ನನ್ನನ್ನು ಸೋಲಿಸಿದ್ದು ಜನ, ಯಾವ ನಾಯಕರೂ ಅಲ್ಲ: ಸಿದ್ದರಾಮಯ್ಯ
ಮೈಸೂರು, ಆಗಸ್ಟ್ 30: ಚಾಮುಂಡೇಶ್ವರಿ ಕ್ಷೇತ್ರದ ಸೋಲನ್ನು ಮತ್ತೆ ನೆನಪಿಸಿಕೊಂಡಿರುವ ಸಿದ್ದರಾಮಯ್ಯ, 'ನನ್ನ ಸೋಲಿಗೆ ಜನರು ಕಾರಣ ಹೊರತು ಯಾವ ವಿರೋಧಿ ನಾಯಕರೂ ಅಲ್ಲ' ಎಂದು ಹೇಳಿದ್ದಾರೆ.
ಹುಣಸೂರು ಸೇರಿದಂತೆ ಮೈಸೂರಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದರು.
ನನ್ನನ್ನು ಸೋಲಿಸಿದ್ದು ಕ್ಷೇತ್ರದ ಜನರು, ಅದು ಅವರ ತೀರ್ಪು. ನನ್ನ ಸೋಲಿಗೆ ಶ್ರೀನಿವಾಸ್ ಪ್ರಸಾದ್, ಅನರ್ಹ ಶಾಸಕ ಎಚ್.ವಿಶ್ವನಾಥ್, ಮಾಜಿ ಸಚಿವ ಜಿಟಿ.ದೇವೇಗೌಡ ಕಾರಣ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ನಾನು ಶಾಸಕ ಆಗುವುದು ಇಷ್ಟವಿರಲಿಲ್ಲ ಹಾಗಾಗಿ ನನ್ನನ್ನು ಸೋಲಿಸಿದರು. ಅವರ ತೀರ್ಪನ್ನು ನಾನು ಒಪ್ಪಿಕೊಂಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ ಸೋಲಿಗೆ ನಾನೇ ಕಾರಣ ಎಂದಿದ್ದ ಶ್ರೀನಿವಾಸ್ ಪ್ರಸಾದ್
ಸಿದ್ದರಾಮಯ್ಯ ಸೋಲಿಗೆ ನಾನೇ ಕಾರಣ ಎಂದು ಕೆಲವು ದಿನಗಳ ಹಿಂದಷ್ಟೆ ಶ್ರೀನಿವಾಸ್ ಪ್ರಸಾದ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸುತ್ತಾ ಮಾತನಾಡಿದ ಸಿದ್ದರಾಮಯ್ಯ, ಅವರು (ಶ್ರೀನಿವಾಸ್ ಪ್ರಸಾದ್) ನಂಜನಗೂಡಿನಲ್ಲಿ ಸೋತರಲ್ಲ ಅದಕ್ಕೆ ಯಾರು ಕಾರಣ? ಎಂದು ಪ್ರಶ್ನೆ ಮಾಡಿದರು.

ಸಂತೋಶ ಪಡುವವರು ಪಡಲಿ ನನಗೆ ಚಿಂತೆಯಿಲ್ಲ: ಸಿದ್ದರಾಮಯ್ಯ
ಈ ಬಗ್ಗೆ ಟ್ವೀಟ್ ಕೂಡ ಮಾಡಿರುವ ಸಿದ್ದರಾಮಯ್ಯ, ಕಳೆದ ವಿಧಾನಸಭಾ ಚುನಾವಣೆಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ನನ್ನ ಸೋಲು ಕ್ಷೇತ್ರದ ಮತದಾರರು ನೀಡಿದ ತೀರ್ಪು. ಈ ಜನಾದೇಶವನ್ನು ನಾನು ಸ್ವೀಕರಿಸಿದ್ದೇನೆ. ನನ್ನ ಸೋಲನ್ನು ಯಾರಾದರೂ ತಮ್ಮ ಗೆಲುವೆಂದು ಬಿಂಬಿಸಿಕೊಂಡು ಸಂತೋಷ ಪಡುವುದಿದ್ದರೆ ನನಗದರಿಂದ ಕಿಂಚಿತ್ತೂ ಬೇಸರವಿಲ್ಲ. 'ಧಾರಾಳವಾಗಿ ಸಂತೋಷಪಡಲಿ' ಎಂದಿದ್ದಾರೆ.

ಹುಣಸೂರು ಉಪಚುನಾವಣೆಗೆ ಮಂಜುನಾಥ್ಗೆ ಟಿಕೆಟ್?
ಹುಣಸೂರು ಉಪಚುನಾವಣೆ ಟಿಕೆಟ್ ವಿಚಾರವಾಗಿ ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ಉಸ್ತುವಾರಿ ಸಮಿತಿ ಮಾಡಲಾಗಿದ್ದು, ಅವರು ಏನು ಹೇಳುತ್ತಾರೆಯೋ ನೋಡೋಣ, ಜನರೆಲ್ಲ ಮಂಜುನಾಥ್ ಅವರಿಗೆ ಟಿಕೆಟ್ ಕೊಡಿ ಎನ್ನುತ್ತಿದ್ದಾರೆ ಎಂದರು.

10,000 ಪರಿಹಾರ ಹಲವರಿಗೆ ಬಂದಿಲ್ಲ: ಸಿದ್ದರಾಮಯ್ಯ
ನೆರೆ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಮಾತನಾಡಿದ ಸಿದ್ದರಾಮಯ್ಯ, ಮನೆ ಕಟ್ಟಲು 5 ಲಕ್ಷ ಕೊಟ್ಟರೆ ಅದು ಸಾಕಾಗುವುದಿಲ್ಲ, 10 ಲಕ್ಷ ಕೊಡಬೇಕು. ಈಗಾಗಲೇ 10 ಸಾವಿರ ಕೊಡುವುದಾಗಿ ಸಿಎಂ ತಿಳಿಸಿದ್ದಾರೆ. ಆದರೆ ಈವರೆಗೂ 10 ಸಾವಿರ ಎಲ್ಲರಿಗೂ ತಲುಪಿಲ್ಲ ಎಂದರು.

ಎನ್ಡಿಆರ್ಎಫ್ ನಿಯಮಗಳನ್ನು ಸಡಿಲಗೊಳಿಸಿ: ಸಿದ್ದರಾಮಯ್ಯ
ಎನ್ಡಿಆರ್ಎಫ್ ನಿಯಮಗಳ ಪ್ರಕಾರ ಬೆಳೆ ಪರಿಹಾರ ನೀಡಿದರೆ ಜನರಿಗೆ ಏನೂ ಸಿಗುವುದಿಲ್ಲ. ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ನಾವು ಮಾಹಿತಿಯನ್ನು ಸಿಎಂ ಗೆ ತಿಳಿಸುತ್ತೇನೆ. ಎನ್ಡಿಆರ್ಎಫ್ ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.












Click it and Unblock the Notifications