ಸುಳ್ವಾಡಿ ವಿಷಪ್ರಸಾದ ಸೇವನೆ ಪ್ರಕರಣ:ತನಿಖೆ ವಿಳಂಬ ಸಾಧ್ಯತೆ
ಮೈಸೂರು, ಡಿಸೆಂಬರ್ 18 : ಸುಳ್ವಾಡಿಯ ಮಾರಮ್ಮನ ದೇವಸ್ಥಾನದ ವಿಷ ಪ್ರಸಾದ ಸೇವಿಸಿ 14 ಜನ ಸಾವನ್ನಪ್ಪಿದ್ದು, ಪ್ರಸಾದದಲ್ಲಿ ಕೀಟನಾಶಕ ಸೇರಿಸಿರುವುದು ಸಾಬೀತಾಗಿದೆ. ಪುಣೆಯ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದ್ದು, ಪ್ರಸಾದದಲ್ಲಿ ಆರ್ಗನೋ ಫಾಸ್ಫೇಟ್ ಗುಂಪಿನ ಮೋನೋಕೋಟೋಪಾಸ್ ಎಂಬ ಕೀಟನಾಶಕ ಬೆರೆಸಿರುವುದು ತಿಳಿದುಬಂದಿದೆ.
ಇದನ್ನು ಎಲ್ಲಾ ಬೆಳೆಗಳಿಗೆ ಕೀಟನಾಶಕವಾಗಿ ಬಳಸಲಾಗುತ್ತದೆ. ಇದರಲ್ಲಿ ವಿಷ ಪ್ರಮಾಣ ಹೆಚ್ಚಾಗಿರುತ್ತದೆ. ಇದು ಮನುಷ್ಯನ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಇದನ್ನು ಸೇವಿಸದವರು ತಕ್ಷಣ ಸಾವಿಗೀಡಾಗುತ್ತಾರೆ. ಈ ಕೀಟನಾಶಕ ಎಲ್ಲಾ ರಸಗೊಬ್ಬರ ಮತ್ತು ಕೀಟ ನಾಶಕ ಮಾರಾಟ ಮಳಿಗೆಗಳಲ್ಲಿ ಸುಲಭವಾಗಿ ಯಾರಿಗೆ ಬೇಕಾದರೂ ದೊರೆಯುತ್ತದೆ. ಇದಕ್ಕೆ ಯಾವುದೇ ದಾಖಲೆ ಬೇಕಿಲ್ಲ ಎನ್ನುತ್ತಾರೆ ಕೃಷಿ ವಿದ್ಯಾಲಯದ ತಜ್ಞ ಡಾ. ಮಹಂತೇಶ್.
ಈ ಕೀಟನಾಶಕ ಸೇವಿಸಿದರೆ ಮೊದಲು ಹೊಟ್ಟೆ ಉರಿ, ವಾಂತಿ ಭೇದಿ ಆಗುತ್ತದೆ. ನಂತರ ವ್ಯಕ್ತಿಗೆ ಕೈಕಾಲು ಸೆಳೆತ ಆರಂಭವಾಗುತ್ತದೆ. ದೇಹದ ಸ್ವಾಧೀನ ಕಳೆದುಕೊಳ್ಳುತ್ತಾರೆ. ಆರ್ಗನೋ ಫಾಸ್ಫೇಟ್ ಸೇವಿಸಿದರೆ ಅದಕ್ಕೆ ಔಷಧ ಎಂದರೆ ಆಟ್ರೋಫಿನ್. ಇದನ್ನು ಸಾಮಾನ್ಯವಾಗಿ ಎಲ್ಲಾ ವಿಷಗಳ ಚಿಕಿತ್ಸೆಗೂ ಬಳಸಲಾಗುತ್ತದೆ.

ಆಟ್ರೋಫಿನ್ ಇಂಜೆಕ್ಷನ್ ರೋಗಿಗೆ ನೀಡಿದ ಬಳಿಕ 48 ಗಂಟೆಗಳ ಕಾಲ ರೋಗಿಗಳು ತಾವಾಗಿಯೇ ಇರುವುದಿಲ್ಲ ಎನ್ನುತ್ತಾರೆ ವೈದ್ಯರು. ಅಂದಹಾಗೆ ಈ ಕೀಟನಾಶಕ ಖರೀದಿಸಲು ಯಾವುದೇ ರೀತಿಯ ದಾಖಲೆ ಅಗತ್ಯವಿಲ್ಲ. ಹೀಗಾಗಿ ಇದನ್ನು ಯಾರು ಖರೀದಿಸಿದರು? ಎಲ್ಲಿ ಖರೀದಿಸಿದರು? ಎಂಬುದು ಪೊಲೀಸರಿಗೂ ತಿಳಿಯಲು ಕಷ್ಟಸಾಧ್ಯ.ಇದರಿಂದ ತನಿಖೆ ವಿಳಂಬವಾಗುವ ಸಾಧ್ಯತೆಯಿದೆ. ಜಲ್ಲಿಪಾಳ್ಯದಲ್ಲಿ ಕೀಟನಾಶಕ ಖರೀದಿಸಿರುವ ಶಂಕೆಯೂ ಇದೆ. ಈ ಕೀಟನಾಶದಕ ದರ 1 ಲೀಗೆ 465 ರೂ ಇದೆ.
ಅಮೆರಿಕಾದಲ್ಲಿ ನಿಷೇಧ:
ಆರ್ಗನೋ ಫಾಸ್ಫೇಟ್ ಅತ್ಯಂತ ವಿಷಕಾರಕವಾಗಿದ್ದು ಮನುಷ್ಯ, ಪ್ರಾಣಿ, ಪಕ್ಷಿಗಳ ಮೇಲೆ ಬೇಗ ಪರಿಣಾಮ ಬೀರುತ್ತದೆ. ಇದನ್ನು ಅಮೆರಿಕ, ಯೂರೋಪ್ ಇನ್ನಿತರೆ ರಾಷ್ಟ್ರಗಳಲ್ಲಿ ನಿಷೇಧಿಸಲಾಗಿದೆ. ಆದರೆ ಭಾರತದಲ್ಲಿ ಇದಕ್ಕೆ ಅನುಮತಿ ಇದೆ. ಇದೊಂದು ಅಗ್ಗದ ಕೀಟನಾಶಕವಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವವರು ಹೆಚ್ಚಾಗಿ ಇದನ್ನು ಸೇವಿಸುತ್ತಾರೆ.












Click it and Unblock the Notifications