ಚಿತ್ರಗಳು : ಎಚ್.ಡಿ.ಕೋಟೆಯಲ್ಲಿ ವ್ಯಾಘ್ರ ಗುಂಡೇಟಿಗೆ ಬಲಿ
ಮೈಸೂರು, ನವೆಂಬರ್ 20 : ಸುಮಾರು ಒಂದು ತಿಂಗಳಿನಿಂದ ನಂಜನಗೂಡು, ಎಚ್.ಡಿ.ಕೋಟೆ, ಗುಂಡ್ಲುಪೇಟೆಯ ಕಾಡಿನಂಚಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಹುಲಿ ಅರಣ್ಯ ಇಲಾಖೆ ಅಧಿಕಾರಿಗಳ ಗುಂಡೇಟಿಗೆ ಬಲಿಯಾಗಿದೆ. ಇಬ್ಬರು ಮನುಷ್ಯರು ಮತ್ತು ಸಾಕು ಪ್ರಾಣಿಗಳನ್ನು ಈ ಹುಲಿ ಕೊಂದು ತಿಂದಿತ್ತು.
ನವೆಂಬರ್ 18ರಿಂದ ವಾಘ್ಯನನ್ನು ಹಿಡಿಯುವ ಕಾರ್ಯಾಚರಣೆ ಆರಂಭವಾಗಿತ್ತು. ಹುಲಿ ಕಂಡಲ್ಲಿ ಗುಂಡಿಟ್ಟು ಕೊಲ್ಲಲ್ಲು ಸರ್ಕಾರವೂ ಅನುಮತಿ ನೀಡಿತ್ತು. ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಕಾರ್ಯಾಚರಣೆ ನಡೆಸಿ ಗುರುವಾರ ಸಂಜೆ ಹುಲಿಯನ್ನು ಕೊಂದು ಹಾಕಿದ್ದಾರೆ. [ಹುಲಿ ಹಿಡಿಯುವ ಕಾರ್ಯಾಚರಣೆ ಚಿತ್ರಗಳು]
ದನ ಮೇಯಿಸುತ್ತಿದ್ದ ಶಿವಣ್ಣ, ಮತ್ತೊಬ್ಬಳು ಮಹಿಳೆಯನ್ನು ಕೊಂದು ಹಾಕಿದ್ದ ಹುಲಿ, ಇಬ್ಬರನ್ನು ಗಾಯಗೊಳಿಸಿತ್ತು. ಗುರುವಾರ ಸಂಜೆ ಕಾರ್ಯಾಚರಣೆ ವೇಳೆ ವಾಚರ್ ಶಿವಕುಮಾರ್ ಅವರ ಮೇಲೆ ಹುಲಿ ದಾಳಿ ಮಾಡಿದ ತಕ್ಷಣ ಶಾರ್ಪ್ ಶೂಟರ್ಗಳು ಗುಂಡು ಹಾರಿಸಿ ನರಭಕ್ಷಕ ಹುಲಿಯನ್ನು ಕೊಂದು ಹಾಕಿದ್ದಾರೆ. [ಮೈಸೂರಿನಲ್ಲಿ ಅಮೃತ, ಶಿವನನ್ನು ನೋಡಿ ಬನ್ನಿ]
ಹುಲಿ ಗುಂಡೇಟಿಗೆ ಬಲಿಯಾಗಿದೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ನೂರಾರು ಗ್ರಾಮಸ್ಥರು ಕಾಡಿಗೆ ಧಾವಿಸಿ ಬಂದರು. ಬುಧವಾರ ಮಧ್ಯಾಹ್ನ ಎಚ್.ಡಿ.ಕೋಟೆ ತಾಲೂಕಿನ ಹಾದನೂರು ಗ್ರಾಮದ ಕಾಡಿನಂಚಿನಲ್ಲಿ ದನ ಮೇಯಿಸುತ್ತಿದ್ದ ಶಿವಣ್ಣನನ್ನು ಹುಲಿ ಕೊಂದು ಹಾಕಿತ್ತು. ಈ ಸ್ಥಳದ ಸಮೀಪವೇ ಹುಲಿಯನ್ನು ಕೊಂದು ಹಾಕಲಾಗಿದೆ.
ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಸುಮಾರು ಒಂದು ತಿಂಗಳಿನಿಂದ ನಂಜನಗೂಡು, ಎಚ್.ಡಿ.ಕೋಟೆ, ಗುಂಡ್ಲುಪೇಟೆಯ ಕಾಡಿನಂಚಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಹುಲಿ ಅರಣ್ಯ ಇಲಾಖೆ ಅಧಿಕಾರಿಗಳ ಗುಂಡೇಟಿಗೆ ಗುರುವಾರ ಸಂಜೆ ಬಲಿಯಾಗಿದೆ. ಇಬ್ಬರು ಮನುಷ್ಯರನ್ನು ಇದು ಕೊಂದು ತಿಂದಿತ್ತು.
ಆನೆಗಳನ್ನು ಕರೆತರಲಾಗಿತ್ತು
ನರಭಕ್ಷಕ ಹುಲಿ ಹಿಡಿಯುವ ಕಾರ್ಯಾಚರಣೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ರಾಂಪುರ ಆನೆ ಶಿಬಿರದಿಂದ ಗಣೇಶ್, ಪಾರ್ಥಸಾರಥಿ ಮತ್ತು ರೋಹಿತ್ ಎಂಬ ಮೂರು ಆನೆಗಳನ್ನು ಬಳಸಿಕೊಳ್ಳಲಾಗಿತ್ತು.
ಶಾರ್ಪ್ ಶೂಟರ್ಗಳು ಬಂದಿದ್ದರು
ವ್ಯಾಘ್ರ ಕಂಡ ಕೂಡಲೇ ಅದನ್ನು ಗುಂಡಿಟ್ಟು ಹತ್ಯೆ ಮಾಡಲು ಸರ್ಕಾರ ಅನುಮತಿ ಕೊಟ್ಟಿತ್ತು. ಬೆಂಗಳೂರಿನಿಂದ ಇಬ್ಬರು ಶ್ರಾರ್ಪ್ ಶೂಟರ್ಗಳನ್ನು ಕರೆಸಲಾಗಿತ್ತು. ಗುರುವಾರ ಸಂಜೆ ವಾಚರ್ ಮೇಲೆ ದಾಳಿ ಮಾಡಿದ ಹುಲಿ ಶಾರ್ಪ್ ಶೂಟರ್ಗಳ ಗುಂಡಿಗೆ ಬಲಿಯಾಗಿದೆ.
ವಾಚರ್ ಮೇಲೆ ದಾಳಿ ಮಾಡಿದ ಹುಲಿ
ಗುರುವಾರದ ಕಾರ್ಯಾಚರಣೆ ಅಂತ್ಯಗೊಳಿಸುವ ಹೊತ್ತಿನಲ್ಲಿ ಬೋನಿಗೆ ದನದ ಕುರುವನ್ನು ಕಟ್ಟಲು ಹೋದ ವಾಚರ್ ಶಿವಕುಮಾರ್ ಎಂಬುವರ ಮೇಲೆ ಹುಲಿ ದಾಳಿ ನಡೆಸಿತು. ತಕ್ಷಣ ಶಾರ್ಪ್ ಶೂಟರ್ಗಳು ಗುಂಡು ಹಾರಿಸಿ ಹುಲಿಯನ್ನು ಹತ್ಯೆ ಮಾಡಿದರು. ಶಿವಕುಮಾರ್ ಅವರನ್ನು ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನವೆಂಬರ್ 18ರಿಂದ ಕಾರ್ಯಾಚರಣೆ
ನವೆಂಬರ್ 18ರಿಂದ ಹುಲಿಯನ್ನು ಹಿಡಿಯುವ ಕಾರ್ಯಾಚರಣೆ ಆರಂಭವಾಗಿತ್ತು. ಹುಲಿಯ ಪತ್ತೆಗಾಗಿ 8 ಕಡೆಗಳಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು. ಕರಿನಂಜನಬೆಟ್ಟದ ವ್ಯಾಪ್ತಿಯಲ್ಲಿ ಹುಲಿ ಅಡ್ಡಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಇಬ್ಬರನ್ನು ಕೊಂದು ತಿಂದಿತ್ತು
ನಾಗರಹೊಳೆ ಮತ್ತು ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿರುವ ಚಿರತೆ, ಆನೆ ಸೇರಿದಂತೆ ಕಾಡು ಪ್ರಾಣಿಗಳು ರೈತರ ಜಮೀನಿಗೆ ದಾಳಿ ಮಾಡುವುದು, ಸಾಕು ಪ್ರಾಣಿಗಳನ್ನು ಕೊಲ್ಲುವುದು ಹಿಂದಿನಿಂದಲೂ ನಡೆದು ಬಂದಿದೆ. ಆದರೆ, ಈ ಹುಲಿ ಇಬ್ಬರು ಮನುಷ್ಯರನ್ನು ಕೊಂದು ತಿಂದು ನರಭಕ್ಷಕ ಎಂಬ ಹಣೆ ಪಟ್ಟಿ ಹೊತ್ತುಕೊಂಡಿತ್ತು.
ಕಳೆದ ವರ್ಷ ಹುಲಿ ಮೃತಪಟ್ಟಿತ್ತು
2014ರಲ್ಲಿ ನಂಜನಗೂಡು ಅರಣ್ಯ ವ್ಯಾಪ್ತಿಯಲ್ಲಿ ಹುಲಿಯೊಂದು ದನಗಾಹಿ ಮೇಲೆ ದಾಳಿ ಮಾಡಿ ಆತನನ್ನು ಕೊಂದು ಹಾಕಿತ್ತು. ಆಗ ಕಾರ್ಯಾಚರಣೆ ನಡೆಸಿ ಅದನ್ನು ಜೀವಂತವಾಗಿ ಹಿಡಿದು ಮೈಸೂರಿನ ಮೃಗಾಲಯದಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ಹುಲಿ ಮೃತಪಟ್ಟಿತ್ತು.