ಎಂದಿಗೂ ಪಕ್ಷ ತೊರೆಯುವ ಯೋಚನೆ ಮಾಡಲ್ಲ: ಶಾಸಕ ಅಶ್ವಿನ್ ಕುಮಾರ್
ಮೈಸೂರು, ಜುಲೈ 4: ನಾನು ಎಚ್.ಡಿ. ಕುಮಾರಸ್ವಾಮಿ ಅವರ ನೆರವಿನಿಂದ ರಾಜಕಾರಣ ಆರಂಭಿಸಿದ್ದೇನೆ. ಯಾವುದೇ ಕಾರಣಕ್ಕೂ ಜೆಡಿಎಸ್ ತೊರೆಯುವುದಿಲ್ಲ. ಬಿಜೆಪಿ ಪಕ್ಷ ಸೇರುವುದಿಲ್ಲ. ನಮ್ಮ ಪಕ್ಷವನ್ನು ಬಿಟ್ಟು ಹೋಗುವ ದ್ರೋಹ ಮಾಡುವುದಿಲ್ಲ' ಎಂದು ಶಾಸಕ ಅಶ್ವಿನ್ ಕುಮಾರ್ ಪುನರುಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಅವಕಾಶವನ್ನು ಕಲ್ಪಿಸಿಕೊಟ್ಟ ಜೆಡಿಎಸ್ ತೊರೆಯುವ ಪ್ರಮೇಯವೇ ಇಲ್ಲ. ಬಿಜೆಪಿ ನಾಯಕರ ಜೊತೆ ನನಗೆ ಯಾವುದೇ ಸಂಪರ್ಕವಿಲ್ಲ. ಎಂತಹ ಪರಿಸ್ಥಿತಿ ಎದುರಾದರೂ ಪಕ್ಷ ಬಿಡುವುದಿಲ್ಲ ಎಂದು ತಿಳಿಸಿದರು.

ಮಾಧ್ಯಮಗಳಲ್ಲಿ, ನಾನು ಬಿಜೆಪಿಗೆ ಸೇರುತ್ತೇನೆ ಎಂಬ ಊಹಾಪೋಹ ಸುದ್ದಿ ಹಬ್ಬಿದೆ. ನಾನು ಪಕ್ಷ ಬಿಡುವುದಿಲ್ಲವೆಂದು ಈ ಹಿಂದೆಯೇ ಸಾಕಷ್ಟು ಬಾರಿ ಹೇಳಿದ್ದೇನೆ. ಆದರೂ ನನ್ನ ಬಗ್ಗೆ ನಿರಂತರ ಸುದ್ದಿಗಳು ಬರುತ್ತಿರುವುದರಿಂದ ನನ್ನ ಘನತೆಗೆ ಚ್ಯುತಿಯಾಗುತ್ತಿದೆ. ಇದರಿಂದ ನನ್ನನ್ನು ಆಯ್ಕೆ ಮಾಡಿದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ಆದ್ದರಿಂದ ದೃಶ್ಯ ಮಾಧ್ಯಮ ಅಥವಾ ಮುದ್ರಣ ಮಾಧ್ಯಮದವರಾಗಲಿ ಇಂತಹ ಸುದ್ದಿ ಪ್ರಕಟಿಸುವುದನ್ನು ತಪ್ಪಿಸಿ ಎಂದು ಕೇಳಿಕೊಂಡರು.












Click it and Unblock the Notifications