ಚುನಾವಣೆಗೆ ಸ್ಪರ್ಧಿಸೋಲ್ಲ, ಆದರೆ, ಸಿದ್ದರಾಮಯ್ಯ ಸೋಲಿಸುವೆ!
Recommended Video

ಮೈಸೂರು, ನವೆಂಬರ್ 16: ಮತ್ತೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದರೆ ಸಂಸ್ಕಾರ ರಹಿತ ಸಿದ್ದರಾಮಯ್ಯನನ್ನು ಸೋಲಿಸುವುದಷ್ಟೆ ನನ್ನ ಮುಖ್ಯ ಉದ್ದೇಶ ಎಂದು ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಸವಾಲ್ ಎಸೆದಿದ್ದಾರೆ.
ಅವರ ಅಭಿಮಾನಿಗಳು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮನವೊಲಿಸುವ ಉದ್ದೇಶದಿಂದ ನಂಜನಗೂಡಿನ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು ನಾನು ಉಪಚುನಾವಣೆಯಲ್ಲಿ ನನ್ನ ಸ್ವಾಭಿಮಾನವನ್ನು ಪಣಕ್ಕಿಟ್ಟು ಸ್ಪರ್ಧಿಸಿದ್ದೆ. ಆದರೆ ಜನ ಸ್ವಾಭಿಮಾನ ಬೇಡವೆಂದರು. ಹೀಗಾಗಿ ಸೋಲು ಅನುಭವಿಸುವಂತಾಯಿತು. ಆದ್ದರಿಂದ ನಾನು ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.
ವಿದ್ಯಾವಂತರೇ ಅಧಿಕವಾಗಿರುವ ಬೂತ್ ನಲ್ಲಿಯೂ ನನಗೆ ಕಡಿಮೆ ಮತ ಬಂದಿತ್ತು, ಕಾರಣ ಅವರು ಕೂಡ ಮತವನ್ನು ಮಾರಿಕೊಂಡಿದ್ದರು. ಇಂತಹ ಮತದಾರರು ಇರುವ ಕ್ಷೇತ್ರದಲ್ಲಿ ನಾನೇಕೆ ಸ್ಪರ್ಧೆ ಮಾಡಬೇಕೆಂಬ ನೋವು ಕಾಡುತ್ತಿದೆ. ನಾನು 24 ಗಂಟೆಗಳ ಕಾಲವೂ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದು ನೀವು ನಿಲ್ಲಿಸಿದ ಅಭ್ಯರ್ಥಿಯನ್ನು ಗೆಲ್ಲಿಸಲು ಪಣತೊಡುತ್ತೇನೆ ಎಂದರು.

ಕಳೆದ ಚುನಾವಣೆಯಲ್ಲಿ ಗೆದ್ದಿದ್ದು ಭ್ರಷ್ಟಾಚಾರ!
ಕಳೆದ ಉಪಚುನಾವಣೆಯಲ್ಲಿ ಸೋಲು ನನಗಾಗಿದ್ದರೂ ಗೆಲುವು ಮಾತ್ರ ಭ್ರಷ್ಟಚಾರದ್ದಾಗಿದೆ ಎಂದು ವಿಷಾದಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಅವರು ಆತ ಒಬ್ಬ ಸಂಸ್ಕಾರ ರಹಿತ ವ್ಯಕ್ತಿ. ಹಿಂದಿನ ಮುಖ್ಯಮಂತ್ರಿಗಳ್ಯಾರೂ ಈ ರೀತಿಯ ನಡವಳಿಕೆ ಪ್ರದರ್ಶಿಸುತ್ತಿರಲಿಲ್ಲ. ನನ್ನ ಸೋಲಿಸುವ ಸಲುವಾಗಿ ಉಪ ಚುನಾವಣೆಯಲ್ಲಿ ಹಣ ಬಲದಿಂದ ಜೆಡಿಎಸ್ ಪಕ್ಷವನ್ನೇ ಹೈಜಾಕ್ ಮಾಡಿದರು ಎಂದು ದೂರಿದರು.

ದ್ರೋಹ ಬಗೆದರು ಸಿದ್ದರಾಮಯ್ಯ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು ಬಯಸಿದ್ದವರಲ್ಲಿ ನಾನೂ ಒಬ್ಬ. ಆದರೆ ಅವರಿಗೆ ನನ್ನ ಮೇಲೆ ದ್ವೇಷ, ಮತ್ಸರ, ಕೀಳರಿಮೆ ಹೆಚ್ಚಾಯಿತು. ಚಾಮುಂಡೇಶ್ವರಿಯ ಉಪ ಚುನಾವಣೆಯಲ್ಲಿ ನಾನು ಮಾಡಿದ ಉಪಕಾರ ಮರೆತು ದ್ರೋಹ ಬಗೆದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯನ್ನು ಅಧಿಕಾರಕ್ಕೆ ತರುವ ಹೊಣೆ ನನ್ನದು
ಮುಂದಿನ ಚುನಾವಣೆಯಲ್ಲಿ ನಂಜನಗೂಡು ಮತ್ತು ವರುಣ ಕ್ಷೇತ್ರಗಳಲ್ಲಿ 200 ಕೋಟಿ ಹಣ ತಂದು ಹಂಚಿದರೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದ ಅವರು, ಮುಂದಿನ ದಿನಗಳಲ್ಲಿ ಮೈಸೂರು ಮತ್ತು ಚಾ. ನಗರ ಜಿಲ್ಲೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಹೊಣೆಗಾರಿಕೆ ನನ್ನ ಮೇಲಿದ್ದು, ಆ ನಿಟ್ಟಿನಲ್ಲಿ ಪಕ್ಷಕ್ಕೆ ಮಾರ್ಗದರ್ಶನ ನೀಡಿ ಜಿಲ್ಲೆಯಲ್ಲಿ ಸಂಘಟಿತ ಹೋರಾಟ ಮಾಡಿ ಬಿಜೆಪಿಯನ್ನು ಗೆಲ್ಲಿಸುವುದಾಗಿ ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ರಣಹೇಡಿ
ಮಲ್ಲಿಕಾರ್ಜುನ ಖರ್ಗೆ 2008 ರಲ್ಲಿ ಕಾಂಗ್ರೆಸ್ ಪಕ್ಷ 81 ಸ್ಥಾನ ಗೆದ್ದ ಕಾರಣ ಪಕ್ಷವನ್ನು ಕಟ್ಟಲಾಗದೆ 2009ರಲ್ಲಿ ಕೇಂದ್ರ ರಾಜಕಾರಣದತ್ತ ಪಲಾಯನ ಮಾಡಿದ ರಣಹೇಡಿ ಎಂದು ಜರೆದರು. ಹಿಂದೆ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಿಗೆ ಹೆಚ್ಚಿನ ಗೌರವ ಮಾತಿಗೆ ಮನ್ನಣೆ ಇತ್ತು ಆದರೆ ಈಗ ಪರಮೇಶ್ವರ್ ಅವರ ಮಾತಿಗೆ ಮನ್ನಣೆ ಇಲ್ಲದೆ ಕಾಲ ಕಸವಾಗಿದ್ದಾರೆ. ಕಾಂಗ್ರೆಸ್ ಪಕ್ಷ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಹಮ್ಮಿಕೊಂಡಿದೆ ಆದರೆ ಸಂಸದ ಆರ್.ಧ್ರುವನಾರಾಯಣ್ ರಿಗೆ ಮನೆ ಮನೆಗೆ ಹೇಗೆ ದುಡ್ಡು ಹಂಚಬೇಕೆಂಬ ಕಲೆ ಗೊತ್ತಿದೆ ಅವರು ಸಂಸದರಾಗಿರುವುದಕ್ಕೆ ಸಾರ್ಥಕವಾಯಿತು ಎಂದು ಕುಟುಕಿದರು.

ಭಾವುಕರಾದ ಶ್ರೀನಿವಾಸ್ ಪ್ರಸಾದ್
ಸಭೆಯಲ್ಲಿ ಬೆಂಬಲಿಗರು ಪ್ರಸಾದ್ ಅವರನ್ನು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸಿದಾಗ ಒಂದು ಕ್ಷಣ ಅವರು ಭಾವುಕರಾದರಲ್ಲದೆ, ಇದು ನನ್ನ ಹೃದಯಸ್ಪರ್ಶಿ ಸಭೆ, ನಿಮ್ಮ ದುಗುಡ, ಭಾವನೆಗಳು ಅರ್ಥವಾಗುತ್ತವೆ. ನಿಮ್ಮೆಲ್ಲರ ಮನವಿಯನ್ನು ಗಮನದಲ್ಲಿಟ್ಟು ಕೊಂಡು ಸರಿಯಾದ ನಿರ್ಧಾರ ಕೈಗೊಳ್ಳುವುದಾಗಿ ಇದೇ ವೇಳೆ ಹೇಳಿದರು.












Click it and Unblock the Notifications