ಕೋವಿಡ್ ಸಮಯದಲ್ಲಿ ಬಿಜೆಪಿಯಿಂದ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ; ಡಾ. ಜಿ. ಪರಮೇಶ್ವರ್
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಆರೋಪಿಸಿದ್ದು, ಚೀನಾ ಮೂಲದ ಸರಕುಗಳಿಗೆ ಭಾರೀ ಮೌಲ್ಯ ನಿಗದಿ ಮಾಡಿ ಅವ್ಯವಹಾರ ನಡೆಸಲಾಗಿದೆ, ಈ ಬಗ್ಗೆ ಯಾವ ರೀತಿ ತನಿಖೆ ಮಾಡಿಸಬೇಕು ಎಂಬುದರ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಿ. ಪರಮೇಶ್ವರ್, ಕೋವಿಡ್ ಹಗರಣವನ್ನು ಎಸ್ಐಟಿ ಅಥವಾ ಸಿಬಿಐಗೆ ವಹಿಸಬೇಕೆ ಎಂಬುದರ ಬಗ್ಗೆ ಕ್ಯಾಬಿನೆಟ್ ಉಪ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಕೋವಿಡ್ ವೇಳೆ ಮಾತ್ರೆ ಮತ್ತು ಬೆಡ್ಗಳ ಖರೀದಿಯಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರವಾಗಿದೆ. ಈ ಬಗ್ಗೆ ನ್ಯಾ. ಕುನ್ಹ ಅವರ ವರದಿ ಕೈ ಸೇರಿದ್ದು, ವರದಿ ಪರಿಶೀಲನೆ ಮಾಡಿದ್ದೇವೆ ಎಂದರು.

ಜಮೀರ್ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ
ಜಮೀರ್ ಅಹಮದ್ರ ಕರಿಯ ಕುಮಾರಸ್ವಾಮಿ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಕಾಂಗ್ರೆಸ್ ನಾಯಕರೇ ಜಮೀರ್ ಬಗ್ಗೆ ಸಿಟ್ಟಾಗಿದ್ದಾರೆ ಎನ್ನಲಾಗಿದೆ. ಜಮೀರ್ ಅಹಮದ್ರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ನಾನು ಎಐಸಿಸಿ ಶಿಸ್ತು ಪಾಲನ ಸಮಿತಿ ಸದಸ್ಯನಾಗಿದ್ದ ಸಂದರ್ಭದಲ್ಲಿ ಪಕ್ಷಕ್ಕೆ ಹಾನಿಯಾಗುವ ಹೇಳಿಕೆ ಕೊಡುವ ನಾಯಕರಿಗೆ ನೋಟಿಸ್ ಕೊಟ್ಟು ಕರೆಸುತ್ತಿದ್ದೆವು. ಅಗತ್ಯವಿದ್ದರೆ ಸಸ್ಪೆಂಡ್ ಕೂಡ ಮಾಡುತ್ತಿದ್ದೆವು. ಜಮೀರ್ ಹೇಳಿಕೆಯಿಂದ ಚುನಾವಣೆಯಲ್ಲಿ ಸ್ವಲ್ಪ ಪರಿಣಾಮ ಬೀರಿದೆ ಎಂದು ಪಕ್ಷದ ನಾಯಕರೇ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಬೇಕಾದರೆ ಪಕ್ಷದ ಶಿಸ್ತು ಪಾಲನ ಸಮಿತಿಗೆ ವರದಿ ಕೊಟ್ಟರೆ, ಶಿಸ್ತುಪಾಲನ ಅಧ್ಯಕ್ಷ ರಹೀಂ ಖಾನ್ ಕ್ರಮ ಕೈಗೊಳ್ಳಬಹುದು ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಮೇಲೆ ತನಿಖೆ ಬೇಕಾದರೆ ಮಾಡಲಿ. ಇಡಿ, ಸಿಬಿಐ ಅವರು ನಮ್ಮನ್ನು ಕೇಳಿ ತನಿಖೆ ಮಾಡುತ್ತಾರಾ. ತನಿಖೆ ಮಾಡಲಿ ಬಿಡಿ. ಸಿದ್ದರಾಮಯ್ಯ ಅವರನ್ನು ಕಂಡರೆ ಬಿಜೆಪಿ ನಾಯಕರಿಗೆ ಹೊಟ್ಟೆ ಉರಿ, ಸಿಎಂ ಕೆಳಗಿಳಿಸಲು ದಿನಾಂಕ ನಿಗದಿಯಾಗಿದೆ ಎನ್ನುತ್ತಿದ್ದಾರೆ. ಪಕ್ಷದಲ್ಲಿ ಅದರ ಬಗ್ಗೆ ಚರ್ಚೆಯೇ ಆಗಿಲ್ಲ ಎಂದು ಹೇಳಿದರು.
ಬಿಪಿಎಲ್ ಕಾರ್ಡ್ ಪರಿಷ್ಕರಣೆಗೂ ಮತ್ತು ನಮ್ಮ ಗ್ಯಾರಂಟಿ ಯೋಜನೆಗೂ ಸಂಬಂಧವಿಲ್ಲ. ಈಗಾಗಲೇ ಸರಕಾರಿ ನೌಕರರು, ತೆರಿಗೆ ಕಟ್ಟುತ್ತಿರುವವವರು, ಬಿಪಿಎಲ್ ಕಾರ್ಡ್ ಬಳಸುತ್ತಿದ್ದಾರೆ. ಅಂತಹವರು ತಾವೇ ಕಾರ್ಡ್ ವಾಪಸ್ ಮಾಡಬೇಕಾಗಿತ್ತು. ಈಗ ನಾವೇ ಅದನ್ನು ಗುರುತಿಸಿ ಪರಿಷ್ಕರಣೆ ಮಾಡುತ್ತಿದ್ದೇವೆ ಎಂದರು.
ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಲು ಬಿಜೆಪಿ ಈಗಲೂ ಪ್ರಯತ್ನ ಮಾಡುತ್ತಿದೆ. ಅದು ಎಷ್ಟು ಕೋಟಿ ಎಂಬುದು ಗೊತ್ತಿಲ್ಲ. ಪ್ರಯತ್ನವಂತೂ ಅವರು ಮಾಡುತ್ತಲೇ ಇರುತ್ತಾರೆ. ಮುಖ್ಯಮಂತ್ರಿಗಳೇ ಕೋಟಿ ವಿಚಾರ ಹೇಳಿದ ಮೇಲೆ ಅದು ಸತ್ಯ ಇರಬಹುದು. ಆರೋಪಗಳ ಬಗ್ಗೆ ಸರಿಯಾದ ದಾಖಲೆ ಸಿಕ್ಕರೆ ತನಿಖೆ ಮಾಡಲಾಗುತ್ತದೆ ಎಂದು ಹೇಳಿದರು.












Click it and Unblock the Notifications