ರಿಲ್ಯಾಕ್ಸ್ ಮೂಡಿನಲ್ಲಿ ಕೈ ಅಭ್ಯರ್ಥಿ; ದ್ವೇಷದ ರಾಜಕಾರಣಕ್ಕೆ ಬೇಸರ
ಮೈಸೂರು, ಡಿಸೆಂಬರ್ 6: ಹುಣಸೂರು ವಿಧಾನಸಭಾ ಉಪ ಚುನಾವಣೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ. ಮಂಜುನಾಥ್ ಶುಕ್ರವಾರ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿ ಕಾಲ ಕಳೆದರು.
ಉಪ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ತಾಲೂಕಿನೆಲ್ಲೆಡೆ ಅಬ್ಬರದ ಪ್ರಚಾರ ನಡೆಸಿದ್ದ ಮಂಜುನಾಥ್, ಗೆಲುವಿನ ನಿರೀಕ್ಷೆಯಲ್ಲಿ ಚುನಾವಣೆ ಎದರುಸಿದ್ದಾರೆ. ಸದ್ಯ ಮತದಾನ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜಕೀಯ ಜಂಜಾಟದಿಂದ ವಿಶ್ರಾಂತಿ ಪಡೆದ ಮಂಜುನಾಥ್, ಶುಕ್ರವಾರ ತಮ್ಮ ಮನೆಯಲ್ಲಿ ಕುಟುಂಬಸ್ಥರೊಂದಿಗೆ ಕಾಲಕಳೆದರು.
ಮತದಾನ ಮುಗಿದ ಬಗ್ಗೆ ಪ್ರತಿಕ್ರಯಿಸಿದ ಕಾಂಗ್ರೆಸ್ ಅಭ್ಯರ್ಥಿ, "ಒಂದು ದೊಡ್ಡ ಭಾರವನ್ನು ತಲೆ ಮೇಲಿಂದ ಇಳಿಸಿದಂತಾಗಿದೆ. ತಾಲೂಕಿನ ಜನ ಸ್ಪಂದಿಸಿದ ರೀತಿ ಖುಷಿ ತಂದಿದೆ. ಫಲಿತಾಂಶ ನಮ್ಮ ಪರವಾಗಿ ಬರುವ ನಿರೀಕ್ಷೆ ಇದೆ. ಚುನಾವಣೆ ವೇಳೆ ನಡೆದ ಕೆಲವೊಂದು ಕಹಿ ಘಟನೆಗಳನ್ನು ಹೊರತುಪಡಿಸಿದರೆ ಎಲ್ಲಾ ಶಾಂತಿಯುತವಾಗಿ ನಡೆದದ್ದು ಸಮಾಧಾನ ತಂದಿದೆ" ಎಂದರು.

"ಆದರೆ ಕಳೆದ ಮೂರು ಉಪಚುನಾವಣೆಗೆ ಹೋಲಿಸಿದರೆ ಈ ಉಪಚುನಾವಣೆ ದ್ವೇಷದಿಂದ ನಡೆದಿದ್ದು ಬೇಸರ ತಂದಿದೆ. ಈವರೆಗೂ ಚುನಾವಣೆಗಳು ಸ್ನೇಹಪರವಾಗಿ ನಡೆಯುತ್ತಿದ್ದವು. ಆದರೆ ಈ ಬಾರಿ ಕಿಚ್ಚು, ರೋಷ, ದ್ವೇಷದಿಂದ ಚುನಾವಣೆ ನಡೆದಿದ್ದು ದುರದೃಷ್ಟಕರ. ಚುನಾವಣೆಯಲ್ಲಿ ಎಲ್ಲಾ ಸಮೀಕ್ಷೆಗಳು ನಮ್ಮ ಪರವಾಗಿ ಬಂದಿವೆ. ಆದರೆ ಕೆಲವು ಸಮೀಕ್ಷೆ ತಪ್ಪಾಗಿದ್ದು, ಈ ಸಮೀಕ್ಷೆಗಳಿಗಿಂತ ತಾಲೂಕಿನ ಜನರ ಮೇಲೆ ನಂಬಿಕೆ ಇದೆ. ಈ ಚುನಾವಣೆಯಲ್ಲಿ ಬಿಜೆಪಿ 50-60 ಕೋಟಿ ಹಣ ಖರ್ಚು ಮಾಡಿದೆ. ಅವರು ಅಷ್ಟು ಹಣ ಖರ್ಚು ಮಾಡಿದ್ದರೂ ನಾನು ಗೆಲ್ಲುತ್ತೇನೆಂಬ ವಿಶ್ವಾಸವಿದೆ. ಈ ಚುನಾವಣೆಯಲ್ಲಿ ಶತ್ರುಗಳೆಲ್ಲ ಮಿತ್ರರಾದರು, ಮಿತ್ರರೆಲ್ಲಾ ಶತ್ರುಗಳಾದರು" ಎಂದು ವಿಷಾದ ವ್ಯಕ್ತಪಡಿಸಿದರು.












Click it and Unblock the Notifications