ಸಾ ರಾ ಮಹೇಶ್ ಕೊಚ್ಚೆಗುಂಡಿ ಇದ್ದಂತೆ: ಶಾಸಕ ಎಚ್. ವಿಶ್ವನಾಥ್
ಮೈಸೂರು, ಆಗಸ್ಟ್ 7 : "ಸಾ ರಾ ಮಹೇಶ್ ನನ್ನ ಬಗ್ಗೆ ಏನಾದರೂ ಹೇಳಿಕೊಳ್ಳಲಿ. ಆದರೆ ಒಂದಂತೂ ಸತ್ಯ. ರಾಜಕೀಯ ವ್ಯಭಿಚಾರ ಮಾಡುತ್ತಿರುವುದು ಮಾತ್ರ ಸಾ. ರಾ ಮಹೇಶ್" ಎಂದು ಏಕವಚನದಲ್ಲಿ ಅನರ್ಹ ಶಾಸಕ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ವಿಶ್ವನಾಥ್ ವ್ಯಭಿಚಾರ ಮಾಡಿದರು ಎಂಬ ಸಾ ರಾ ಮಹೇಶ್ ಹೇಳಿಕೆಗೆ ತಿರುಗೇಟು ನೀಡಿದರು. "ನಾನಲ್ಲ ಅವರೇ ರಾಜಕೀಯ ವ್ಯಭಿಚಾರ ನಡೆಸುತ್ತಿದ್ದಾರೆ. ಸಾ. ರಾ ಮಹೇಶ್ ಒಂದು ಕೊಚ್ಚೆಗುಂಡಿ ಇದ್ದಂತೆ. ಅದಕ್ಕೆ ಕಲ್ಲು ಎಸೆದರೆ ಕೆಲವು ನಮ್ಮ ಮೇಲೆ ಹಾರುತ್ತದೆ. ಅದಕ್ಕೆ ನಾನು ತಯಾರಿಲ್ಲ. ಈಗಿನ ಸಂವಿಧಾನದಲ್ಲಿ ಆಣೆ ಪ್ರಮಾಣ ಎಲ್ಲಿ ನಡೆಯುತ್ತದೆ. ಸಂವಿಧಾನ ಇಟ್ಟುಕೊಂಡು ನಾನು ಮಾತನಾಡುತ್ತೇನೆ ಹೊರತು, ಆಣೆ ಪ್ರಮಾಣದಿಂದಲ್ಲ. ಅದರಿಂದ ನನಗೆ ಏನೂ ತೊಂದರೆಯಾಗುವುದಿಲ್ಲ" ಎಂದರು.

"ಜಾ.ದಳದಲ್ಲಿರುವ ಚೇಲಾಗಳಿಂದ ಪಕ್ಷಕ್ಕೆ ತೊಂದರೆಯಾಗಿದೆ. ಅದು ಎಲ್ಲರಿಗೂ ಗೊತ್ತಿರುವ ವಿಷಯ. ಈಗಾಗಲೇ ಮಾಜಿ ಸಚಿವ ಜಿ ಟಿ ದೇವೇಗೌಡ ಕೂಡ ಪಕ್ಷದ ಬಗ್ಗೆ ಮಾತನಾಡಿದ್ದಾರೆ. ಸಾರ್ವಜನಿಕರಿಗೂ ಎಲ್ಲ ವಿಷಯ ಗೊತ್ತಿದೆ" ಎಂದರು.
"ಕೇಂದ್ರದಲ್ಲಿ 36 ಜಯಂತಿಗಳನ್ನು ಆಚರಣೆ ಮಾಡಲಾಗುತ್ತಿದ್ದು, ಟಿಪ್ಪು ಜಯಂತಿ ಕೂಡ ಒಂದು. ಇವೆಲ್ಲದರ ಬದಲಾಗಿ ಕೇವಲ 4 ಜಯಂತಿಗಳನ್ನು ಅಂದರೆ ಅಂಬೇಡ್ಕರ್ ಜಯಂತಿ, ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ, ಕನ್ನಡ ರಾಜ್ಯೋತ್ಸವ ಮಾಡಿದರೆ ಸಾಕು. ಉಳಿದ ಜಯಂತಿಗಳನ್ನು ರದ್ದು ಮಾಡಲಿ ಎಂದು ಬಿ. ಎಸ್ ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತೇನೆ" ಎಂದರು.











Click it and Unblock the Notifications