ಕಾಂಗ್ರೆಸ್ ಬಗ್ಗೆ ಅಸಮಾಧಾನವಿದೆ, ಆದರೆ ಪಕ್ಷ ಬಿಡಲ್ಲ: ತನ್ವೀರ್ ಸೇಠ್
ಮೈಸೂರು, ಜುಲೈ 2: ನಾನು ಮಾರಾಟದ ವಸ್ತು ಅಲ್ಲ. ಶಾಸಕರನ್ನು ಮಾರಾಟದ ವಸ್ತುವಾಗಿ ನೋಡುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದಿದ್ದಾರೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವಿಚಾರವಾಗಿ ಅಸಮಾಧಾನ ಎಲ್ಲರಿಗೂ ಇದೆ. ಹಾಗೆಂದ ಮಾತ್ರಕ್ಕೆ ಸರ್ಕಾರ ಬೀಳುತ್ತದೆ ಅನ್ನೋದು ತಪ್ಪು. ವೈಯಕ್ತಿಕ ಕಾರಣದಿಂದ ಕಾಂಗ್ರೆಸ್ ನ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ. ಅವರ ಸಮಸ್ಯೆಯನ್ನು ಕಾಂಗ್ರೆಸ್ ಹೈಕಮಾಂಡ್ ಬಗೆಹರಿಸುತ್ತದೆ ಎಂದರು.
ನಾನು ಸಹ ಸಚಿವ ಸ್ಥಾನದ ಆಕಾಂಕ್ಷಿ. ಅಕಸ್ಮಾತ್ ಸಚಿವ ಸ್ಥಾನ ಕೊಟ್ಟರೆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಕೊಡದಿದ್ದರೆ ಜನರ ಸೇವೆ ಮಾಡುತ್ತೇನೆ. ಆದರೆ ಮಧ್ಯಂತರ ಚುನಾವಣೆ ಯಾರಿಗೂ ಇಷ್ಟವಿಲ್ಲ. ನಿತ್ಯ ಶಾಸಕರ ಪಕ್ಷಾಂತರ ಮಾಡುವುದು ಜನರಲ್ಲಿ ಬೇರೆ ಭಾವನೆ ಮೂಡಿಸುತ್ತದೆ. ಹೀಗಾಗಿ ಜನರ ಮತಕ್ಕೆ ಬೆಲೆ ಕೊಡೋಣ ಎಂದರು.

ಕೆಪಿಸಿಸಿ ಅಧ್ಯಕ್ಷರ ಮಾತಿಗೆ ಕಾಂಗ್ರೆಸ್ ಶಾಸಕರ ವಿರೋಧ ಹಿನ್ನೆಲೆ ರಿವರ್ಸ್ ಆಪರೇಷನ್ ಮಾಡುತ್ತೇವೆ ಎಂಬ ದಿನೇಶ್ ಗುಂಡೂರಾವ್ ಹೇಳಿಕೆಗೆ ತಿರುಗೇಟು ನೀಡಿ, ಆಪರೇಷನ್, ರಿವರ್ಸ್ ಆಪರೇಷನ್ ಎರಡೂ ತಪ್ಪು. ಕೆಪಿಸಿಸಿ ಅಧ್ಯಕ್ಷರು ನಿನ್ನೆ ರಿವರ್ಸ್ ಆಪರೇಷನ್ ಬಗ್ಗೆ ಮಾತನಾಡಿದ್ದಾರೆ. ಇದು ಶಾಸಕರಿಗೆ ಗೌರವ ತರುವ ವಿಚಾರ ಅಲ್ಲ. ಶಾಸಕರು ಮಾರಾಟದ ವಸ್ತುಗಳಲ್ಲ. ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತ ಶಾಸಕರಿಗೆ ಬೆಲೆಯೇ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಅಲ್ಪಸಂಖ್ಯಾತ ಜನಪ್ರತಿನಿಧಿಗಳಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications