ಸಿದ್ದರಾಮಯ್ಯ ಪ್ರತಿಸ್ಪರ್ಧಿ ವಿದ್ಯಾಭೂಷಣರೇ? ಇಲ್ಲಿದೆ ಉತ್ತರ
ಮೈಸೂರು, ನವೆಂಬರ್ 08: ನಾನು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಇದೊಂದು ಶುದ್ಧ ಸುಳ್ಳು ಹಾಗೂ ನನ್ನ ಮೇಲೆ ಅಪಪ್ರಚಾರ ಮಾಡುತ್ತಿರುವ ಮಾತುಗಳು ಎಂದು ಖ್ಯಾತ ಗಾಯಕ ವಿದ್ಯಾಭೂಷಣ ತೀರ್ಥರು 'ಒನ್ ಇಂಡಿಯಾ'ಗೆ ಸ್ಪಷ್ಟಪಡಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಸ್ಪರ್ಧಿಯಾಗಿ ವಿದ್ಯಾಭೂಷಣರು ಸ್ಪರ್ಧಿಸುತ್ತಾರೆ ಎಂಬ ವಿಚಾರ ಹಬ್ಬಿ ಸೆನ್ಸೆಶನ್ ಕ್ರಿಯೇಟ್ ಆಗಿತ್ತು. ಅದರಲ್ಲೂ ಮೈಸೂರಿನವರೇ ಆದ ಸಿಎಂ ತವರು ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಎದುರಾಳಿಯಾಗಿ ಖ್ಯಾತ ಗಾಯಕರಾದ ವಿದ್ಯಾಭೂಷಣರು ಅಖಾಡಕ್ಕಿಳಿಯಲಿದ್ದಾರೆ ಎಂಬ ವದಂತಿ ಹಬ್ಬಿತ್ತು.

ಈಗಾಗಲೇ ಸಾವಿರಕ್ಕೂ ಹೆಚ್ಚು ವೇದಿಕೆಯ ಕಾರ್ಯಕ್ರಮಗಳನ್ನು ನೀಡಿ, ತಮ್ಮ ಕಂಠಸಿರಿಯಿಂದಲೇ ಜನರನ್ನು ತಮ್ಮತ್ತ ಸೆಳೆದು ದಾಸಸಾಹಿತ್ಯದ ಗಾಯನದೆಲ್ಲೆಡೆ ಹೆಸರುವಾಸಿಯಾಗಿರುವ ವಿದ್ಯಾಭೂಷಣರು ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಹರಿದಾಡುತ್ತಿದ್ದವು. ಇದನ್ನು ಅರಿತ ಒನ್ ಇಂಡಿಯಾ ತಂಡ ವಿದ್ಯಾಭೂಷಣರನ್ನು ಸಂಪರ್ಕಿಸಿ ಪ್ರಶ್ನಿಸಿದಾಗ ಅವರು, ಇದೊಂದು ಗುಮಾನಿ. ನಾನು ಯಾವ ಚುನಾವಣೆಯಲ್ಲಿಯೂ ಸ್ಪರ್ಧಿಸಲಾರೆ. ನನ್ನ ಮೇಲೆ ಇಲ್ಲ ಸಲ್ಲದ ವದಂತಿ ಹರಿದಾಡುತ್ತಿದೆ. ಇದನ್ನು ನಂಬಬೇಡಿ ಎಂದು ಉತ್ತರಿಸಿದರು.
ಇನ್ನು ಮುಂದುವರೆದು ನಿಮ್ಮನ್ನು ಕಮಲ ಪಾಳಯದ ನಾಯಕರೇನಾದರೂ ಸಂಪರ್ಕಿಸಿದ್ದಾರೆಯೇ ಎಂದು ಪ್ರಶ್ನಿಸಿದಾಗ ವಿದ್ಯಾಭೂಷಣರು, ನಾನು ಅದಕ್ಕೆ ಈಗಲೇ ಏನು ಉತ್ತರಿಸಲಾರೆ ಎಂದು ನಕ್ಕು, ಗೊತ್ತಿಲ್ಲ ಎಂದು ಸುಮ್ಮನಾದರು. ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬ್ರಾಹ್ಮಣರನ್ನು ಸೆಳೆಯಲು ಹಾಗೂ ಮತಗಳನ್ನು ವಿಭಜಿಸಲು ಪ್ರಿ ಪ್ಲಾನ್ ಮಾಡಿಕೊಂಡಿದ್ದ ಬಿಜೆಪಿ ನಾಯಕರು ವಿದ್ಯಾಭೂಷಣರನ್ನು ಅಭ್ಯರ್ಥಿಯನ್ನಾಗಿಸಲು ಯೋಚಿಸಿತ್ತು. ಅಷ್ಟೇ ಅಲ್ಲದೇ ಇಲ್ಲಿ ಹಿಂದೆ ರಾಮ್ ದಾಸ್ ಅಭ್ಯರ್ಥಿಯಾಗಿದ್ದರು. ಆರೋಪಗಳನ್ನು ಹೊತ್ತಿದ್ದ ಅವರನ್ನು ಬಿಜೆಪಿ ಅಭ್ಯರ್ಥಿಯನ್ನು ಮಾಡಬಾರದೆಂದು ಯೋಚಿಸಿ ಮಾಳವಿಕರನ್ನು ಸಹ ಸಂಪರ್ಕಿಸಿತ್ತು. ಅವರು ಕೂಡ ಮೈಸೂರಿನವರೇ ಆಗಿದ್ದರಿಂದ ಒಪ್ಪಿಗೆ ಸೂಚಿಸಿದ್ದರು ಕೂಡ.
ಆದರೆ ಈ ಮಧ್ಯೆ ವಿದ್ಯಾಭೂಷಣರನ್ನು ಕ್ಯಾಂಡಿಡೇಟ್ ಎಂಬ ಗುಮಾನಿಗಳಿಗೆ ತೆರೆ ಎಳೆದ ಅವರು, ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications