ಯಡಿಯೂರಪ್ಪ ಇದ್ದರೆ ತಾನೇ ವಿಶ್ವನಾಥ್ ಮಂತ್ರಿ ಆಗೋದು: ಎಚ್ಡಿಕೆ
ಮೈಸೂರು, ಡಿಸೆಂಬರ್ 2: "ಉಪ ಚುನಾವಣೆ ಬಳಿಕ ಬಿ.ಎಸ್.ಯಡಿಯೂರಪ್ಪ ಇದ್ದರೆ ತಾನೇ ವಿಶ್ವನಾಥ್ರನ್ನು ಸಚಿವರನ್ನಾಗಿ ಮಾಡೋದು" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಹುಣಸೂರು ಉಪ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಟೌನ್ಹಾಲ್ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಜೆಡಿಎಸ್ ಪಕ್ಷದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣಾ ಪ್ರಚಾರ ನಡೆಸುತ್ತಿರುವ ಎಚ್.ವಿಶ್ವನಾಥ್, ಕುರುಬ ಸಮಾಜದವರೆಲ್ಲಾ ನನಗೆ ಮತ ಹಾಕಿ ನಾನು ಸಚಿವನಾಗುತ್ತೇನೆ ಎನ್ನುತ್ತಿದ್ದಾರೆ. ಆದರೆ ಕುರುಬ ಸಮಾಜದವರೇ ನಿಮಗೆ ಹೇಳುತ್ತಿದ್ದೇನೆ, ಡಿ.9ರ ನಂತರ ಯಡಿಯೂರಪ್ಪ ಇದ್ದರೆ ತಾನೇ ವಿಶ್ವನಾಥ್ ಮಂತ್ರಿಯಾಗೋದು. ಸುಮ್ಮನೆ ಅವರಿಗೆ ಮತ ಹಾಕಿ ನಿಮ್ಮ ವೋಟು ವ್ಯರ್ಥ ಮಾಡಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಕರ್ನಾಟಕದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಡಿಸೆಂಬರ್ 05ರಂದು 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 9ರಂದು ಫಲಿತಾಂಶ ಹೊರ ಬರಲಿದೆ. ಬಿಜೆಪಿ, ಕಾಂಗ್ರೆಸ್ ಅಲ್ಲದೆ ಜೆಡಿಎಸ್ ಕೂಡಾ ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದೆ.

ಅಪಪ್ರಚಾರ ಮಾಡುತ್ತಿದ್ದಾರೆ
ಹುಣಸೂರಿನಲ್ಲಿ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಹಾಗಾದರೆ ೮೯ನೇ ವಯಸ್ಸಿನಲ್ಲಿ ದೇವೇಗೌಡರು ಕಾಂಗ್ರೆಸ್ಗೆ ಸಹಾಯ ಮಾಡೋಕೆ ಬಂದಿದ್ದಾರಾ? ನಾನು, ರೇವಣ್ಣ, ಪ್ರಜ್ವಲ್ ಎಲ್ಲರೂ ಸುಮ್ಮನೇ ಬಂದಿದ್ದೀವಾ? ನಾವೇಕೆ ಹೊಂದಾಣಿಕೆ ಮಾಡಿಕೊಳ್ಳಬೇಕು, ನಿಮ್ಮ ಆರ್ಶಿವಾದ ಇದ್ದರೆ ಸಾಕು. ಮುಂದೆ ನಿಮ್ಮ ಸಮಸ್ಯೆಗಳನ್ನ ನಾನೇ ಅಲಿಸುತ್ತೇನೆ ಎಂದು ಭರವಸೆ ನೀಡಿದರು.

ಅನರ್ಹರಿಗಷ್ಟೇ ಕಾಮಧೇನು
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಜನರಿಗೆ ಕಾಮಧೇನು ಅಲ್ಲ. ಕೇವಲ 17 ಅನರ್ಹ ಶಾಸಕರಿಗಷ್ಟೇ ಕಾಮಧೇನು. ಉಪ ಚುನಾವಣೆಯಲ್ಲಿ ಬಿಜೆಪಿ ನಾಯಕರು ಪ್ರತಿ ಕ್ಷೇತ್ರಕ್ಕೆ 40 ಕೋಟಿ ರೂ.ಗಳನ್ನು ಕೊಟ್ಟಿದ್ದಾರೆ. ಒಂದು ವೋಟಿಗೆ 2-3 ಸಾವಿರ ರೂ. ನೀಡುತ್ತಿದ್ದು, ಅದು ಬಾಂಬೆ ದುಡ್ಡು. ಮತದಾರರು ಇದಕ್ಕೆಲ್ಲಾ ಮರುಳಾಗದೆ, ಜೆಡಿಎಸ್ಗೆ ಮತ ನೀಡಿ ಸೋಮಶೇಖರ್ ಗೆಲ್ಲಿಸಿ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ಭರವಸೆ ಈಡೇರಿಸಿದ್ದೇನೆ
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಾಲಮನ್ನಾದ ಜೊತೆಗೆ ಸಿದ್ದರಾಮಯ್ಯ ಅವರು ಕೊಟ್ಟಿದ್ದ ಭರವಸೆಯನ್ನು ನಾನು ಈಡೇರಿಸಿದ್ದೇನೆ. ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು 4ಕೆಜಿಯಿಂದ 7ಕೆಜಿಗೆ ಏರಿಸಿದ್ದರು. ಇದರಿಂದ ಸರ್ಕಾರಕ್ಕೆ 800 ಕೋಟಿ ರೂ. ಹೊರೆ ಆಯಿತು. ಎಲ್ಲಿಂದ ತರಲಿ ಎಂದು ಕೇಳಿದ್ದಕ್ಕೆ ಏನಾದರೂ ಮಾಡಿ ಎಂದಿದ್ದರೂ ಎಂದು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದರು.

ರಾಜಕೀಯ ಶುದ್ದೀಕರಣಕ್ಕೆ ಸಾಕ್ಷಿ
ಉಪ ಚುನಾವಣೆ ನಂತರ ನಾನೇ ಸಿಎಂ ಆಗುತ್ತೇನೆ ಎನ್ನುವುದಿಲ್ಲ. ಡಿ.9ರ ನಂತರ ಏನೇನೋ ಆಗುತ್ತೇ ಎಂದೂ ಹೇಳಲ್ಲ. ಆದರೆ ರಾಜಕೀಯ ಶುದ್ದೀಕರಣಕ್ಕೆ ಡಿ.9 ಸಾಕ್ಷಿಯಾಗಲಿದೆ. ಡಿ.9ಕ್ಕೆ ಸಿಹಿ ಸುದ್ದಿ ಕೊಡುವುದಾಗಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಅವರ ಮಾತುಗಳನ್ನು ದಲಿತ ಬಂಧುಗಳು ಅರ್ಥ ಮಾಡಿಕೊಳ್ಳಬೇಕು. ಉಪ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ನೀಡಿದರೆ ಅದೆಲ್ಲೋ ಬಿಜೆಪಿಗೆ ಲಾಭ ಆಗಲಿದೆ. ಹೀಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಮತ ನೀಡಬೇಡಿ ಎಂದರು.












Click it and Unblock the Notifications