ವೈದ್ಯರಿಗೆ ಅರಮನೇಲಿ ಕೆಲಸ ಕೊಡೋಕಾಗುತ್ತಾ?: ರಮೇಶ್ ಕುಮಾರ್ ತರಾಟೆ
ಮೈಸೂರು, ಅಕ್ಟೋಬರ್ 25 : 'ವೈದ್ಯರು ಸೇವೆ ಸಲ್ಲಿಸಲು ನಗರ ಪದೇಶವೇ ಆಗಬೇಕು ಎಂದರೆ ಅರಮನೆಯಲ್ಲೇ ಕೆಲಸ ಮಾಡಲು ಬನ್ನಿರಿ ಎಂದು ಅವರನ್ನು ಕರೆಯಬೇಕೇನೋ! ಹಾಗಾದರೆ ಹಳ್ಳಿಯ ಜನರ ಗತಿ ಏನಾಗಬೇಕು..?' ಹೀಗೆಂದು ಹೇಳಿದವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್ ಕುಮಾರ್.
ಮೈಸೂರು ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ವಿಭಾಗೀಯ ಮಟ್ಟದ ಆರೋಗ್ಯ ಇಲಾಖೆ ಪಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಪಡೆದ ಮಾಹಿತಿ ಪಡೆದ ಆರೋಗ್ಯ ಮತ್ತು ಸಚಿವ ರಮೇಶ್ ಕುಮಾರ್ ಮೇಲಿನಂತೆ ತಮ್ಮ ಅಸಮಾಧಾನ ಹೊರಹಾಕಿದರು.

ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಬಸವರಾಜು ಅವರು, ಇಲಾಖೆಯಲ್ಲಿ ವೈದ್ಯರು, ಸಿಬ್ಬಂದಿ ಸೇರಿದಂತೆ 331 ಹುದ್ದೆ ಖಾಲಿ ಇವೆ. ವೈದ್ಯರು, ಸಿಬ್ಬಂದಿ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಹಿಂಜರಿಯುತ್ತಾರೆ. ಹಾಗಾಗಿ ನೇಮಕಾತಿಗಾಗಿ ಅರ್ಜಿಗಳೇ ಬರುತ್ತಿಲ್ಲ ಎಂದಾಗ ಸಚಿವರು ಮೇಲಿನಂತೆ ಕಿಡಿಕಾರಿದರು. ಬಸವರಾಜು ಅವರು, ಜಿಲ್ಲೆಯಲ್ಲಿ 148 ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್ ಸಿ), 9 ಸಮುದಾಯ ಆರೋಗ್ಯ ಕೇಂದ್ರ(ಸಿಎಚ್ ಸಿ), 6 ತಾಲ್ಲೂಕು ಆಸ್ಪತ್ರೆಗಳಿವೆ. ಪ್ರಯೋಗಾಲಯ ತಂತ್ರಜ್ಞರ ಕೊರತೆ ಇದ್ದು, ನೇಮಕಾತಿಗಾಗಿ ಟೆಂಡರ್ ಆಹ್ವಾನಿಸಿದ್ದರೂ ಯಾವುದೇ ಅರ್ಜಿ ಬಂದಿರಲಿಲ್ಲ. ಹಾಗಾಗಿ ಮರು ಟೆಂಡರ್ ಕರೆಯಲಾಗಿದೆ ಎಂದು ವಿವರಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್ ಅವರು, ಇಂತಹ ಸಂದರ್ಭದಲ್ಲಿ ನಾವು ಕೆಲ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಆಕರ್ಷಕ ಪೋತ್ಸಾಹಧನ ಮತ್ತಿತರ ಸೌಲಭ್ಯ ಕೊಡುವ ಬಗ್ಗೆ ಪ್ರಚಾರ ಮಾಡಬೇಕು ಎಂದು ಸಲಹೆ ನೀಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಜಯ್ ಸೇಠ್ ಅವರು, ವಿಭಾಗ ಮಟ್ಟದಲ್ಲಿ ತಾಯಿ, ಮಕ್ಕಳ ಸಾವು ಮೈಸೂರು ಜಿಲ್ಲೆಯಲ್ಲೇ ಹೆಚ್ಚು ಸಂಭವಿಸುತ್ತಿದೆ. ಮಹಿಳೆಯರಲ್ಲಿ ಗಂಭೀರವಾದ ಅನೀಮಿಯಾ ಕಾಣಿಸಿಕೊಳ್ಳುತ್ತಿದೆ. ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದಾಗ, ಸಿಎಚ್ ಸಿಗಳಲ್ಲಿ ಅರಿವಳಿಕೆ ಮತ್ತು ಪ್ರಸೂತಿ ತಜ್ಞ ವೈದ್ಯರ ಕೊರತೆ ಇದೆ. ಅಲ್ಲದೆ, ಹೆಚ್ಚು ಅಪಾಯಕಾರಿ ಸ್ಥಿತಿಯಲ್ಲಿ ಗರ್ಭಿಣಿ ಯರನ್ನು ಕರೆತಂದ ಪ್ರಕರಣಗಳಲ್ಲಿ ಅಂತಹದ್ದು ಸಂಭವಿಸುತ್ತಿದೆ ಎಂದು ಡಾ.ಬಿ.ಬಸವರಾಜು ವಿವರಿಸಿದರು.

ಸಚಿವರು, ಕೊಡಗು ಗುಡ್ಡಗಾಡು ಪ್ರದೇಶ. ಅಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಅಲ್ಲಿ ಸಮರ್ಪಕ ಆರೋಗ್ಯ ಸೇವೆ ನೀಡಬೇಕು. ಅಲ್ಲದೆ, ಜಿಲ್ಲೆಯಲ್ಲಿ ಶುಶ್ರೂಷಕಿಯೊಬ್ಬರು ಅನೇಕ ವರ್ಷಗಳಿಂದ ಒಂದೇ ಕಡೆ ಸೇವೆಯಲ್ಲಿದ್ದಾರಂತೆ. ಆ ಬಗ್ಗೆ ಗಮನಹರಿಸಿ ಎಂದು ನಿರ್ದೇಶನ ನೀಡಿದರು.












Click it and Unblock the Notifications