ಕಬಿನಿಗೆ ಒಳಹರಿವು ಹೆಚ್ಚಳ; ನದಿಪಾತ್ರದ ಜನರ ಎದೆಯಲ್ಲಿ ಢವಢವ
ಮೈಸೂರು, ಜೂನ್ 20; ಕೇರಳದ ವೈನಾಡು ಪ್ರದೇಶಗಳಲ್ಲಿ ಮುಂಗಾರು ಚುರುಕಾಗಿದ್ದು, ಧಾರಾಕಾರವಾಗಿ ಮಳೆಯಾಗುತ್ತಿದೆ. ಪರಿಣಾಮ ಎಚ್. ಡಿ. ಕೋಟೆ ತಾಲೂಕಿನ ಬೀಚಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ನದಿ ಪಾತ್ರದ ಜನರ ಎದೆಯಲ್ಲಿ ಢವ ಢವ ಶುರುವಾಗಿದೆ.
ಸದ್ಯ ಕೇರಳ ಸೇರಿದಂತೆ ಕಬಿನಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ 16200 ಕ್ಯುಸೆಕ್ ಇದ್ದು, ಮುಂದಿನ ದಿನಗಳಲ್ಲಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಇದೀಗ ಕಬಿನಿ ಜಲಾಶಯದಿಂದ ಮುನ್ನೆಚ್ಚರಿಕೆ ಕ್ರಮವಾಗಿ 5000 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.
ಮುಂದೆ ಜಲಾಶಯದ ಒಳ ಹರಿವಿನ ಪ್ರಮಾಣ ಆಧರಿಸಿ, ಹೆಚ್ಚುವರಿ ನೀರನ್ನು ನದಿಗೆ ಹರಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕಬಿನಿ ನದಿಯ ಪಾತ್ರದಲ್ಲಿರುವ ಮತ್ತು ನದಿಯ ಎರಡೂ ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ, ಪಾಸ್ತಿ ಹಾಗೂ ಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ, ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಜಲಾಶಯ ವಿಭಾಗದ ಕಾರ್ಯಪಾಲಕ ಅಭಿಯಂತರ ಸಿ. ಬಿ. ಸುರೇಶ್ ಬಾಬು ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯ ಎಚ್. ಡಿ. ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿ ಕಬಿನಿ ಜಲಾಶಯವಿದೆ. ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಇದೂ ಸಹ ಒಂದು. ಕಾವೇರಿ ನದಿಯ ಉಪನದಿಯಾದ ಕಬಿನಿ/ ಕಪಿಲಾ ನದಿಗೆ ಅಡ್ಡವಾಗಿ ಈ ಜಲಾಶಯ ನಿರ್ಮಾಣ ಮಾಡಲಾಗಿದೆ. 2,284 ಜಲಾಶಯದ ಪೂರ್ಣಮಟ್ಟವಾಗಿದೆ. ಜಲಾಶಯದಲ್ಲಿ 19.50 ಟಿಎಂಸಿ ನೀರನ್ನು ಸಂಗ್ರಹ ಮಾಡಬಹುದು.

ತಳಭಾಗದ ಜನರಲ್ಲಿ ಶುರುವಾಗಿದೆ ಆತಂಕ
ಕಬಿನಿ ಜಲಾಶಯದ ತಳಭಾಗದಲ್ಲಿರುವ ಗ್ರಾಮಗಳು ಹಾಗೂ ನಂಜನಗೂಡು ಪಟ್ಟಣದ ಜನರ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವವಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಪ್ರವಾಹ ಏರ್ಪಡುತ್ತಿದ್ದು, ಪ್ರತಿ ವರ್ಷವೂ ಸಂಕಷ್ಟ ಅನುಭವಿಸುವುದು ತಪ್ಪದಂತಾಗಿದೆ. ಧಾರಾಕಾರ ಮಳೆಯಾದರೆ ಕಬಿನಿ ಜಲಾಶಯ ಬಹುಬೇಗ ಭರ್ತಿಯಾಗುತ್ತದೆ. ಜತೆಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆಯೇ ಜಲಾಶಯದ ಭದ್ರತಾ ದೃಷ್ಠಿಯಿಂದ ಸಹಸ್ರಾರು ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತದೆ. ಆಗ ತಗ್ಗು ಪ್ರದೇಶದಲ್ಲಿ ವಾಸ ಮಾಡುವ ಜನಕ್ಕೆ ತೊಂದರೆ ತಪ್ಪಿದಲ್ಲ.

1 ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ಹೊರಕ್ಕೆ
ಕಳೆದ ವರ್ಷ ಒಂದು ಲಕ್ಷ ಕ್ಯುಸೆಕ್ ಗಿಂತಲೂ ಹೆಚ್ಚು ನೀರನ್ನು ಹೊರಕ್ಕೆ ಬಿಡಲಾಗಿತ್ತು. ಈ ವೇಳೆ ಪ್ರವಾಹ ಸೃಷ್ಟಿಯಾಗಿ ತಳಭಾಗದಲ್ಲಿ ವಾಸಿಸುತ್ತಿದ್ದ ಜನರ ಮನೆಗೆ ನೀರು ನುಗ್ಗಿದ್ದರಿಂದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುವಂತಾಗಿತ್ತು. ಈ ಬಾರಿಯೂ ಅಂತಹದ್ದೇ ಪರಿಸ್ಥಿತಿ ನಿರ್ಮಾಣವಾಗುತ್ತೇನೋ ಎಂಬ ಭಯ ಜನರನ್ನು ಕಾಡ ತೊಡಗಿದೆ. ಏಕೆಂದರೆ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಹೊರಗೆ ಬಿಟ್ಟಿದ್ದೇ ಆದರೆ ರೈತರು ಬೆಳೆದ ಭತ್ತ, ಕಬ್ಬು, ಬಾಳೆ ಹೀಗೆ ಎಲ್ಲ ಬೆಳೆಗಳು ಮುಳುಗಡೆಯಾಗುತ್ತವೆ. ಜತೆಗೆ ಕೆಲವು ಗ್ರಾಮಗಳ ಜನ ರಸ್ತೆ ಸಂಪರ್ಕ ಕಡಿದುಕೊಂಡು ಪರದಾಡಬೇಕಾಗುತ್ತದೆ.

ನಾಲ್ಕು ವರ್ಷಗಳಿಂದ ನಿಲ್ಲದ ಪ್ರವಾಹ ಪರಿಸ್ಥಿತಿ
ಕಬಿನಿ ಜಲಾಶಯ ವ್ಯಾಪ್ತಿಗೆ ಬರುವ ಗ್ರಾಮೀಣ ಪ್ರದೇಶಗಳ ಜನ ಪ್ರವಾಹ ಪರಿಸ್ಥಿತಿಯನ್ನು ಸುಮಾರು ನಾಲ್ಕೈದು ದಶಕಗಳ ಬಳಿಕ ಕಳೆದ ನಾಲ್ಕು ವರ್ಷಗಳಿಂದ ಪ್ರವಾಹದಿಂದ ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಲೇ ಬರುತ್ತಿದ್ದಾರೆ. ಜಲಾಶಯದಿಂದ ಬಿಡಲಾಗುವ ನೀರಿನ ಪ್ರಮಾಣ ಯಾವಾಗ ಬೇಕಾದರೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾಗರೆ ಮಾಗುಡಿಲ್ಲುಗೆ ತೆರಳುವ ರಸ್ತೆ ನೀರಿನಲ್ಲಿ ಮುಳಗಡೆಯಾಗಿ, ಈ ವ್ಯಾಪ್ತಿಯ ಜನ ರಸ್ತೆ ಸಂಪರ್ಕ ಕಳೆದುಕೊಳ್ಳುತ್ತಾರೆ. ಇಷ್ಟೇ ಅಲ್ಲದೆ ಕಪಿಲ ನದಿ ರೌದ್ರಾವತಾರ ತಾಳುವುದರಿಂದ ಅದರ ಪರಿಣಾಮವನ್ನು ನಂಜನಗೂಡು ಪಟ್ಟಣದ ಜನರು ಎದುರಿಸಬೇಕಾಗುತ್ತದೆ.

ಕಪಿಲೆ ರೌದ್ರಾವತಾರ ತಾಳದಿರಲೆಂದು ಪ್ರಾರ್ಥನೆ
ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಮಲ್ಲನ ಮೂಲೆ ರಸ್ತೆ ಸಂಪೂರ್ಣ ಜಲಾವೃತವಾಗುತ್ತದೆ. ನಂಜನಗೂಡು ತಾಲೂಕಿನ ಕಣೆನೂರು, ಹುಲ್ಲಹಳ್ಳಿ, ರಾಂಪುರ, ಹಂಡುವಿನಹಳ್ಳಿ, ದೇಬೂರು, ನಂಜನಗೂಡು, ಸುತ್ತೂರು, ವರುಣ ವ್ಯಾಪ್ತಿಯ ಜಮೀನುಗಳು ಮುಳುಗಡೆಯಾಗುತ್ತವೆ. ಇದೆಲ್ಲದಕ್ಕಿಂತ ಮುಖ್ಯವಾಗಿ ನಂಜನಗೂಡು ಪಟ್ಟಣದ ಶ್ರೀಕಂಠೇಶ್ವರ ದೇವಾಲಯದ ಬಳಿ ಇರುವ ಪರಶುರಾಮ ದೇವಾಲಯ, ಸ್ಧಾನಘಟ್ಟ, ಒಕ್ಕಲಗೇರಿ, ಸರಸ್ವತಿ ಕಾಲೋನಿ, ತೋಪಿನಬೀದಿಯ ಮನೆಗಳಿಗೂ ನೀರು ನುಗ್ಗುತ್ತದೆ. ಅಷ್ಟೇ ಅಲ್ಲದೆ ತಾಲೂಕಿನ ಕುಳ್ಳಂಕನಹುಂಡಿ, ಬೊಕ್ಕಳ್ಳಿ, ಹೆಜ್ಜಿಗೆ, ತೊರೆಮಾವು, ಸುತ್ತೂರು, ಗ್ರಾಮಗಳಲ್ಲಿ ನದಿ ಪಾತ್ರದ ಜಮೀನು, ಮನೆಗಳು ಜಲಾವೃತವಾಗುತ್ತವೆ. ಇದೆಲ್ಲವನ್ನು ನೆನಪಿಸಿಕೊಳ್ಳುತ್ತಿರುವ ಜನ ಈ ಬಾರಿಯಾದರೂ ಕಪಿಲೆ ರೌದ್ರಾವತಾರ ತಾಳದಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.












Click it and Unblock the Notifications