ಇದು ಪ್ರಚಾರವೋ, ವಿಜಯೋತ್ಸವವೋ ಗೊತ್ತಾಗುತ್ತಿಲ್ಲ: ಬಿ.ಎಸ್.ವೈ
ಮೈಸೂರು, ಮಾರ್ಚ್ 13 : ನಂಜನಗೂಡಿನಲ್ಲಿ ಜನರು ನೀರಿಕ್ಷೆಗೂ ಮೀರಿ ಬೆಂಬಲ ನೀಡುತ್ತಿದ್ದಾರೆ, ನಾನು ಬಂದಿದ್ದು ಪ್ರಚಾರಕ್ಕೋ ಅಥವಾ ವಿಜಯೋತ್ಸವಕ್ಕೋ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು. ಉಪಚುನಾವಣೆಯ ಪ್ರಚಾರದಲ್ಲಿದ್ದ ಅವರು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಈ ವಿಷಯ ತಿಳಿಸಿದರು.
ಮಾರ್ಚ್ 15ರಂದು ಎಸ್.ಎಂ.ಕೃಷ್ಣ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಕೃಷ್ಣ ಬಿಜೆಪಿ ಸೇರುವ ಸಂದರ್ಭದಲ್ಲಿ ನಾನು ಕೂಡ ದೆಹಲಿಯಲ್ಲಿ ಇರುತ್ತೇನೆ. ನಾಳೆ ದೆಹಲಿಗೆ ತೆರಳಿ ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇವೆ ಎಂದವರು ಹೇಳಿದರು.[ಕೊನೆಗೂ ಎಸ್ ಎಂ ಕೃಷ್ಣ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್!]

ಕಳಲೆ ಕೇಶವಮೂರ್ತಿ ಹಾಗೂ ಶ್ರೀನಿವಾಸ್ ಪ್ರಸಾದ್ ನಡುವೆ ಪೈಪೋಟಿ ಇದೆ ಎನ್ನುವ ಮೂಲಕ ಸಿದ್ದರಾಮಯ್ಯ ಸೋಲೊಪ್ಪಿಕೊಂಡಿದ್ದಾರೆ. ಅವರು ಯಡಿಯೂರಪ್ಪ ಮತ್ತು ಪ್ರಧಾನಿಯನ್ನು ಹೀಗೇ ಟೀಕೆ ಮಾಡುತ್ತಿದ್ದರೆ ನಾವು ಬಂದು ಪ್ರಚಾರ ಮಾಡುವ ಅಗತ್ಯವಿಲ್ಲ. ಅವರೇ ಆ ಕೆಲಸ ಮಾಡುತ್ತಿದ್ದಾರೆ ಎಂದು ಹಾಸ್ಯಭರಿತವಾಗಿ ಹೇಳಿ ನಕ್ಕರು. ಹತಾಶೆಯಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ಕಾಂಗ್ರೆಸ್ ಮುಖಂಡರು ಟೀಕೆ ಮಾಡುತ್ತಿದ್ದಾರೆ. ಬೌದ್ಧಿಕ ಸ್ಥಿಮಿತ ಕಳೆದುಕೊಂಡಿರೋದು ನಾನೋ ಅಥವಾ ಸಿದ್ದರಾಮಯ್ಯನವರೋ ಎನ್ನುವುದು ಇದರಿಂದಲೇ ಗೊತ್ತಾಗಲಿದೆ ಎಂದರು.[ನಂಜನಗೂಡು ಉಪ ಚುನಾವಣೆ ಪ್ರಚಾರಕ್ಕಿಳಿದ ಯಡಿಯೂರಪ್ಪ]

ಶೃಂಗೇರಿ ಶ್ರೀಗಳ ಆಶೀರ್ವಾದ
ನ೦ಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮೈಸೂರಿನ ನಟರಾಜ ಕಾಲೇಜು ಬಳಿ ಇರುವ ಶಂಕರ ಮಠಕ್ಕೆ ತೆರಳಿ ಶೃಂಗೇರಿ ಮಠದ ಭಾರತೀ ತೀರ್ಥ ಸ್ವಾಮೀಜಿಗಳ ಆಶೀರ್ವಾದವನ್ನು ಪಡೆದುಕೊಂಡರು. ಬಳಿಕ ಪಕ್ಷದ ಅನೇಕ ನಾಯಕರೊ೦ದಿಗೆ ಹರದನಹಳ್ಳಿ, ನೆಲ್ಲಿತಾಳಪುರ ಮತ್ತು ಹುಲ್ಲಹಳ್ಳಿ, ಶಿರಮಳ್ಳಿ ಗ್ರಾಮ ಪಂಚಾಯಿತಿ ಮೊದಲಾದ ಗ್ರಾಮಗಳಲ್ಲಿ ಚುನಾವಣಾ ಸಭೆಗಳನ್ನು ನಡೆಸಿದರು. ಮಾಜಿ ಸಚಿವ ಸೋಮಣ್ಣ, ಸಂಸದೆ ಶೋಭಾ ಕರಂದ್ಲಾಜೆ ಯಡಿಯೂರಪ್ಪನವರ ಜೊತೆಗಿದ್ದರು.












Click it and Unblock the Notifications