ಡಿಕೆಶಿ ಬಂಧನ ಖಂಡಿಸಿ ಕೆ.ಆರ್. ನಗರದಲ್ಲಿ ಭುಗಿಲೆದ್ದ ಪ್ರತಿಭಟನಾಕಾರರ ಆಕ್ರೋಶ
ಮೈಸೂರು, ಸೆಪ್ಟೆಂಬರ್ 5: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ಮೈಸೂರಿನ ಕೆ.ಆರ್ ನಗರದಲ್ಲೂ ಪ್ರತಿಭಟನೆ ನಡೆದಿದೆ. ಪ್ರತಿಭಟನಾಕಾರರು ರಸ್ತೆ ಮಧ್ಯೆ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ಇಂದು ಬೆಳಿಗ್ಗೆ ಕೆ ಆರ್ ನಗರದ ಪಟ್ಟಣದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಸರಣಿ ಪ್ರತಿಭಟನೆ ನಡೆಸಿದರು. ಈ ನಡುವೆ ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಕಾಂಗ್ರೆಸ್ -ಜೆಡಿಎಸ್ ಕಾರ್ಯಕರ್ತರು ಸಹ ಟೈರ್ ಗೆ ಬೆಂಕಿ ಹಚ್ಚಿ ಧರಣಿ ನಡೆಸಿದ್ದು, ಅಂಗಡಿ ಮುಂಗಟ್ಟು ಮುಚ್ಚಿಸಿ ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ಗ್ರಾಮದ ಆಸ್ಪತ್ರೆ ವೃತ್ತದಲ್ಲಿ ರಾಮನಾಥಪುರ-ಕೆ.ಆರ್ ನಗರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದು ಈ ಹಿನ್ನೆಲೆ ರಾಮನಾಥಪುರ-ಕೆ.ಆರ್ ನಗರ ಮಾರ್ಗದ ರಸ್ತೆ ಸಂಚಾರ 30 ನಿಮಿಷಗಳ ಕಾಲ ಅಸ್ತವ್ಯಸ್ತವಾಗಿತ್ತು. ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಿರೋಧ ಪಕ್ಷದ ಪ್ರಬಲ ನಾಯಕರನ್ನು ಗುರಿಯಾಗಿಸಿಕೊಂಡು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ. ಅವರ ರಾಜಕೀಯ ಜೀವನವನ್ನೇ ಕೊನೆಗಾಣಿಸುವ ವ್ಯವಸ್ಥಿತ ಹುನ್ನಾರವೂ ನಡೆಯುತ್ತಿದೆ. ಇ.ಡಿ, ಐ.ಟಿಯನ್ನು ಬಳಸಿಕೊಂಡು ನಾಯಕರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವ ಬಿಜೆಪಿ ನಾಯಕರಿಗೆ ಶೋಭೆಯಲ್ಲ ಎಂದು ಪ್ರತಿಭಟನಾಕರರು ಕುಟುಕಿದರು.












Click it and Unblock the Notifications