ಸ್ಟೀಲ್ ಬ್ರಿಡ್ಜ್ ನಿರ್ಮಿಸಲು ದುಡ್ಡೆಲ್ಲಿಂದ ಬಂತು? ಎಚ್ಡಿಕೆ ಪ್ರಶ್ನೆ
ಮೈಸೂರು, ಅಕ್ಟೋಬರ್ 16: ಕಾವೇರಿ ಹಾಗೂ ಮಹದಾಯಿ ಸಮಸ್ಯೆ ಬಗೆಹರಿಸುವತ್ತ ಹೆಚ್ಚಿನ ಗಮನ ಹರಿಸಿದೆ ಬೆಂಗಳೂರಿನ ಜನತೆಗೆ ಬೇಡವಾದ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಮುಂದಾಗಿರುವುದು ಖಂಡನಾರ್ಹ. ಇಷ್ಟಕ್ಕೂ ಸಾವಿರಾರು ಕೋಟಿ ರು ಖರ್ಚು ಮಾಡಲು ಇವರಿಗೆ ಹಣ ಎಲ್ಲಿಂದ ಬಂತು ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರು ಭಾನುವಾರ ಪ್ರಶ್ನಿಸಿದ್ದಾರೆ.
ಜನ ಸಾಮಾನ್ಯರಿಗೆ ಉಪಯೋಗವಿಲ್ಲದ ಈ ಯೋಜನೆಯಿಂದ ಯಾರಿಗೆ ಲಾಭವಾಗಲಿದೆ? ಯೋಜನೆ ಬಗ್ಗೆ ಸರಿಯಾದ ಅಭಿಪ್ರಾಯ ಸಂಗ್ರಹ ಮಾಡದೆ ಏಕಾಏಕಿ ಟೆಂಡರ್ ಕರೆದು ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವುದು ಅನುಮಾನಾಸ್ಪದವಾಗಿದೆ. ನಗರಾಭಿವೃದ್ಧಿಗಾಗಿ, ಟ್ರಾಫಿಕ್ ಸಮಸ್ಯೆ ತಗ್ಗಿಸಲು ಬೇಕಾದಷ್ಟು ಪರ್ಯಾಯ ಮಾರ್ಗಗಳಿವೆ ಎಂದು ಕುಮಾರಸ್ವಾಮಿ ಹೇಳಿದರು.

ಸುಮಾರು 1,800 ಕೋಟಿ ರು ಖರ್ಚು ಮಾಡಿ ಈ ಬ್ರಿಡ್ಜ್ ನಿರ್ಮಿಸುವ ಬದಲು ಅದೇ ಮೊತ್ತವನ್ನು, ಬೆಳೆ ನಷ್ಟದಿಂದ ಕಂಗಾಲಾಗಿರುವ ನಮ್ಮ ರೈತರಿಗೆ ನೀಡಬಹುದು. ಬೆಂಗಳೂರು ಅಭಿವೃದ್ಧಿ ತಜ್ಞರ ಅಭಿಪ್ರಾಯದಂತೆ ಈ ಯೋಜನೆಗೆ ಖರ್ಚು ಮಾಡಿರುವ ಮೊತ್ತದಲ್ಲಿ ಸುಮಾರು 30 ಲಕ್ಷದಷ್ಟು ಜನರಿಗೆ ಪ್ರಯೋಜನವಾಗುವಂತೆ 4000 ಸಾರಿಗೆ ಬಸ್ ಗಳನ್ನು ರಸ್ತೆಗಿಳಿಸಬಹುದು, ಇಲ್ಲವಾದಲ್ಲಿ ಸುಮಾರು 15 ಲಕ್ಷದಷ್ಟು ಜನರಿಗೆ ಪ್ರಯೋಜನವಾಗಬಲಲ, 300 ಕಿ.ಮೀ. ಉದ್ದದ ಟೆಂಡರ್ ಶ್ಯೂರ್ ಮಾದರಿಯ ಪಾದಚಾರಿ ಮಾರ್ಗವನ್ನು ನಿರ್ಮಿಸಬಹುದು ಎಂದಿದ್ದಾರೆ.
ಭಾರಿ ಪ್ರಮಾಣದಲ್ಲಿ ಸಾರ್ವಜನಿಕ ಹಣ ಲೂಟಿಗಾಗಿ ಒಂದು ಕಿ.ಮೀಟರ್ ಗೆ ಸುಮಾರು 300 ಕೋಟಿ ಎನ್ನುವಂತೆ 6 ಕಿ.ಮೀಗೆ ಸುಮಾರು 1,800 ಕೋಟಿ ಹಣವನ್ನು ವ್ಯರ್ಥವಾಗಿ ವ್ಯಯಿಸಲಾಗುತ್ತಿದೆ. ಈ ದುಬಾರಿ ವೆಚ್ಚದ ಕಾಮಗಾರಿಗೆ ಕಾಂಗ್ರೆಸ್ ಸರ್ಕಾರ ಈಗ ಕೈಹಾಕಿರುವುದನ್ನು ನೋಡಿದರೆ, ಮುಂದಿನ ಚುನಾವಣಾ ಪ್ರಚಾರಕ್ಕಾಗಿ ಸಿದ್ಧತೆ ನಡೆಸಿದಂತೆ ತೋರುತ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.












Click it and Unblock the Notifications