ಮಂತ್ರಿಯಾಗುವ ನನ್ನ ಸ್ನೇಹಿತರಿಗೆ ಶುಭಾಶಯ ಕೋರುತ್ತೇನೆ: ಎಚ್.ವಿಶ್ವನಾಥ್
ಮೈಸೂರು, ಫೆಬ್ರವರಿ 05: ನಾಳೆಯೇ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಈ ಕಾರ್ಯಕ್ರಮಕ್ಕೆ ನಾನು ಹೋಗುತ್ತೇನೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಮಾಜಿ ಸಚಿವ ಹೆಚ್.ವಿಶ್ವನಾಥ್, ನಾನು ನಾಳಿನ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೋಗಿ ನನ್ನೆಲ್ಲಾ ಸ್ನೇಹಿತರಿಗೆ ಶುಭಾಶಯ ಕೋರುತ್ತೇನೆ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಜೊತೆ ನಾನು ಮಾತನಾಡಿದ್ದೇನೆ, ಸ್ವಲ್ಪ ಸಮಯ ತೆಗೆದುಕೊಳ್ಳಿ ಅಂತ ಹೇಳಿದ್ದಾರೆ. ಅವರ ಮಾತಿಗೆ ನಾವು ಕಾಯುತ್ತೇವೆ ಎಂದು ತಿಳಿಸಿದರು.

ನಾವು ಅಭಿವೃದ್ಧಿ ವಿಚಾರದಲ್ಲಿ ಅವಸರ ಮಾಡುತ್ತೇವೆ, ಆದರೆ ನಾವು ಮಂತ್ರಿಯಾಗೋ ವಿಚಾರದಲ್ಲಿ ಅವಸರ ಇಲ್ಲ. ಮುಖ್ಯಮಂತ್ರಿಗಳಿಗೆ ಸ್ವಲ್ಪ ತೊಡಕುಗಳಿರುತ್ತವೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಚ್.ವಿಶ್ವನಾಥ್, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಸಿ.ಪಿ.ಯೋಗೇಶ್ವರ್ ತ್ಯಾಗ ಏನೂ ಇಲ್ಲ. ಅವರಿಗೆ ಯಾಕೇ ಮಂತ್ರಿ ಸ್ಥಾನ ನೀಡಬೇಕು ಎಂದು ಪ್ರಶ್ನಿಸಿದರು.
ಸಿ.ಪಿ.ಯೋಗೇಶ್ವರ್ ಗೆ ಸಚಿವ ಸ್ಥಾನ ಕೊಡುವುದನ್ನು ಬಿಜೆಪಿ ಹಿರಿಯರೇ ಒಪ್ಪುತ್ತಿಲ್ಲ. ಯೋಗೇಶ್ವರ್ ಸಚಿವ ಸ್ಥಾನ ಕೊಡುವ ಅಗತ್ಯವಿಲ್ಲ.
ನಮ್ಮನ್ನೆಲ್ಲ ಒಟ್ಟುಗೂಡಿಸುವಲ್ಲಿ ಯೋಗೇಶ್ವರ್ ಪಾತ್ರ ಏನಿಲ್ಲ ಎಂದು ಹೇಳಿದರು.
ನಮ್ಮ ಸ್ನೇಹಿತರುಗಳು ನಾಳೆ ಮಂತ್ರಿಗಳಾಗುತ್ತಿದ್ದಾರೆ. ಅವರಿಗೆಲ್ಲ ಶುಭಾಶಯ ತಿಳಿಸುತ್ತೇನೆ. ಹೊಸ ಕಾರ್ಯಕ್ರಮಗಳು ರಾಜ್ಯದಲ್ಲಿ ಬರಲಿ. ಬಡವರ, ರೈತರ, ಕಾರ್ಮಿಕರ ಪರ ಕೆಲಸ ಮಾಡಿ ಅಭಿವೃದ್ಧಿ ಪಡಿಸಲಿ ಎಂದು ಹಾರೈಸಿದರು.












Click it and Unblock the Notifications