ದೀಪಕ್ ಹತ್ಯೆಯಲ್ಲಿ ಬಿಜೆಪಿ ಕಾರ್ಪೋರೇಟರ್ ಎಂದ್ಹೇಳಿ ಯುಟರ್ನ್ ಹೊಡೆದ HDK
ಮೈಸೂರು, ಜನವರಿ 8 : ಮಂಗಳೂರಿನ ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ಬಿಜೆಪಿ ಕಾರ್ಪೋರೇಟರ್ ಕೈವಾಡ ಇದೆ ಎಂದು ಗಂಭೀರ ಆರೋಪ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಯೂಟರ್ನ್ ಹೊಡೆದಿದ್ದಾರೆ.
ಮಂಗಳೂರಿನ ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕರ ಕೈವಾಡವಿದೆ ಮತ್ತು ಬಿಜೆಪಿ ಕಾರ್ಪೋರೇಟರೊಬ್ಬರ ಕೈವಾಡವಿದೆ ಎಂಬ ಎರಡೆರೆಡು ಹೇಳಿಕೆ ನೀಡಿದ ಮೂರೇ ಗಂಟೆಯಲ್ಲಿ ನಾನು ಆ ರೀತಿ ಅರ್ಥ ಬರುವ ಹೇಳಿಕೆ ನೀಡಿಲ್ಲ. ನನಗಿರುವ ಮಾಹಿತಿ ಸುಳ್ಳು ಇರಬಹುದು. ನಾನು ತನಿಖೆ ದಿಕ್ಕು ತಪ್ಪಿಸುವ ಕೆಲಸ ಮಾಡಿಲ್ಲ ಎಂದು ಸಮಜಾಯಿಸಿ ನೀಡಿದರು.
ತಾವು ಮಾಡಿದ ಆರೋಪ ಕುರಿತು ಮಾತನಾಡಿದ ಅವರು, ಯಾರೋ ಒಬ್ಬ ವ್ಯಕ್ತಿಯ ಮೇಲೆ ನಾನು ಆರೋಪ ಹೊರಿಸಿಲ್ಲ. ನಮಗಿರುವ ಮಾಹಿತಿಯನ್ನು ನಾನು ಹೇಳಿದ್ದೇನೆ. ಆತನ ಹೆಸರನ್ನು ನಾನೇಕೆ ಹೇಳಲಿ. ಸರ್ಕಾರವೇ ತನಿಖೆ ಮಾಡಿ ಯಾರು ಎಂಬುದನ್ನು ಕಂಡು ಹಿಡಿಯಲಿ ಎಂದು ನುಣುಚಿಕೊಂಡರು.

ಸುಪಾರಿ ಪದವನ್ನು ನಾನು ಮೊದಲು ಬಳಸಿಲ್ಲ, ಮಾಧ್ಯಮಗಳೇ ದುಬೈನಿಂದ ಸುಪಾರಿ ಕೊಟ್ಟಿರುವ ಬಗ್ಗೆ ವರದಿ ಮಾಡಿದ್ದವು. ಅದನ್ನು ನಾನು ಹೇಳಿದ್ದೇನೆ ಎಂದು ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ಬಿಜೆಪಿ ಕಾರ್ಪೋರೇಟರ್ ಸುಪಾರಿಯ ಬಗ್ಗೆ ಸ್ಪಷ್ಟೀಕರಣ ನೀಡುವ ಪ್ರಯತ್ನ ಮಾಡಿದರು.
ಕೊಲೆ ಪ್ರಕರಣಗಳಲ್ಲಿ ರಾಷ್ಟ್ರೀಯ ಪಕ್ಷಗಳು ರಾಜಕಾರಣ ಮಾಡುವುದು ಬೇಡ ಎಂಬುದಷ್ಟೇ ನನ್ನ ಮಾತಿನ ಅರ್ಥವಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.
ದೀಪಕ್ ಹತ್ಯೆಯಲ್ಲಿ ಬಿಜೆಪಿ ಕಾರ್ಪೋರೇಟರ್ ಕೈವಾಡ ಇದೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.












Click it and Unblock the Notifications