ಮೇ.23ರಂದು ಶುಭ ಸುದ್ದಿಯೊಂದಿಗೆ ಭೇಟಿಯಾಗಲಿದ್ದೇನೆ:ವಿಜಯಶಂಕರ್ ವಿಶ್ವಾಸ
ಮೈಸೂರು, ಏಪ್ರಿಲ್ 21: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಹಿಂದಿಗಿಂತ ಈ ಬಾರಿ ಹೆಚ್ಚು ಮತದಾನವಾಗಿದ್ದು, ಇದು ನನ್ನ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಪ್ರದೇಶಗಳಿಗಿಂತ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿನ ಮತದಾನವಾಗಿರುವುದರಿಂದ ಅನುಕೂಲವಾಗಿದೆ. ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಕೈಜೋಡಿಸಿದ್ದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಎರಡು ಪಕ್ಷಗಳಲ್ಲಿಯೂ ಹಲವಾರು ಆಕಾಂಕ್ಷಿಗಳಿದ್ದರೂ ಅಭ್ಯರ್ಥಿ ಘೋಷಣೆ ನಂತರ ಎರಡೂ ಪಕ್ಷದ ಕಾರ್ಯಕರ್ತರು ಭಿನ್ನಾಭಿಪ್ರಾಯವಿಲ್ಲದೇ ಕೆಲಸ ಮಾಡಿದ್ದಾರೆ ಎಂದು ಅವರು ಸ್ಮರಿಸಿದರು.
ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ನರಸಿಂಹರಾಜ ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಹೆಚ್ಚಿನ ಮತಗಳು ಬರಲಿವೆ. ಬಿಜೆಪಿಗೆ ಹೆಚ್ಚು ಅನುಕೂಲಕರ ಎನ್ನುವ ಕೃಷ್ಣರಾಜ ಹಾಗೂ ಚಾಮರಾಜ ಕ್ಷೇತ್ರಗಳಲ್ಲಿ ಮತದಾನ ಕಡಿಮೆಯಾಗಿರುವುದು ನನಗೆ ಪೂರಕವಾಗಿದೆ. ಇದು ನನ್ನ 6ನೇ ಲೋಕಸಭಾ ಚುನಾವಣೆಯಾಗಿದ್ದು, ಗ್ರಾಮೀಣ ಭಾಗದ ಮತದಾರರ ನಾಡಿ ಮಿಡಿತವನ್ನು ಚೆನ್ನಾಗಿ ಅರಿತಿದ್ದೇನೆ. ಮೇ 23ರಂದು ಶುಭ ಸುದ್ದಿಯೊಂದಿಗೆ ಭೇಟಿಯಾಗಲಿದ್ದೇನೆ ಎಂದು ವಿಶ್ವಾಸದಿಂದ ಹೇಳಿದರು.

ಮೈತ್ರಿಯಲ್ಲಿ ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ವಿಜಯಶಂಕರ್, ಯಾವ ಉದ್ದೇಶಕ್ಕೆ ಮೈತ್ರಿ ಮಾಡಿಕೊಂಡಿದ್ದೇವೋ, ಅದು ಈಡೇರಿದೆ. ಕೆಲವು ಭಾಗದಲ್ಲಿ ಅಸಮಾಧಾನ ಇರಬಹುದು, ಆದ್ರೆ ಅದು ನಗಣ್ಯವಾದದ್ದು. ನಮ್ಮ ಮೈತ್ರಿ ಬಹಳ ಅದ್ಭುತವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದೆ. ನನಗೆ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ. ಆದ್ರೆ ಎಷ್ಟು ಮತಗಳ ಅಂತರದಲ್ಲಿ ಗೆಲ್ಲುತ್ತೇನೆ ಅನ್ನುವುದು ಜನರಿಗೆ ಬಿಟ್ಟಿದ್ದೇನೆ ಎಂದರು.












Click it and Unblock the Notifications