ಕುಂಬಳಕಾಯಿ ಕಳ್ಳ ಯಾರೆಂಬುದು ಗೊತ್ತಾಗಲಿದೆ: ಅನರ್ಹ ಶಾಸಕ ವಿಶ್ವನಾಥ್
ಮೈಸೂರು, ಆಗಸ್ಟ್ 19: "ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯೇ ಪ್ರಮುಖ ರೂವಾರಿ" ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸದ್ಯ ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿರುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಸಿಬಿಐ ಒಂದು ಸಾಂವಿಧಾನಿಕ ಸಂಸ್ಥೆ. ಇಂತಹ ದೊಡ್ಡ ಪ್ರಕರಣವನ್ನು ಸಿಬಿಐನಂತಹ ಸಂಸ್ಥೆಗಳಿಗೇ ವಹಿಸಬೇಕು. ಹೀಗಾಗಿ ಸರ್ಕಾರದ ಕ್ರಮ ಸ್ವಾಗತಾರ್ಹ" ಎಂದು ತಿಳಿಸಿದರು.

"ಬೇಹುಗಾರಿಕೆ ಸಂಸ್ಥೆ ಮುಖ್ಯಮಂತ್ರಿಗಳ ಅಧೀನದಲ್ಲಿಯೇ ಇರುತ್ತದೆ. ಅವರ ಅಣತಿಯಂತೆ ಈ ಫೋನ್ ಕದ್ದಾಲಿಕೆ ಕೆಲಸ ನಡೆದಿದೆ. ಈ ಕುರಿತು ಸೂಕ್ತ ತನಿಖೆ ನಡೆಯಲಿದ್ದು, ತನಿಖೆಯಿಂದ ಎಲ್ಲಾ ಸತ್ಯ ಹೊರಬರಲಿದೆ. ಪ್ರವಾಹದ ಸಂದರ್ಭವನ್ನೇ ಉಪಯೋಗಿಸಿಕೊಂಡು ಪ್ರಕರಣವನ್ನು ನಿರ್ಲಕ್ಷಿಸುವಂತೆ ಮಾಡುತ್ತಿದ್ದಾರೆ. ಆದರೆ ಪ್ರವಾಹ ಎಂದು ಎಲ್ಲರೂ ಹಸಿದುಕೊಂಡೇ ಇದ್ದಾರಾ? ಕುಂಬಳಕಾಯಿ ಕಳ್ಳ ಎಂದರೆ ಯಾಕೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು. ತನಿಖೆಯಿಂದ ಯಾರು ಕುಂಬಳಕಾಯಿ ಕಳ್ಳ ಎಂದು ತಿಳಿಯಲಿದೆ" ಎಂದು ಟಾಂಗ್ ನೀಡಿದರು.
"ಯಾವುದೇ ವಿಚಾರವನ್ನು ನಾನು ತಿರುಚಿಲ್ಲ. ಸಿದ್ದರಾಮಯ್ಯ ಸೇರಿದಂತೆ ಸಾಕಷ್ಟು ಕಾಂಗ್ರೆಸ್ ನಾಯಕರ ಮೇಲೆ ಸಿಬಿಐ ತನಿಖೆಯಾಗಲಿ" ಎಂದು ಒತ್ತಾಯ ಮಾಡಿದ್ದಾರೆ.
"ಫೋನ್ ಕದ್ದಾಲಿಕೆ ವಿಚಾರವನ್ನು ಮೊದಲು ಪ್ರಸ್ತಾಪ ಮಾಡಿದ್ದೇ ನಾನು. ಇದೀಗ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಿಬಿಐ ತನಿಖೆಗೆ ವಹಿಸಿದೆ. ಇದರಿಂದ ನನಗೂ ಸಂತೋಷವಾಗಿದೆ" ಎಂದರು.












Click it and Unblock the Notifications