"ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ FIR ದಾಖಲಿಸಿರುವುದಲ್ಲಿ ಯಾವುದೇ ರಾಜಕೀಯವಿಲ್ಲ"
ಮೈಸೂರು, ಅಕ್ಟೋಬರ್ 15: ಆರ್.ಆರ್.ನಗರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ಎಫ್ಐಆರ್ ದಾಖಲಿಸಿರುವುದು ರಾಜಕೀಯ ಪ್ರೇರಿತವಲ್ಲ. ಎಲ್ಲರಿಗೂ ಒಂದೇ ನಿಯಮ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ, ನಾಮಪತ್ರ ಸಲ್ಲಿಕೆ ಸಂದರ್ಭ ಜನರು ಸೇರಿಸುವ ಜತೆಗೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರಿಂದ ಕಾನೂನು ಪ್ರಕಾರ ಕೇಸ್ ಹಾಕಲಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದವರು, ಪ್ರತಿಪಕ್ಷ ನಾಯಕರಾಗಿದ್ದಾರೆ. ಯಾವುದು ಕಾನೂನು ಉಲ್ಲಂಘನೆ ಅನ್ನುವುದು ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.
ಆರ್. ಆರ್. ನಗರ ಉಪ ಚುನಾವಣೆ; ಡಿಕೆಶಿ ತುರ್ತು ಸುದ್ದಿಗೋಷ್ಠಿ
ರಾಜ್ಯದ ಶಿರಾ, ರಾಜರಾಜೇಶ್ವರಿನಗರ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ಚುನಾವಣೆಯಲ್ಲಿ ಮೂರೂ ಪಕ್ಷಗಳು ಗೆಲ್ಲುತ್ತೇವೆ ಅನ್ನುತ್ತಿದ್ದರೂ ಮತದಾರರ ಒಲವು ಬಿಜೆಪಿ ಪರವಾಗಿದೆ. ಕಾಂಗ್ರೆಸ್, ಜೆಡಿಎಸ್ ಪದಾಧಿಕಾರಿಗಳ ಸಭೆಯಲ್ಲೂ ನಾನು ಪಾಲ್ಗೊಂಡಿದ್ದೇನೆ. ಮೊದಲ ಬಾರಿಗೆ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸುತ್ತಿದ್ದೇನೆ. ಆಯಾ ಪಕ್ಷದಲ್ಲಿ ಅವರದ್ದೇ ಆದ ತತ್ವ, ಸಿದ್ಧಾಂತಗಳಿವೆ. ಬಿಜೆಪಿಯಲ್ಲಿ ಶಿಸ್ತು, ಸಿದ್ಧಾಂತಗಳೇ ಬೇರೆಯಾಗಿದೆ ಎಂದರು.
ಚುನಾವಣೆಯಲ್ಲಿ ಮೂರು ಪಕ್ಷಗಳು ಗೆಲ್ಲುತ್ತೇವೆ ಅನ್ನುತ್ತವೇ ಹೊರತು ಯಾರು ಕೂಡ ನಾವು ಸೋಲುತ್ತೇವೆ ಅನ್ನಲ್ಲ. ಮತದಾರರ ಒಲವು ಯಾರ ಪರವಾಗಿ ಇದೆ ಎನ್ನುವುದು ಮುಖ್ಯ. ಎರಡು ಕ್ಷೇತ್ರಗಳಲ್ಲಿನ ವಾತಾವರಣ ನೋಡಿದರೆ ಜನರ ಒಲವು ಬಿಜೆಪಿ ಪರವಿದೆ. ನಾನು ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.