೆ ಇಲ್ಲಿನ ಮರಳೆಲ್ಲವೂ ಕೇರಳ ಪಾಲಾಗುತ್ತಿದೆ. ಗಡಿಭಾಗದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದೆ ಹೋದರೆ ಕಪಿಲೆ ಮತ್ತು ನುಗು ಜಲಾಶಯದ ಒಡಲು ಬರಿದಾಗುವುದರಲ್ಲಿ ಸಂಶಯವಿಲ್ಲ.












Click it and Unblock the Notifications