ಸೋಮಾರಿಸಿದ್ಧನ ರೀತಿ ನಾನು ಜಾತಿರಾಜಕಾರಣ ಮಾಡಲ್ಲ: ಸಂಸದ ಪ್ರತಾಪ ಸಿಂಹ ಗುಡುಗು
ಮೈಸೂರು, ಡಿಸೆಂಬರ್ 27: ನಾನು ಸೋಮಾರಿಸಿದ್ದನ ರೀತಿ ಸುಮ್ಮನೆ ಕುಳಿತುಕೊಂಡು ಜಾತಿ ರಾಜಕಾರಣ ಮಾಡಿಲ್ಲ. ಅಭಿವೃದ್ಧಿ ರಾಜಕಾರಣ ಮಾಡುತ್ತಿದ್ದೇನೆ. ಹೀಗಾಗಿ ನಾನೇ ಟಾರ್ಗೆಟ್ ಎಂದು ಪ್ರತಾಪ್ ಸಿಂಹ ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದರು.
ಮೈಸೂರಿನ ಹುಣಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಅವರೇ ಅಭಿವೃದ್ಧಿ ಇಟ್ಟುಕೊಂಡು ರಾಜಕಾರಣ ಮಾಡಿ. ಈ ರೀತಿ ದ್ವೇಷದ ರಾಜಕಾರಣ ಮಾಡಬೇಡಿ. ಸಿದ್ದರಾಮಯ್ಯ ಅವರು ಅಭದ್ರತೆಯಿಂದ ನನ್ನ ಮೇಲೆ ವೈಯಕ್ತಿಕ ದಾಳಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ 28 ಜನ ಸಂಸದರು ಇದ್ದಾರೆ. ಆದರೆ ಪ್ರತಾಪ್ ಸಿಂಹನ ಮಾತ್ರ ಟಾರ್ಗೆಟ್ ಮಾಡುತ್ತಾರೆ ಏಕೆ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು 40 ವರ್ಷದಲ್ಲಿ ಏನು ಮಾಡಿದ್ದಾರೆ ಹೇಳಲಿ. ಬಡವರ ಮಕ್ಕಳು ರಾಜಕಾರಣ ಮಾಡಬಾರದಾ? ಕಾಂಗ್ರೆಸ್ ಗೆ ನನ್ನ ಮೇಲೆ ದ್ವೇಷ ಯಾಕೆ? ನಾನೆಂದು ನೀನು ಗೌಡ, ಕುರುಬು, ನೀನು ಲಿಂಗಾಯತ ಅಂತಾ ನಾನು ಅವರ ರೀತಿ ಜಾತಿ ರಾಜಕಾರಣ ಮಾಡಿಲ್ಲ. ಹಾಗಾಗಿ ನಿರಂತರವಾಗಿ ನನ್ನ ಮೇಲೆ ದಾಳಿ ನಡೆಯುತ್ತಿದೆ. ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತ ಕೂಡಲೇ ಸಿದ್ದರಾಮಯ್ಯ ಕುರ್ಚಿ ಅಲ್ಲುಗಾಡುತ್ತದೆ. ಹೀಗಾಗಿ ನನ್ನ ಮೇಲೆ ಸತತ ಅಕ್ರಮಣ ಸಾಗಿದೆ ಎಂದು ದೂರಿದರು.
ಸಂಸತ್ ಘಟನೆ ನಂತರ ಕಾಂಗ್ರೆಸ್ ನನ್ನ ಮೇಲೆ ವೈಯಕ್ತಿಕ ದಾಳಿ ಜಾಸ್ತಿ ಮಾಡಿದ್ದಾರೆ. ಕಾರ್ಯಕರ್ತನಿಂದ ಹಿಡಿದು ಸಿಎಂ ಪುತ್ರನವರೆಗೂ ಎಲ್ಲರೂ ನನ್ನ ಟಾರ್ಗೆಟ್ ಮಾಡಿದ್ದಾರೆ. ನನ್ನನ್ನು ಭಯೋತ್ಪಾದಕ ಅಂತಾ ಬಿಂಬಿಸುವ ಪ್ರಯತ್ನವನ್ನು ಕಾಂಗ್ರೆಸಿಗರು ಮಾಡಿದರು. ಮುಸ್ಲಿಂರೆಲ್ಲಾ ಭಯೋತ್ಪಾದಕರು ಅನ್ನೋ ರೀತಿ ನನಗೆ ಮುಸ್ಲಿಂ ವೇಷ ತೊಡಿಸಿ ಕೈಯಲ್ಲಿ ಬಾಂಬ್ ಕೊಟ್ಟಿದ್ದರು. ಸಿದ್ದರಾಮಯ್ಯ ಅವರೇ ನಿಮಗೆ ನಿಜವಾಗಲೂ ತಾಕತ್ತು, ಧಮ್ ಇದ್ದರೆ ಅಭಿವೃದ್ಧಿ ಇಟ್ಟುಕೊಂಡು ರಾಜಕಾರಣ ಮಾಡಿ ಎಂದು ಕಿಡಿಕಾರಿದರು.
''ನಾನು ಸಂಸತ್ ವಿಚಾರದಲ್ಲಿ ಸ್ಪಷ್ಟನೆ ಕೊಟ್ಟ ಬೆನ್ನಲ್ಲೆ ಪ್ರತಾಪ್ ಸಿಂಹ ಸಹೋದರ ಮರಗಳ್ಳ ಅಂತಾ ಕಾಂಗ್ರೆಸ್ ನವರು ಪೋಸ್ಟ್ ಮಾಡಿದ್ದರು. ನನ್ನ ತಮ್ಮನ ಹೆಸರು ಎ್ಐಅರ್ ನಲ್ಲಿ ಇಲ್ಲ. ಆದರೂ ಅವನ ಹೆಸರು ಯಾಕೆ ತರುತ್ತಿದ್ದಾರೆ. ನನ್ನ ತಮ್ಮಂದಿರು, ತಂಗಿ ಯಾರು ಅಂತಾನೂ ಮೈಸೂರು ಜನ ನೋಡಿಲ್ಲ. ಚುನಾವಣೆ ವೇಳೆ ನನ್ನ ತಮ್ಮಂದಿರು ಒಂದು ತಿಂಗಳು ಬಂದು ಹೋಗುತ್ತಾರೆ ಅಷ್ಟೇ. ನನ್ನ ಸಹೋದರರು ಕೃಷಿ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಬೇಕಾದರೆ ನಿಮ್ಮದೆ ಪೊಲೀಸ್ ಇಲಾಖೆ, ನಿಮ್ಮದೆ ಸರಕಾರ ಇದೆ ತನಿಖೆ ಮಾಡಿ ಎಂದು ಸವಾಲು ಹಾಕಿದರು.
10 ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಭಾಗಿ: 1800ಕ್ಕೂ ಹೆಚ್ಚು ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಹುಣಸೂರಿನಲ್ಲಿ ಮಂಗಳವಾರ ಹನುಮ ಜಯಂತಿ ಶೋಭಾಯಾತ್ರೆ ಅದ್ಧೂರಿಯಾಗಿ ನೆರವೇರಿತು. ಇಡೀ ನಗರ ಕೇಸರಿಮಯವಾಗಿದ್ದುಘಿ, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಎಸ್ಪಿ ಸೀಮಾ ಲಾಟ್ಕರ್, ಅಡಿಷನಲ್ ಎಸ್.ಪಿ.ಡಾ.ನಂದಿನಿ ನೇತೃತ್ವದ ಪೊಲೀಸ್ ತಂಡ ನಿಗಾ ವಹಿಸಿದ್ದರಿಂದ ಮೆರವಣಿಗೆ ಶಾಂತಿಯುತವಾಗಿ ನೆರವೇರಿತು. ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಹನುಮ ಭಕ್ತರು ಪಾಲ್ಗೊಂಡಿದ್ದರು.
ಹನುಮಂತ್ಯುತ್ಸವ ಸಮಿತಿಯು ಎಷ್ಟೇ ಮನವಿ ಮಾಡಿಕೊಂಡಿದ್ದರೂ, ತಾಲೂಕು ಆಡಳಿತ ಸೂಚಿಸಿದ್ದರೂ ಮೆರವಣಿಗೆಯಲ್ಲಿ ಸಂಸದ ಪ್ರತಾಪಸಿಂಹ, ಶಾಸಕ ಹರೀಶ್ಗೌಡರನ್ನು ಅವರ ಅಭಿಮಾನಿಗಳು ಹೆಗಲ ಮೇಲೆ ಹೊತ್ತು ಕುಣಿದು ಕುಪ್ಪಳಿಸಿ, ಜೈಕಾರ ಹಾಕಿದರು. ಮಾಜಿ ಶಾಸಕ ಮಂಜುನಾಥ್ ಅನಾರೋಗ್ಯ ನಿಮಿತ್ತ ಪುಷ್ಪಾರ್ಚನೆ ಮಾಡಿ ಮೆರವಣಿಗೆಯಲ್ಲಿ ಭಾಗವಹಿಸದೆ ತೆರಳಿದರು.












Click it and Unblock the Notifications