ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿಗೊಳಿಸಿದ ಎಚ್.ಡಿ.ಕೋಟೆ ಪೊಲೀಸ್ ಅಧಿಕಾರಿ
ಮೈಸೂರು, ನವೆಂಬರ್ 27: ಸರ್ಕಾರ ಮಾಡಬೇಕಾದ ಕೆಲಸವನ್ನು ಪೊಲೀಸ್ ಅಧಿಕಾರಿಯೊಬ್ಬರು ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಸ್ತೆಯಲ್ಲಿನ ಗುಂಡಿಯನ್ನು ತಮ್ಮ ಸ್ವಂತ ಖರ್ಚಿನಿಂದ ದುರಸ್ತಿಗೊಳಿಸಿದ್ದಾರೆ.
ಎಚ್.ಡಿ. ಕೋಟೆ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ದೊರೆ ಸ್ವಾಮಿ ಈ ಸಮಾಜ ಕಾರ್ಯವನ್ನು ಮಾಡಿದವರು. ವಾಹನ ಸಂಚಾರಕ್ಕೆ ತೊಡಕಾಗುತ್ತಿದ್ದ ರಸ್ತೆಯಲ್ಲಿನ ಗುಂಡಿಗಳನ್ನು ತಾವೇ ಮುಂದೆ ನಿಂತು ದುರಸ್ತಿಗೊಳಿಸಿದ್ದಾರೆ. ಮುಂದೆ ಓದಿ...

4 ಕಿ.ಮೀ ಉದ್ದದ ರಸ್ತೆ ದುರಸ್ತಿ
ಎಚ್.ಡಿ. ಕೋಟೆಯಿಂದ ಮಲಾರ ಕಾಲೋನಿಗೆ ತೆರಳುವ ಮಾರ್ಗದಲ್ಲಿ 4 ಕಿಲೋ ಮೀಟರ್ ಉದ್ದದ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದವು. ಇದರಿಂದ ವಾಹನ ಸಂಚಾರಕ್ಕೆ ಬಹಳ ತೊಂದರೆಯಾಗುತ್ತಿತ್ತು. ಆ ಗುಂಡಿಗಳನ್ನು ಮುಚ್ಚಿ ದುರಸ್ತಿ ಮಾಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಇವರು ಪಾತ್ರರಾಗಿದ್ದಾರೆ.

ಸ್ನೇಹಿತರು, ಕುಟುಂಬದವರೂ ಜೊತೆಯಾದರು
ಕೆಲ ವರ್ಷಗಳಿಂದಲೂ ರಸ್ತೆ ದುರಸ್ತಿ ಮಾಡಿಸಿಕೊಡುವಂತೆ ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಎಚ್.ಡಿ.ಕೋಟೆ ಪೊಲೀಸ್ ಠಾಣೆಯ ಎಎಸ್ ಐ ದೊರೆಸ್ವಾಮಿ ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ಮಾಡಿಸಿದ್ದಾರೆ. ಎಚ್.ಡಿ.ಕೋಟೆ ಪಟ್ಟಣದ ಗದ್ದಿಗೆ ವೃತ್ತದಿಂದ ಮಲಾರ ಕಾಲೋನಿ ಕ್ರಾಸ್ ತನಕ ತಾವು, ತಮ್ಮ ಸ್ನೇಹಿತರು, ಪತ್ನಿ ಚಂದ್ರಿಕಾ, ಮಗಳು ವಿದ್ಯಾಶ್ರೀ ಸೇರಿ 15 ಕಾರ್ಮಿಕರ ಜೊತೆಗೂಡಿ ಸಿಮೆಂಟ್ ಹಾಕಿ ದುರಸ್ತಿ ಮಾಡಿಸಿದ್ದಾರೆ.

"ಇದ್ದರೆ ಇಂತಹ ಅಧಿಕಾರಿ ಇರಬೇಕು"
ರಸ್ತೆ ದುರಸ್ತಿ ಮಾಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದೆವು. ಆದರೆ ಯಾರೂ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಬಗ್ಗೆ ದೊರೆಸ್ವಾಮಿಯವರಿಗೆ ಹೇಳಿದಾಗ ತಕ್ಷಣ ಸ್ಪಂದಿಸಿ, ರಸ್ತೆ ದುರಸ್ತಿಗೆ ಬೇಕಾದ ಉಪಕರಣಗಳನ್ನು ತಂದು ಕೆಲಸ ಶುರು ಮಾಡಿದರು. ಇದ್ದರೆ ಇಂತಹ ಅಧಿಕಾರಿಗಳು ಇರಬೇಕು. ರಸ್ತೆಯನ್ನು ಅವರ ಹಣದಲ್ಲೇ ದುರಸ್ತಿ ಮಾಡಿಸಿದ್ದಾರೆ. ಅವರಿಗೆ ದೇವರ ಆಶೀರ್ವಾದ ಇರಲಿ ಎಂದು ಸ್ಥಳೀಯ ರಾಜು ಹಾರೈಸಿದ್ದಾರೆ.

ದೊರೆಸ್ವಾಮಿ ಅವರ ಮಾತು
ತಮ್ಮ ಕಾರ್ಯದ ಬಗ್ಗೆ ಒನ್ ಇಂಡಿಯಾ ಕನ್ನಡ ಪ್ರತಿನಿಧಿ ಜತೆ ಮಾತನಾಡಿದ ಎಎಸ್ಐ ದೊರೆಸ್ವಾಮಿ, "ರಸ್ತೆ ಹದಗೆಟ್ಟ ಹಿನ್ನೆಲೆ ಅಪಘಾತಗಳು ಸಂಭವಿಸಿ ಸಾವು-ನೋವುಗಳು ಆಗುತ್ತಿತ್ತು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಸ್ತೆ ರಿಪೇರಿ ಮಾಡಿದ್ದೇವೆ. ಈಗ ಸಂಚಾರ ಸುಗಮವಾಗಿದೆ. ದಾನಿಯೊಬ್ಬರು ಒಂದು ಲಾರಿ ಜಲ್ಲಿ ಒದಗಿಸಿಕೊಟ್ಟರು. ನಾನು ಸಿಮೆಂಟ್, ಡಸ್ಟ್, ಮಿಕ್ಸರ್ ಮಿಶೀನ್ ಬಾಡಿಗೆಗೆ ತಂದು 15 ಕೂಲಿಯವರನ್ನೂ ಸೇರಿಸಿಕೊಂಡು ದುರಸ್ತಿ ಮಾಡಿದ್ದೇವೆ ಎಂದರು ದೊರೆ ಸ್ವಾಮಿ.












Click it and Unblock the Notifications