ಮೈಸೂರು ಅರಮನೆ ಪ್ರವೇಶ ದರ ಏರಿಕೆ, ಭಾರತೀಯರು-ವಿದೇಶೀಯರಿಗೆ ಒಂದೇ ದರ
ಜಗದ್ವಿಖ್ಯಾತ ಮೈಸೂರು ಅರಮನೆಯ ಪ್ರವೇಶ ದರದ ಟಿಕೆಟ್ ಏರಿಕೆ ಮಾಡಲಾಗಿದೆ. ಈ ಮೂಲಕ ಭಾರತೀಯರು ಹಾಗೂ ವಿದೇಶೀಯರಿಗೂ ಒಂದೇ ದರ ನಿಗದಿಪಡಿಸಲಾಗಿದೆ
ಮೈಸೂರು, ಮೇ 13: ಮೈಸೂರು ಅರಮನೆ ವೀಕ್ಷಣೆಗೆ ತೆರಳುವ ಪ್ರವಾಸಿಗರಿಗೆ ಒಂದು ಕಹಿಸುದ್ದಿ, ಇನ್ನೊಂದು ಸಿಹಿ ಸುದ್ದಿ. ಅದೇನೆಂದರೆ ಮೈಸೂರು ಅರಮನೆ ಪ್ರವೇಶ ದರವನ್ನು 10 ರುಪಾಯಿ ಹೆಚ್ಚಳ ಮಾಡಲಾಗಿದೆ. ಭಾರತೀಯರಿಗೆ ಈ ವರೆಗೆ 40 ರುಪಾಯಿ ಇದ್ದ ದರವನ್ನು 50ಕ್ಕೆ ಏರಿಸಿದೆ
ಅರಮನೆ ಪ್ರವೇಶಕ್ಕೆ ಭಾರತೀಯರು ಹಾಗೂ ವಿದೇಶಿಯರಿಗೆ ಏಕರೂಪದ ಪ್ರವೇಶ ದರ ನಿಗದಿ ಮಾಡಲಾಗಿದೆ. ಸದ್ಯ ಭಾರತೀಯರಿಗೆ 40 ರುಪಾಯಿ ಇದ್ದು, ಅದನ್ನು 50ಕ್ಕೆ ಆಡಳಿತ ಮಂಡಳಿ ಏರಿಸಿದೆ. ಇನ್ನು ವಿದೇಶೀಯರಿಂದಲೂ ಇಷ್ಟೇ ದರ ಪಡೆಯಲು ನಿರ್ಧಾರ ಮಾಡಲಾಗಿದೆ.[ಅರಮನೆ ದ್ವಾರದಲ್ಲಿ ಬೆಂಕಿ: ತಾತ್ಕಲಿಕ ಕೌಂಟರ್ ಓಪನ್]

ಮಕ್ಕಳಿಗೆ 10 ರುಪಾಯಿ ಪ್ರವೇಶ ದರ ಹಾಗೆಯೇ ಮುಂದುವರಿಸಲು ಸೂಚನೆ ನೀಡಲಾಗಿದ್ದು, 5 ವರ್ಷದ ಒಳಗಿನ ಮಕ್ಕಳಿಗೆ ಉಚಿತ ಪ್ರವೇಶ ಇರುತ್ತದೆ. ಹಾಗೆಯೇ ಅರಮನೆಯಲ್ಲಿ ವಿದ್ಯುತ್ ದೀಪಾಲಂಕಾರ ನಿತ್ಯ ಬೆಳಗಲಿದ್ದು, ನಿತ್ಯ 15 ನಿಮಿಷ ದೀಪಾಲಂಕಾರ ಮಾಡಲಾಗುತ್ತಿದೆ.
ಈ ಮಧ್ಯೆ ಭಾನುವಾರ ಹಾಗೂ ಸರಕಾರಿ ರಜೆ ದಿನಗಳಲ್ಲಿ ಒಂದು ಗಂಟೆ ವಿದ್ಯುತ್ ದೀಪಾಲಂಕಾರ ಕಂಗೊಳಿಸಲಿದೆ. ಈಗ ನಿತ್ಯ 5 ನಿಮಿಷ, ಭಾನುವಾರ ಮತ್ತು ಸರಕಾರಿ ರಜಾ ದಿನಗಳಂದು 30 ನಿಮಿಷ ವಿದ್ಯುತ್ ದೀಪಾಲಂಕಾರ ಇತ್ತು. ಈ ವ್ಯವಸ್ಥೆಯನ್ನು ಮಾಡಲು ಮುಖ್ಯ ಕಾರ್ಯದರ್ಶಿ ಸುಭಾಷಚಂದ್ರ ಕುಂಠಿ ನೇತೃತ್ವದಲ್ಲಿ ನಡೆದ ಮೈಸೂರು ಅರಮನೆ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಯಿತು.[ಮೈಸೂರು-ಹುಬ್ಬಳ್ಳಿ ರೈಲಿಗೊಂದು ಹೆಸರು ಹೇಳ್ರೀ....]

ಮಹತ್ವದ ನಿರ್ಣಯಗಳು
ಅರಮನೆ ಆವರಣದಲ್ಲಿ ಆಯೋಜಿಸಲಾಗುವ ಧ್ವನಿ-ಬೆಳಕು ಕಾರ್ಯಕ್ರಮವು ಸದ್ಯ ಕನ್ನಡದಲ್ಲಿ ಇದ್ದು, ಇದನ್ನು ಹಿಂದಿ ಮತ್ತು ಇಂಗ್ಲಿಷ್ ನಲ್ಲೂ ಇನ್ನು ಎರಡು ತಿಂಗಳೊಳಗೆ ಏರ್ಪಡಿಸಲು ತೀರ್ಮಾನಿಸಲಾಯಿತು. ಅರಮನೆ ಉದ್ಯಾನಗಳನ್ನು ಮೇಲುಸ್ತುವಾರಿ ಮಾಡಲು ಸಮಿತಿ ರಚನೆ, ಹೆಚ್ಚುವರಿ 1000 ಎಲ್ ಪಿಎಚ್ ಸಾಮರ್ಥ್ಯದ ನೀರಿನ ಘಟಕ ಸ್ಥಾಪಿಸುವ ನಿರ್ಣಯ ಕೈಗೊಳ್ಳಲಾಯಿತು.

ಪ್ರತಿ ವರ್ಷ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಯುಗಾದಿ ಉತ್ಸವ, ಜೂನ್ ನಲ್ಲಿ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ, ಡಿಸೆಂಬರ್ ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲು ಹಾಗೂ ಅರಮನೆಯ ಪ್ರಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಹ ತೀರ್ಮಾನಿಸಲಾಯಿತು.[ಮೈಸೂರಿನ ಅರಮನೆ ದ್ವಾರದ ಆವರಣದಲ್ಲಿ ಬೆಂಕಿ]

ಅರಮನೆ ಮಂಡಳಿ ಕಚೇರಿಯ ಕಡತ ನಿರ್ವಹಣೆಗೆ ಇ-ಕಚೇರಿ ತಂತ್ರಾಂಶವನ್ನು ಅನುಷ್ಠಾನಗೊಳಿಸುವುದು, ಅರಮನೆಯಲ್ಲಿ 3ಡಿ ಪ್ರೊಜೆಕ್ಷನ್ ಕೈಗೊಳ್ಳಲು ವಿಸ್ತೃತ ಯೋಜನಾ ವರದಿಯನ್ನು (ಡಿ.ಪಿ.ಆರ್.) ಸಿದ್ಧಪಡಿಸಲು ಸೂಚಿಸಲಾಯಿತು.

ಅವಘಡದಿಂದ ರಕ್ಷಣೆಗೆ ಪೂರ್ವ ತಯಾರಿ
ಅರಮನೆಯ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು ಅರಮನೆ ಆವರಣದಲ್ಲಿ ಅಗ್ನಿ ಶಾಮಕ ನಿಯಂತ್ರಣ ಘಟಕ ಸ್ಥಾಪಿಸಲು ತೀರ್ಮಾನಿಸಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಇರುವಂತೆ ಸಿಐಐ ವತಿಯಿಂದ ಸಿ ಎಸ್ ಆರ್. ಯೋಜನೆ ಅಡಿ ಪಾರಂಪರಿಕ ಕಟ್ಟಡವಾದ ಅರಮನೆ ವಿನ್ಯಾಸಕ್ಕೆ ಧಕ್ಕೆಯಾಗದ ಹಾಗೆ ಹೈಟೆಕ್ ಗ್ರೀನ್ ಟಾಯ್ಲೆಟ್ ಗಳನ್ನು ಪ್ರಾಚ್ಯವಸ್ತು ಮತ್ತು ಪರಂಪರೆ ಇಲಾಖೆಯಿಂದ ಅನುಮತಿ ಪಡೆದು ನಿರ್ಮಿಸುವ ಯೋಜನೆ ಮಾಡಲಾಗಿದೆ.












Click it and Unblock the Notifications