ಪ್ರೀತಿಸಿ ಮದುವೆಯಾದ ಒಂದೇ ದಿನಕ್ಕೆ ಕಿರುಕುಳ ಕೊಟ್ಟ ಪತಿ
ಮೈಸೂರು, ಫೆಬ್ರವರಿ 11:ಪ್ರೀತಿಸಿ ಮದುವೆಯಾದ ಯುವತಿಗೆ ಮದುವೆಯಾದ ಒಂದೇ ದಿನಕ್ಕೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಮನೆಯಿಂದ ಹೊರದಬ್ಬಿದ ಘಟನೆ ಮೈಸೂರಿನಲ್ಲಿ ನಡೆದಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಮೈಸೂರು ನಿವಾಸಿ ಮನೋಜ್ ಎಂಬಾತ ಯುವತಿಯನ್ನು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ ಪೋಷಕರು ಇವರಿಬ್ಬರ ವಿವಾಹಕ್ಕೆ ಸಮ್ಮತಿಸಿರಲಿಲ್ಲ. ಹೀಗಾಗಿ ಇವರಿಬ್ಬರು ಉಪನೋಂದಣಿ ಕಚೇರಿಯಲ್ಲಿ ವಿವಾಹವಾಗಿದ್ದರು. ಆದರೆ ಮಾರನೇ ದಿನವೇ ಯುವಕನ ವರಸೆ ಬದಲಾಗಿದೆ. ತನ್ನ ಪ್ರೇಯಸಿಯ ಮೇಲೆ ಹಲ್ಲೆ ನಡೆಸಿದ್ದು, ಇದೀಗ ಆಕೆ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

ಠಾಣೆಯಲ್ಲಿ ದೂರು ನೀಡಿದ ನಂತರ ಯುವಕನನ್ನು ಠಾಣೆಗೆ ಕರೆಸಿ, ಬುದ್ಧಿ ಹೇಳಿ ಹಿಂತಿರುಗಿ ಕಳುಹಿಸಿದ್ದಾರೆ. ಆದರೆ ಆತ ಯಾವುದಕ್ಕೂ ಬಗ್ಗದೆ, ಆಕೆಯ ಮೇಲೆ ಮತ್ತೆ ಹಲ್ಲೆ ನಡೆಸಿ ಆಕೆಯ ಬಳಿಯಿದ್ದ ಮೊಬೈಲ್ ಮತ್ತು ಹಣವನ್ನು ಕಸಿದುಕೊಂಡು ಪ್ರಾಣ ಬೆದರಿಕೆ ಹಾಕಿದಾಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications