ಸಂಪುಟ ವಿಸ್ತರಣೆ; "ಮುಂದೇನಾಗುತ್ತೋ ನೋಡ್ತಿರಿ" ಎಂದ ಮಾಜಿ ಸಿಎಂ
ಮೈಸೂರು, ಫೆಬ್ರವರಿ 06: "ಯಡಿಯೂರಪ್ಪ ಕಲೆಗಾರ, ಅವರಿಗೆ ಸರ್ಕಾರ ಬೀಳಿಸುವ, ಸರ್ಕಾರ ರಚಿಸುವ ಕಲೆ ಗೊತ್ತಿದೆ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಸಂಪುಟ ವಿಸ್ತರಣೆ ಬೆನ್ನಲ್ಲೇ ಎಚ್.ಡಿ.ಕೋಟೆಯ ಕಂಚಮಳ್ಳಿಯಲ್ಲಿ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ, "ಯಡಿಯೂರಪ್ಪ ಅನುಭವಿ. ಸರ್ಕಾರ ರಚಿಸುವುದು, ಬೀಳುವುದು ಎಲ್ಲಾ ಅವರಿಗೆ ಕರಗತವಾಗಿದೆ. ಹಿಂದೆ ಏನೆಲ್ಲ ಮಾಡಿದರು, ಹೇಗೆ ಸರ್ಕಾರ ರಚಿಸಿದರು ಎಂಬುದನ್ನು ಜನ ನೋಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಅಂತಷ್ಟೇ ಹೇಳುತ್ತೇನೆ" ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
"ಬೆಳಗ್ಗೆ ಒಂದು ತೀರ್ಮಾನ, ಮಧ್ಯಾಹ್ನ ಒಂದು ತೀರ್ಮಾನ ಮಾಡುತ್ತಿದ್ದಾರೆ. 105 ಜನ ಬಿಜೆಪಿ ಶಾಸಕರು ಕಡುಬು ತಿಂದುಕೊಂಡು ಕೂತಿರುತ್ತಾರಾ? ಈಗ ಎಲ್ಲರೂ ಸುಮ್ಮನಿದ್ದಾರೆ. 10 ಜನ ಪ್ರಮಾಣ ವಚನ ಸ್ವೀಕಾರ ಮಾಡಿದರೂ ಹೊಗಳುತ್ತಾರೋ, ಬೈಯುತ್ತಾರೋ ನೋಡಿ. ಈಗ ಸಮಸ್ಯೆ ಇಲ್ಲ. ಮುಂದೆ ಏನಾಗುತ್ತೆ ಅಂತ ನೋಡಿ" ಎಂದು ಎಚ್ಚರಿಸಿದ್ದಾರೆ.

ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದ ಬಗ್ಗೆಯೂ ಪ್ರಸ್ತಾಪಿಸಿದ ಅವರು, "ಅವರು ಈಗ ಸಮಸ್ಯೆ ಇಲ್ಲ ಎಂದಿದ್ದಾರೆ. ಆದರೆ ಮುಂದೆ ಏನಾಗುತ್ತೋ ಗೊತ್ತಿಲ್ಲ. ಭವಿಷ್ಯ ಹೇಳಲು ನಾನೇನು ಜ್ಯೋತಿಷಿ ಅಲ್ಲ" ಅಂದಿದ್ದಾರೆ.
"ಸಚಿವ ಸಂಪುಟ ವಿಸ್ತರಣೆ ವಿಚಾರ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಬಂದಿಲ್ಲ. ಆದ್ದರಿಂದ ನಾನು ಹೋಗಿಲ್ಲ. ಅದ್ಯಾರೋ ಅನರ್ಹರೋ, ಅರ್ಹರೋ ಹತ್ತು ಜನ ಸಚಿವರಾಗಿದ್ದಾರೆ. ಅವರಿಗೆ ಒಳ್ಳೆಯಾಗಲಿ ಎಂದು ಹಾರೈಸುತ್ತೇನೆ. ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಲಿ. ನಾರಾಯಣಗೌಡರು ಮಂಡ್ಯದ ಅಭಿವೃದ್ಧಿಯನ್ನೂ ಮಾಡಲಿ. ಯಾರು ಬೇಡ ಅಂತಾರೆ" ಎಂದಿದ್ದಾರೆ.












Click it and Unblock the Notifications