Get Updates
Get notified of breaking news, exclusive insights, and must-see stories!

ಮುಂಗಾರಿಗೂ ಮೊದಲೇ ಮಳೆ, ನಾಗರಹೊಳೆಗೆ ಬಂತು ಜೀವಕಳೆ

ಮೈಸೂರು, ಮೇ 23; ಬೇಸಿಗೆಯಲ್ಲಿ ಬಿಸಿಲಿನ ಧಗೆಗೆ ಒಣಗಿ ಹೋಗಿದ್ದ ಗಿಡಮರಗಳು ಇತ್ತೀಚೆಗೆ ಸುರಿದ ಮಳೆಗೆ ಮರು ಜೀವ ಪಡೆದುಕೊಂಡಿರುವುದರಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಈಗ ಹಸಿರಿನಿಂದ ಕಂಗೊಳಿಸುತ್ತಿದೆ.

ಮರಗಿಡಗಳ ನಡುವೆ ಬೆಳೆದು ನಿಂತ ಹುಲ್ಲು, ಕುರುಚಲು ಗಿಡಗಳೊಳಗೆ ವನ್ಯಪ್ರಾಣಿಗಳು ಖುಷಿಯಿಂದ ಎಲ್ಲೆಂದರಲ್ಲಿ ಅಡ್ಡಾಡುತ್ತಾ ನಲಿದಾಡುತ್ತಿವೆ. ಜತೆಗೆ ಜನರನ್ನು ಕಾಣುವಾಗ ಅಚ್ಚರಿಯಿಂದ ನೆಗೆದು ಓಡುವ ದೃಶ್ಯಗಳು ಮನಮೋಹಕವಾಗಿವೆ.

ಕಳೆದ ಕೆಲವು ವರ್ಷಗಳಿಂದೀಚೆಗೆ ಅಗ್ನಿ ಅನಾಹುತದಿಂದ ಬೋಳಾಗಿದ್ದ ನಾಗರಹೊಳೆ ಹಸಿರಾಗಿದೆ. ಸತ್ತು ಹೋದ ಬಿದಿರುಗಳಿಂದ ಹುಟ್ಟಿ ಬಂದ ಮೊಳಕೆಗಳು ಮೆಳೆಗಳಾಗಿ ಬೆಳೆಯುತ್ತಾ ನಿಧಾನವಾಗಿ ಕಾಡನ್ನು ಆಕ್ರಮಿಸಿಕೊಳ್ಳುತ್ತಿವೆ. ಇದರಿಂದ ಮೈದಾನದಂತಿದ್ದ ಬಹುತೇಕ ಪ್ರದೇಶಗಳು ಹಸಿರಿನಿಂದ ಕಂಗೊಳಿಸಲಾರಂಭಿಸಿವೆ.

ಸದ್ಯ ನಾಗರಹೊಳೆ ವ್ಯಾಪ್ತಿಯಲ್ಲಿ ಸಂಚರಿಸುವವರಿಗೆ ಹಸಿರ ಲೋಕ ತೆರೆದಂತೆ ಭಾಸವಾಗುತ್ತದೆ. ಕಳೆದ ಮೂರು ವರ್ಷಗಳಿಂದ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿರುವ ಕಾರಣ ಕಾಡುಗಳು ಸಮೃದ್ಧಿಯಾಗಿವೆ. ಕಾಡ್ಗಿಚ್ಚು ಕಡಿಮೆಯಾಗಿ ಅರಣ್ಯ ಸುರಕ್ಷಿತವಾಗಿದೆ.

ನಾಗರಹೊಳೆ ಪ್ರಾಣಿಗಳ ಆವಾಸ ತಾಣ

ನಾಗರಹೊಳೆ ಪ್ರಾಣಿಗಳ ಆವಾಸ ತಾಣ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಚೆಲುವು ಮೈಸೂರು ಮತ್ತು ಕೊಡಗಿಗೆ ವರದಾನವಾಗಿದ್ದು, ಸುಮಾರು 643 ಚ.ಕಿ.ಮೀ ವ್ಯಾಪ್ತಿಯಲ್ಲಿರುವ ಅರಣ್ಯವನ್ನು ವನ್ಯಪ್ರಾಣಿಗಳ ಆಹಾರ ಮತ್ತು ಕಾಡಿನ ರಕ್ಷಣೆ ದೃಷ್ಠಿಯಿಂದ ನಾಗರಹೊಳೆ, ಕಲ್ಲಹಳ್ಳ, ವೀರನಹೊಸಹಳ್ಳಿ, ಹುಣಸೂರು, ಆನೆಚೌಕೂರು, ಅಂತರಸಂತೆ, ಡಿ.ಬಿ.ಕುಪ್ಪೆ, ಮೇಟಿಕುಪ್ಪೆ ಹೀಗೆ ಎಂಟು ವಲಯಗಳಾಗಿ ವಿಂಗಡಣೆ ಮಾಡಲಾಗಿದೆ. ಅರಣ್ಯದ ನಡುವೆ ಹೆಮ್ಮರಗಳು, ಕುರುಚಲು ಕಾಡುಗಳು, ಬಿದಿರುಮೆಳೆಗಳು, ಕೆರೆ, ನದಿ, ತೊರೆ, ಬೆಟ್ಟ ಗುಡ್ಡ ಹೀಗೆ ಹತ್ತಾರು ಪ್ರಕೃತಿ ವಿಸ್ಮಯಗಳೊಂದಿಗೆ ಅಡಕವಾಗಿ ಕ್ರೂರ, ಸಾಧು ಪ್ರಾಣಿಗಳಿಗೆ ಆವಾಸ ಸ್ಥಾನಗಳಾಗಿದೆ.

ಹಸಿರ ವನಸಿರಿ ಕಣ್ಮನ ತಣಿಸುತ್ತಿದೆ

ಹಸಿರ ವನಸಿರಿ ಕಣ್ಮನ ತಣಿಸುತ್ತಿದೆ

ಚಂಡಮಾರುತದ ಪರಿಣಾಮ ಸುರಿದ ಮಳೆಯಿಂದಾಗಿ ಈಗಂತು ಹಸಿರ ವನಸಿರಿ ಕಣ್ಮನ ತಣಿಸುತ್ತಿದೆ. ಅದರ ನಡುವೆ ಹಿಂಡು ಹಿಂಡಾಗಿ ಕಾಣುವ ಅಚ್ಚರಿಯ ನೋಟ ಬೀರುವ ಜಿಂಕೆಗಳ ದಂಡು, ಕಾಡುಕೋಣ, ಕಾಡಾನೆ, ನಿರ್ಭಯವಾಗಿ ಹೆಜ್ಜೆಹಾಕುವ, ಹುಲಿ, ಆಗೊಮ್ಮೆ ಈಗೊಮ್ಮೆ ಕಾಣುವ ಕರಿಚಿರತೆ ನಾಗರಹೊಳೆಯ ಖ್ಯಾತಿಯನ್ನು ಮತ್ತಷ್ಟು ಪಸರಿಸುವಂತೆ ಮಾಡಿದೆ.

ಮೊದಲಿಗೆ ಹೋಲಿಸಿದರೆ ಇತ್ತೀಚೆಗಿನ ವರ್ಷಗಳಲ್ಲಿ ನಾಗರಹೊಳೆ ಅರಣ್ಯದಲ್ಲಿ ಒಂದಷ್ಟು ಬದಲಾವಣೆ ಕಾಣಿಸುತ್ತಿದೆ. ಇದಕ್ಕೆ ಮುಂಗಾರು ಉತ್ತಮವಾಗಿರುವುದು, ಕಾಡ್ಗಿಚ್ಚನ್ನು ಕೆಲವು ಮುಂಜಾಗ್ರತಾ ಕ್ರಮಗಳಿಂದ ಅರಣ್ಯ ಇಲಾಖೆ ತಡೆಗಟ್ಟಿರುವುದು, ಬಿದಿರು ಮೆಳೆಗಳು ಬೆಳೆದು ಬೋಳು ಅರಣ್ಯವನ್ನು ಆವರಿಸಿರುವುದು ಹೀಗೆ ಹತ್ತಾರು ಕಾರಣಗಳನ್ನು ಕೊಡಬಹುದಾಗಿದೆ.

ಕಾಡಿಗೆ ಬಂದಿದೆ ಜೀವಕಳೆ

ಕಾಡಿಗೆ ಬಂದಿದೆ ಜೀವಕಳೆ

ಇಷ್ಟೇ ಅಲ್ಲದೆ, ಈ ಬಾರಿ ಅರಣ್ಯದಲ್ಲಿರುವ ಚನ್ನಮ್ಮನಕಟ್ಟೆ, ಎರೆಕಟ್ಟೆ, ಮಂಟಳ್ಳಿಕೆರೆ, ಮಾದಳ್ಳಿಕಟ್ಟೆ ಮುದಗನೂರುಕೆರೆ, ಬಿಲ್ಲೆನಹೊಸಹಳ್ಳಿಕೆರೆ, ಭೀಮನಕಟ್ಟಿ, ಬಾಣೇರಿಕೆರೆ ಸೇರಿದಂತೆ ಹಲವು ಕೆರೆ-ಕಟ್ಟೆಗಳಲ್ಲಿ ಜಲವೃದ್ಧಿಯಾಗಿರುವುದು ಕಂಡು ಬರುತ್ತಿದೆ. ಸದ್ಯ ಹಸಿರು ಮೇವು ಸಮೃದ್ಧವಾಗಿರುವುದರಿಂದ ಸಸ್ಯಹಾರಿ ಪ್ರಾಣಿಗಳು ನೆಮ್ಮದಿಯಾಗಿ ಅರಣ್ಯದಲ್ಲಿ ವಿಹರಿಸುತ್ತಿವೆ. ಜತೆಗೆ ಪ್ರಾಣಿ, ಪಕ್ಷಿಗಳು ನೆಮ್ಮದಿಯಿಂದ ಬದುಕುತ್ತಿವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ನಾಗರಹೊಳೆ ಉದ್ಯಾನವೀಗ ಒಂಥರಾ ಖುಷಿಕೊಡುವ ಜೀವಕಳೆಯಿಂದ ತುಂಬಿದ ನಿಸರ್ಗ ಸ್ವರ್ಗವಾಗಿದೆ.

ಇದೆಲ್ಲದರ ನಡುವೆ ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಭಯವಂತು ಇದ್ದೇ ಇದೆ. ಇದೀಗ ಹಲಸಿನ ಹಣ್ಣಿನ ಕಾಲವಾಗಿರುವುದರಿಂದ ಹಲಸಿನ ಹಣ್ಣಿನ ವಾಸನೆ ಹಿಡಿದು ಕಾಡಾನೆ ಮತ್ತು ಕಾಡುಕೋಣಗಳು ಅರಣ್ಯ ದಾಟಿ ಬರುತ್ತಿದ್ದು, ಭಯದಲ್ಲಿ ಬದುಕುವಂತಾಗಿದೆ.

ಕಾಫಿ ತೋಟಕ್ಕೆ ಲಗ್ಗೆ ಇಡುವ ಸಾಧ್ಯತೆ

ಕಾಫಿ ತೋಟಕ್ಕೆ ಲಗ್ಗೆ ಇಡುವ ಸಾಧ್ಯತೆ

ಅತ್ತ ನಾಗರಹೊಳೆ ಅರಣ್ಯಕ್ಕೆ ಹೊಂದಿಕೊಂಡಂತಿರುವ ಕೊಡಗಿನ ಕಾಫಿ ತೋಟಕ್ಕೆ ಆನೆಗಳು ಲಗ್ಗೆಯಿಡುವ ಸಾಧ್ಯತೆಯಿದೆ. ಅದು ಏನೇ ಇರಲಿ ಇದೀಗ ನಾಗರಹೊಳೆ ಹಸಿರಿನಿಂದ ಕಂಗೊಳಿಸುತ್ತಿದ್ದು, ನಿಸರ್ಗ ಪ್ರೇಮಿಗಳನ್ನು ತನ್ನತ್ತ ಸೆಳೆಯುತ್ತಿದೆ. ಈಗಾಗಲೇ ಅರಣ್ಯದ ನಡುವಿನಲ್ಲಿರುವ ಕೆರೆಕಟ್ಟೆಗಳಲ್ಲಿ ನೀರು ಕಾಣಿಸುತ್ತಿದ್ದು, ಮಳೆಗಾಲದಲ್ಲಿ ಇನ್ನಷ್ಟು ಮಳೆ ಸುರಿದಿದ್ದೇ ಮುಂದಿನ ಬೇಸಿಗೆ ತನಕವೂ ಯಾವುದೇ ತೊಂದರೆಯಾಗದು.

ಏಕೆಂದರೆ ಈಗ ಮೂರು ನಾಲ್ಕು ವರ್ಷಗಳ ಹಿಂದೆ ನೀರಿಗೆ ಬರ ಬಂದು ಬೋರ್ ವೆಲ್ ಮತ್ತು ವಾಟರ್ ಟ್ಯಾಂಕರ್‌ಗಳ ಮೂಲಕ ಕೆರೆಯನ್ನು ತುಂಬಿಸಿ ವನ್ಯ ಪ್ರಾಣಿಗಳಿಗೆ ನೀರು ಒದಗಿಸಿದ್ದ ನೆನಪು ಈಗಲೂ ಹಸಿರಾಗಿದೆ. ಆದುದರಿಂದ ಮುಂದೆ ಅಂತಹ ಸ್ಥಿತಿ ಬಾರದಿರಲಿ ಎಂಬುದು ಪ್ರಕೃತಿ ಪ್ರೇಮಿಗಳ ಆಶಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+