ಅಗತ್ಯವಿಲ್ಲದಿದ್ದರೇ ಇಲ್ಲಿ ಬಿಡಿ, ಅಗತ್ಯವಿದ್ದರೆ ತೆಗೆದುಕೊಳ್ಳಿ!
ಜೀವನವೆಂಬುದು ಎಷ್ಟು ವಿಚಿತ್ರ ನೋಡಿ. ಕೆಲವರಿಗೆ ಶ್ರೀಮಂತಿಕೆ ತುಳುಕಾಡುತ್ತಿರುತ್ತದೆ, ಹಲವರಿಗೆ ಬಡತನವೆಂಬುದು ಕಿತ್ತು ತಿನ್ನುತ್ತಿರುತ್ತದೆ. ಹರಿದ ಬಟ್ಟೆಯನ್ನು ತೊಟ್ಟು, ಕಿತ್ತುಹೋಗಿರುವ ಚಪ್ಪಲಿಯನ್ನೇ ಮೆಟ್ಟಿಕೊಂಡು ಜೀವನವೆಂಬ ಬಂಡಿಯನ್ನು ಸಾಗಿಸುತ್ತಿರುವವರು ಎಷ್ಟೋ?
ಅವರು ಆಕಾಶಕ್ಕೆ ಏಣಿ ಹಾಕುವುದನ್ನು ಬಿಟ್ಟಿರುತ್ತಾರೆ, ಕನಸು ಕಾಣುವುದನ್ನೂ ನಿಲ್ಲಿಸಿರುತ್ತಾರೆ. ಇದ್ದರೆ ಮೃಷ್ಟಾನ್ನ, ಇಲ್ಲದಿದ್ದರೆ ತಣ್ಣೀರೇ ಗತಿ. ನಮಗೇಕೆ ಅವೆಲ್ಲಾ? ಅವರವರ ಹಣೆಬರಹ ಎಂದು ಸುಮ್ಮನಿರುವವರೇ ಹೆಚ್ಚು. ಆದರೆ ಇಲ್ಲೊಂದು ತಂಡ ಇಂತಹ ಬಡವರಿಗೆ ವಂಚಿತವಾಗಿರುವ ಈ ಎಲ್ಲಾ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ.
ಮೈಸೂರಿನಲ್ಲಿ ಖಾಸಗಿ ಎನ್ಜಿಒವೊಂದು 'ಕರುಣೆಯ ಗೋಡೆ' ಎಂಬ ಮಳಿಗೆಯನ್ನು ನಗರದ ಕೆ.ಆರ್ ಎಸ್ ರಸ್ತೆಯ ದಾಸಪ್ಪ ವೃತ್ತದ ಬಳಿ ಪ್ರಾರಂಭಿಸಿದೆ. ಈ ಮಳಿಗೆಯಲ್ಲಿ ನಮಗೆ ಬೇಡವಾದ ವಸ್ತುಗಳಾದ ಬ್ಯಾಗ್, ಪುಸ್ತಕ, ಶೂಗಳನ್ನು ಬಿಟ್ಟು ಹೋಗಬಹುದು. ಇಲ್ಲೊಂದು ವಿಶೇಷವಿದೆ.
ಇಲ್ಲಿ ನಮಗೆ ಬೇಡದ ಪುಸ್ತಕಗಳು, ಬ್ಯಾಗ್ಸ್, ಶೂ, ಬಟ್ಟೆಗಳು, ಏನೇ ಇದ್ದರೂ ಇಲ್ಲಿ ನೀಡಿದಲ್ಲಿ ದುಬಾರಿ ಬೆಲೆ ಕೊಟ್ಟು ಖರೀದಿಸಲಾಗದವರು ಕೊಂಡೊಯ್ಯಬಹುದು. ಅಗತ್ಯವಿಲ್ಲದಿದ್ದರೆ ಇಲ್ಲಿ ಬಿಡಿ, ಅಗತ್ಯವಿದ್ದರೆ ತೆಗೆದುಕೊಳ್ಳಿ ಎಂಬ ಬರಹದಡಿ ಕರುಣೆಯ ಗೋಡೆ ತಲೆಯೆತ್ತಿ ನಿಂತಿದೆ.
ಯಂಗ್ ಇಂಡಿಯನ್ ನ ಮೈಸೂರು ವಿಭಾಗದ ಮುಖ್ಯಸ್ಥೆ ಅಕ್ಷರ ಕುಮಾರ್ ಅವರು ಈ ಸಂಸ್ಥೆ ಬೆಳೆದುಬಂದ ಬಗ್ಗೆ, ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ ಒನ್ಇಂಡಿಯಾ ಕನ್ನಡದೊಡನೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ.
ಯಂಗ್ ಇಂಡಿಯನ್ ತಂಡದ ಉದ್ದೇಶವೇನು?
'ಯಂಗ್ ಇಂಡಿಯನ್' ಎಂಬ ಹೆಸರಿನ ಈ ಎನ್ ಜಿ ಓ, ಮೈಸೂರಿನಲ್ಲಿ ಸುಮಾರು 60ಕ್ಕೂ ಹೆಚ್ಚು ಯುವ ತರುಣರ ಪಡೆಯನ್ನು ಕಟ್ಟಿದೆ. ಇವರ ಕಾಯಕವೇ ಬಡವರ ಸೇವೆ. ವೃತ್ತಿಯಲ್ಲಿ ಇವರೆಲ್ಲರು ಉನ್ನತ ಹುದ್ದೆಯಲ್ಲಿದ್ದಾರೆ. ಆದರೆ ತಮ್ಮ ಸಮಾಜಮುಖಿ ಕಾಯಕಗಳಿಂದಲೇ ಬಡವರ ಸೇವೆಗೆ ಮುಂದಾಗಿದ್ದಾರೆ. ಇಂಥವರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ.
ಯೋಜನೆ ರೂಪುಗೊಂಡಿದ್ದು ಹೇಗೆ?
ಇದೇ ತೆರನಾದ ಯೋಜನೆ ಸದ್ಯ ಹೈದರಾಬಾದ್ ಸೇರಿದಂತೆ ಹಲವು ರಾಜ್ಯಗಳಲ್ಲಿದೆ. ನಮ್ಮ ರಾಜ್ಯದಲ್ಲಿ ಎಂದಿಗೂ ಕೂಡ ಈ ರೀತಿಯ ಯೋಜನೆ ಜಾರಿಗೆ ತರುವಲ್ಲಿ ಯಾರೂ ಮುಂದೆ ಬಂದಿರಲಿಲ್ಲ. ಹಾಗಾಗಿ ಒಮ್ಮೆ ಹಾಗೆಯೇ ಮಾತಿಗೆ ಕುಳಿತಾಗ ಮೈಸೂರಿನಲ್ಲಿ ಈ ಯೋಜನೆಯನ್ನು ಆರಂಭಿಸದರೆ ಹೇಗೇ ಎಂಬ ಕಲ್ಪನೆ ಮೂಡಿತು. ಅದಕ್ಕೆ ಎಲ್ಲರ ಸಹಕಾರವೂ ದೊರೆಯಿತು. ನಮ್ಮ ತಂಡದ ಸದಸ್ಯರಾದ ನಿಧಿ ಶಾ, ಪ್ರತಿಭಾ ನಾಯ್ಕ್, ವಿನಯ್ ಶಂಕರ್, ಚೈತ್ರ ನಾರಾಯಣ್, ರಾಧ ಎಲ್ಲರೂ ಈ ಯೋಜನೆಗಾಗಿ ಶ್ರಮಿಸಿದೆವು.
ಯಾರೂ ಇದನ್ನು ದುರುಪಯೋಗಪಡಿಸಿಕೊಂಡಿಲ್ಲ
ಯೋಜನೆಯನ್ನು ಜಾರಿಗೆ ತಂದಿದ್ದು, ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕೇ ಹೊರತು, ಇದರ ದುರುಪಯೋಗವಲ್ಲ. ಜನರ ಪ್ರತಿಕ್ರಿಯೆ ನೋಡಿ ನಮಗೆ ಸಂತಸವಾಗುತ್ತಿದೆ. ಇನ್ನು ಮೇಯರ್ ನಮ್ಮ ಯೋಜನೆಗೆ ಸಹಾಯವಾಗಲೆಂದು ಸಿಸಿಟಿವಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ತಂಡದಿಂದ ಮತ್ತಷ್ಟು ಯೋಜನೆ ಜಾರಿಗೆ ತರುತ್ತೇವೆ ಎನ್ನುತ್ತಾರೆ ಅಕ್ಷರ.
ಈ ಮಳಿಗೆ ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ಮಳಿಗೆಯಲ್ಲಿ ನಮಗೆ ಬೇಡವಾದ ವಸ್ತುಗಳಾದ ಬ್ಯಾಗ್, ಪುಸ್ತಕ, ಶೂಗಳನ್ನು ಬಿಟ್ಟು ಹೋಗಬಹುದು. ನಿಮಗೆ ಬೇಕಾದ ವಸ್ತುಗಳು ಈ ಮಳಿಗೆಯಲ್ಲಿದರೆ ಉಚಿತವಾಗಿ ಕೊಂಡೊಯ್ಯಬಹುದು ಎಂಬ ಪರಿಕಲ್ಪನೆಯಿಂದ ಈ ಮಳಿಗೆಯನ್ನ ಪ್ರಾರಂಭಿಸಲಾಗಿದೆ. ದುಬಾರಿ ಹಣಕೊಟ್ಟು ಖರೀದಿಸಲಾಗದವರು ಇಲ್ಲಿಂದ ವಸ್ತುಗಳನ್ನು ಕೊಂಡೊಯ್ಯಬಹುದು. ಆದರಿಂದಲೇ ಈ ಮಳಿಗೆಯ ಮೇಲೆ ನಿಮಗೆ 'ಅಗತ್ಯವಿಲ್ಲದಿದ್ದರೇ ಇಲ್ಲಿ ಬಿಡಿ, ಅಗತ್ಯವಿದ್ದರೆ ತೆಗೆದುಕೊಳ್ಳಿ' ಎಂಬ ಪರಿಕಲ್ಪನೆಯಿಂದ ಈ ಅಂಗಡಿಗೆ 'ಕರುಣೆಯ ಗೋಡೆ' ಎಂದು ಹೆಸರಿಡಲಾಗಿದೆ.
ಇಂದಿನ ಪೀಳಿಗೆಯ ಯುವಕರಿಗೆ ಮಾದರಿ
ನಮ್ಮ ಯುವಜನರು ಎಂದರೇ ಸಾಕು ಮೊಬೈಲ್, ಚಾಟಿಂಗ್, ನೆಟ್, ಬ್ರೌಸಿಂಗ್ ಎಂದು ಬಡಬಡಾಯಿಸುವವರೇ ಹೆಚ್ಚು. ಅಂಥವರಿಗೆ ಈ ತಂಡ ಮಾಡುತ್ತಿರುವ ಸಮಾಜಮುಖಿ ಕಾಯಕ ಮಾದರಿ ಎನ್ನಬಹುದು. ಮಾನವೀಯತೆಯೊಂದಿದ್ದರೆ ಎಂಥ ಕೆಲಸ ಕೂಡ ಸಾಧ್ಯ ಎನ್ನುವುದನ್ನು ಇವರು ತೋರಿಸಿಕೊಟ್ಟಿದ್ದಾರೆ. ಹ್ಯಾಟ್ಸ್ ಆಫ್ ಟು ಯಂಗ್ ಇಂಡಿಯನ್ ಟೀಂ.