ಹುಣಸೂರು ಶಾಸಕ ಮಂಜುನಾಥ್ ಖೆಡ್ಡಾಕ್ಕೆ ಬಿದ್ರಾ? ವಿಶ್ವನಾಥ್ ಪ್ಲಸ್ಸಾ!
ಮೈಸೂರು, ಮಾರ್ಚ್ 19: ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಕ್ಷೇತ್ರ ಹುಣಸೂರು ಈ ಬಾರಿ ಸದ್ದು ಮಾಡಲಿದೆ. ಅದಕ್ಕೆ ಕಾರಣ ಏನೆಂದರೆ, ಹಾಲಿ ಶಾಸಕ ಎಚ್.ಪಿ.ಮಂಜುನಾಥ್ ಅವರಿಗೆ ವಿರುದ್ಧವಾಗಿ ಮಾಜಿ ಸಂಸದ ಎಚ್.ವಿಶ್ವನಾಥ್ ಸ್ಪರ್ಧಿಸುತ್ತಿದ್ದಾರೆ.
ಒಂದು ಕಾಲದಲ್ಲಿ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡು ಕುರುಬ ಸಮುದಾಯದ ಪ್ರಭಾವಿ ನಾಯಕರಾಗಿದ್ದ ವಿಶ್ವನಾಥ್ ಈಗ ಜೆಡಿಎಸ್ ನಲ್ಲಿದ್ದಾರೆ. ಅವರು ತಮ್ಮದೇ ಆದ ಪ್ರಭಾವವನ್ನು ಹೊಂದಿರುವ ಕಾರಣ ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತಗಳು ವಿಭಜನೆಯಾಗುವ ಸಾಧ್ಯತೆ ಹೆಚ್ಚಿದೆ. ಆ ಕಾರಣಕ್ಕೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆತಂಕ ಪಡುವಂತಾಗಿದೆ.
ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್
ಈ ಕ್ಷೇತ್ರದಲ್ಲಿ ಪ್ರಮುಖವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿಯಿದ್ದು, ಬಿಜೆಪಿ ಮೂರನೇ ಸ್ಥಾನದಲ್ಲಿದೆ. ಇಲ್ಲಿ ಬಿಜೆಪಿ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬುವುದರಲ್ಲಿ ಎರಡು ಮಾತಿಲ್ಲ. ಹುಣಸೂರು ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತದಾರರನ್ನು ಸೆಳೆಯುವ ಸಲುವಾಗಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಮೈಸೂರು ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪರಿಚಯ
ಇನ್ನೊಂದೆಡೆ ಶಾಸಕ ಎಚ್.ಪಿ.ಮಂಜುನಾಥ್ ಕ್ಷೇತ್ರದ ಜನರ ಮನದ ಮಿಡಿತವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಆಗಾಗ ಜನರ ನಡುವೆ ಕಾಣಿಸಿಕೊಳ್ಳುವುದು, ಒಂದಷ್ಟು ವೈಯಕ್ತಿಕ ಸಹಾಯ ಮಾಡುವುದು ಹೀಗೆ ಜನರ ಕಣ್ಣಿನಲ್ಲಿ ಜನಾನುರಾಗಿಯಾಗಿದ್ದಾರೆ. ಹೀಗಾಗಿ ಮಂಜುನಾಥ್ ಅವರತ್ತ ಇರುವ ಮತದಾರರ ಒಲುಮೆಯನ್ನು ತಿರುಗಿಸಿ, ತಮ್ಮತ್ತ ಮಾಡಿಕೊಳ್ಳುವುದು ಯಾರಿಗಾದರೂ ಅಷ್ಟು ಸುಲಭವಲ್ಲ. ಆದರೆ ಆ ನಿಟ್ಟಿನಲ್ಲಿ ಜೆಡಿಎಸ್ ಕಾರ್ಯಪ್ರವೃತ್ತವಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಅಧ್ಯಕ್ಷ ಶಿವಕುಮಾರ್ ಗೆ ಕುರ್ಚಿ ಕೊಟ್ಟಿರಲಿಲ್ಲ
ಹುಣಸೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ವಿಶ್ವನಾಥ್ ಅವರು ಘೋಷಣೆಯಾಗುತ್ತಿದ್ದಂತೆಯೇ ಆ ಪಕ್ಷದ ಕಾರ್ಯಕರ್ತರಲ್ಲಿ ಹುರುಪು ಬಂದಿದೆ. ಅಷ್ಟೇ ಅಲ್ಲ, ನಗರಸಭೆ ಅಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಕಾಂಗ್ರೆಸ್ ಗೆ ನಗರಸಭೆ ಅಧ್ಯಕ್ಷಗಾದಿ ಕೈ ತಪ್ಪುವಂತೆ ನೋಡಿಕೊಳ್ಳುವ ಮೂಲಕ ಮೊದಲ ಮರ್ಮಾಘಾತ ನೀಡಿದ್ದಾರೆ. ಆದರೆ ಇದನ್ನು ರಾಜಕೀಯದ ದೃಷ್ಠಿಯಿಂದ ಕೂಲಾಗಿ ತೆಗೆದುಕೊಳ್ಳಬೇಕಾದ ಎಚ್.ಪಿ.ಮಂಜುನಾಥ್ ಅವರು ತಮ್ಮ ಸೇಡನ್ನು ತೀರಿಸಿಕೊಳ್ಳಲು ಕಾಯುತ್ತಿದ್ದರು. ಇತ್ತೀಚೆಗೆ ಹುಣಸೂರು ಪಟ್ಟಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದ ಸರಕಾರಿ ಕಾರ್ಯಕ್ರಮದಲ್ಲಿ ಪ್ರಥಮ ಪ್ರಜೆ ಶಿವಕುಮಾರ್ ಗೆ ಕುರ್ಚಿಯನ್ನೇ ನೀಡದೆ ಅವಮಾನ ಮಾಡುವ ಮೂಲಕ ಸಣ್ಣತನ ಮೆರೆದಿದ್ದು, ಅದು ಈಗ ಭಾರೀ ಪ್ರತಿಭಟನೆಗೆ ವೇದಿಕೆ ಮಾಡಿಕೊಟ್ಟಿದೆ.
ದಲಿತ ವಿರೋಧಿ ಪಟ್ಟ ಕಟ್ಟಿಕೊಂಡ ಶಾಸಕ
ಮುಯ್ಯಿಗೆ ಮುಯ್ಯಿ ತೀರಿಸಲು ಮುಂದಾದ ಎಚ್.ಪಿ.ಮಂಜುನಾಥ್ ಈಗ ದಲಿತ ವಿರೋಧಿ ಪಟ್ಟ ಕಟ್ಟಿಕೊಳ್ಳುವಂತಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜೆಡಿಎಸ್ ವಿವಿಧ ದಲಿತಪರ ಸಂಘಟನೆಗಳ ಸಹಕಾರದೊಂದಿಗೆ ಕ್ಷೇತ್ರದಲ್ಲಿ ಭಾರೀ ಪ್ರತಿಭಟನಾ ಮೆರವಣಿಗೆ ನಡೆಸಿದೆ. ಇದು ಶಾಸಕ ಎಚ್.ಪಿ.ಮಂಜುನಾಥ್ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಶಾಸಕ ಮಂಜುನಾಥ್ ರಿಂದ ದಲಿತರ ವಿರುದ್ಧ ಕ್ರೌರ್ಯ
ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹರಿಹರ ಆನಂದಸ್ವಾಮಿ ಮಾತನಾಡಿ, ಶಾಸಕರು ದಲಿತರ ಮತ ಪಡೆದು ದಲಿತರನ್ನೇ ತುಳಿಯುವ ಕ್ರೌರ್ಯದೊಂದಿಗೆ ನಡೆದುಕೊಂಡಿದ್ದಾರೆ. ಮಾನವೀಯ ಮೌಲ್ಯಗಳಿಗೆ ಬೆಲೆ ನೀಡದೆ ವಯಸ್ಸಾದ ಹಿರಿಯ ಕಾರ್ಯಕರ್ತರೊಂದಿಗೆ ಕೀಳಾಗಿ ನಡೆದುಕೊಳ್ಳುವ ಮೂಲಕ ಕೀಳು ಮಟ್ಟದ ರಾಜಕರಣ ಮಾಡುತ್ತಿದ್ದಾರೆ. ದಲಿತ ವ್ಯಕ್ತಿಯೊಬ್ಬ ನಗರಸಭೆ ಅಧ್ಯಕ್ಷರಾಗಿರುವುದನ್ನು ಸಹಿಸದೆ ಹುಣಸೂರಿನಲ್ಲಿ ಆಯೋಜಿಸಿದ್ದ ಮುಖ್ಯಮಂತ್ರಿಗಳ ಸರ್ಕಾರಿ ಕಾರ್ಯಕ್ರಮದಲ್ಲಿ ಕನಿಷ್ಠ ಕುರ್ಚಿ ನೀಡದೆ ಅವಮಾನಿಸಿದ್ದು, ಇದು ದಲಿತ ಸಮುದಾಯವನ್ನೇ ಅವಮಾನಿಸಿದಂತೆ ಆಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ದಲಿತರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ. ಈ ಸಂಬಂಧ ಉಪವಿಭಾಗಾಧಿಕಾರಿ ನಿತೀಶ್ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಯಾವ ಪರಿಣಾಮ ಬೀರುತ್ತದೆ ಎಂಬ ಕುತೂಹಲ
ಸದ್ಯಕ್ಕೆ ಈ ವಿಚಾರ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದು ಮುಂದಿನ ದಿನಗಳಲ್ಲಿ ನೋಡಬೇಕಾಗಿದೆ. ಚುನಾವಣೆ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ಶಾಸಕ ಎಚ್.ಪಿ. ಮಂಜುನಾಥ್ ಅವರಿಗೆ ಈ ವಿಚಾರ ಒಂದಷ್ಟು ಹಿನ್ನಡೆ ತಂದರೆ ಅಚ್ಚರಿ ಪಡಬೇಕಾಗಿಲ್ಲ.