ನಾನೇ ಮತ್ತೊಮ್ಮೆ ಸಂಸದನಾಗುವುದು ಖಚಿತ: ಪ್ರತಾಪ್ ಸಿಂಹ
ಮೈಸೂರು, ಮಾರ್ಚ್ 04: ಭ್ರಷ್ಟಚಾರವೆಂಬುದು ಕಾಂಗ್ರೆಸ್ ಮುಖಂಡರಿಗೆ ಹೊಕ್ಕಳ ಬಳ್ಳಿಯಂತೆ ಸುತ್ತುಕೊಂಡಿದೆ ಎಂದು ಸಂಸದ ಪ್ರತಾಪ್ ಸಿಂಹ ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಲ್ವಾಮಾ ದಾಳಿ ನಂತರ ನಡೆಸಲಾಗಿರುವ ಸರ್ಜಿಕಲ್ ಸ್ಟ್ರೈಕ್ ಅನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ಬಿಎಸ್ ವೈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬೇಡಿ ಎಂದ ಪ್ರತಾಪ್ ಸಿಂಹ
ಬ್ರಿಟಿಷರ ಕಾಲದಿಂದಲೂ ಭ್ರಷ್ಟಚಾರದಲ್ಲಿ ಕಾಂಗ್ರೆಸ್ ತೊಡಗಿಕೊಂಡಿದೆ. ಈ ಹಿಂದೆ ಮುಂಬೈನಲ್ಲಿ ನಡೆದ ದಾಳಿ ವೇಳೆಯೂ ನೂರಾರು ಮಂದಿ ಅಮಾಯಕರು ಬಲಿಯಾಗಿದ್ದರು. ಆ ವೇಳೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಗೆ ಸರ್ಜಿಕಲ್ ಸ್ಟ್ರೈಕ್ ಮಾಡಲು ಎದೆಗಾರಿಕೆ ಇರಲಿಲ್ಲ. ಆದರೆ ಮೋದಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಕ್ಕಾಗಿ ಜನರು ಒಲವು ತೋರಿಸುತ್ತಿದ್ದಾರೆ. ಇದು ಕಾಂಗ್ರೆಸ್ ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.
ಮನಮೋಹನ್ ಸಿಂಗ್, ಸೋನಿಯಾ ಗಾಂಧಿಯವರಿಗೆ ಪಾಕಿಸ್ತಾನ ಗಡಿ ದಾಟಿ ಹೋಗಲು ತಾಕತ್ ಇಲ್ಲ. ಆಗ ಕಾಂಗ್ರೆಸ್ ನವರು ಯುದ್ಧ ಮಾಡಿದ್ದರೆ ಜನರು ಇವರನ್ನೂ ಹೊಗಳುತ್ತಿದ್ದರು. ಭಾರತದ ಗಡಿ ದಾಟಿ ಯೋಧರ ಶಿರ ತೆಗೆದುಕೊಂಡು ಹೋದಾಗ ಇವರ ಕೈಯಿಂದ ಏನು ಸಾಧ್ಯವಾಗಲಿಲ್ಲ. ಈಗ ಚುನಾವಣೆ ಹಿನ್ನೆಲೆ ಎಂದು ಹೇಳುತ್ತಾರೆ. ಇವರಿಗೆ ಇದು ಅಭ್ಯಾಸವಾಗಿ ಹೋಗಿದೆ ಎಂದು ಕಿಡಿಕಾರಿದರು.
ಮಾನನಷ್ಟ ಮೊಕದ್ದಮೆ; ಸಂಸದ ಪ್ರತಾಪ್ ಸಿಂಹಗೆ ವಾರಂಟ್
ದೇಶದ ಸುರಕ್ಷಿತ ದೃಷ್ಟಿಯಿಂದ ಸರ್ಕಾರ ವಾಯುದಾಳಿ ನಡೆಸಿದೆ. ಇವರಿಗೆ ಯಾವಾಗಲೂ ಹೊಂದಾಣಿಕೆ ಬೇಕು. ಹೊಂದಾಣಿಕೆಯಿಂದ ಇವರು ಅಧಿಕಾರ ಅನುಭವಿಸಬೇಕು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಉಗ್ರರಿಗೆ ತಕ್ಕ ಉತ್ತರ ನೀಡಿದ್ದಾರೆ. ಯುದ್ಧ ವಿಚಾರದಲ್ಲಿ ಮೋದಿ ಎದೆಗಾರಿಕೆ ತೋರಿದ್ದಾರೆ ಎಂದು ಯಡಿಯೂರಪ್ಪರವರ ನಡೆ ಸಮರ್ಥಿಸಿಕೊಂಡರು.
ಹಾಸನದಲ್ಲಿ ಜೆಡಿಎಸ್ ಬೇರು ಅಲುಗಾಡುತ್ತಿದೆ: ಪ್ರತಾಪ್ ಸಿಂಹ
ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಎಚ್.ಡಿ.ದೇವೇಗೌಡ ಅಥವಾ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾಲ್ಕು ಮುಕ್ಕಾಲು ವರ್ಷದಲ್ಲಿ ಮೈಸೂರಿನಲ್ಲಿ ಉತ್ತಮ ಕೆಲಸ ಮಾಡಿದ್ದೇನೆ. ಹಿಂದೆ ಯಾವ ಸಂಸದ ಮಾಡದ ಕೆಲಸ ಮಾಡಿದ್ದೇನೆ. ಮೋದಿ ಗೆಲ್ಲಿಸಲು ಜನರು ಮುಂದಾಗಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆದರೂ ಕೂಡ ಏನು ಆಗಲ್ಲ. ನಾನೇ ಮತ್ತೊಮ್ಮೆ ಸಂಸದನಾಗುವುದು ಖಚಿತ ಎಂದರು.