ವಿಜಯೇಂದ್ರ ಮಿನಿಸ್ಟರ್ ಆದರೆ ಏನು ಬದಲಾವಣೆ ಆಗುತ್ತೆ? ಎಚ್. ವಿಶ್ವನಾಥ್ ಪ್ರಶ್ನೆ
ಮೈಸೂರು, ಮೇ 21: ರಾಜ್ಯದಲ್ಲಿ ಗುಣಾತ್ಮಕ ವಿಚಾರಕ್ಕೆ ಬದಲಾವಣೆಗಳು ಆಗಬೇಕು. ವಿಜಯೇಂದ್ರ ಮಿನಿಸ್ಟರ್ ಆದರೆ ಗುಣಾತ್ಮಕ ಬದಲಾವಣೆ ಆಗುತ್ತಾ? ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಸಚಿವನಾದರೆ ಆಗಲಿ ಬಿಡಿ. ಆದರೆ, ಇದರಿಂದ ಗುಣಾತ್ಮಕ ಬದಲಾವಣೆ ಆಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ. ವಿಶ್ವನಾಥ್ಗೆ ಸಚಿವ ಸ್ಥಾನ ನೀಡುವಂತೆ ಹೋರಾಟ ಮಾಡುತ್ತಿರುವ ಬಗ್ಗೆ ಮಾತನಾಡಿದ ಅವರು, ಹೋರಾಟ ಮಾಡ್ತಾ ಇದ್ದಾರೆ. ಆದ್ರೆ ಇವ್ರ ಕೊಡಬೇಕಲ್ಲ ಎಂದು ನಕ್ಕರು.
ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ಪಠ್ಯಪುಸ್ತಕ ಪರಿಷ್ಕರಣೆ ರಾಜಕೀಯ ಸಂಘರ್ಷ ಅಲ್ಲ. ನಾವೆಲ್ಲ ಸೇರಿ ಶಿಕ್ಷಣ ಹಾಳು ಮಾಡುತ್ತಿದ್ದೇವೆ. ರೋಹಿತ್ ಚಕ್ರತೀರ್ಥ ಯಾರಪ್ಪ? ಸಂಘ ಪರಿವಾರದ ಕಾರ್ಯಕರ್ತ ನೀವು. ಶಿಕ್ಷಣ ತಜ್ಞರಲ್ಲದೆ ಇರುವವರು ಪಠ್ಯ ಪುಸ್ತಕ ತಯಾರಿಯ ಅಧ್ಯಕ್ಷರಾಗಿರುವುದು ದುರಂತ. ಪಠ್ಯಪುಸ್ತಕದಲ್ಲಿ ಕೇಸರಿಕರಣ ನುಸುಳುತ್ತಿರುವುದು ಅಪಾಯಕಾರಿ. ಧರ್ಮದ ಆಧಾರಿತ ಪಠ್ಯ ಯಾವುದೇ ಕಾರಣಕ್ಕೂ ಬೇಡ.
ಯಜ್ಞ ಕುಂಡ ಯಾವ ಕಡೆ ಇರಬೇಕು ಎಂದು ಪಠ್ಯ ಬೋಧನೆ ಮಾಡುವುದು ಯಾರಿಗೆ ಬೇಕು? ನಾರಾಯಣ ಗುರು ಸಾಮಾಜಿಕ ಕ್ರಾಂತಿಯ ಹರಿಕಾರ ಅವರ ಪಠ್ಯ ತೆಗೆಯುವುದು ತಪ್ಪು. ಹೆಡ್ಗೆವಾರ್ ಯಾರು ಎಂಬುದೆ ನಮಗೆ ಗೊತ್ತಿಲ್ಲ? ಬಾಯಿಗೆ ಬಂದಂಗೆ ಯಾರು ಯಾರೋದು ಪಾಠ ಸೇರಿಸಿದರೆ ಹೇಗೆ? ಹೆಡ್ಗೆವಾರ್ ಗೂ ಟಿಪ್ಪುಗೆ ಹೋಲಿಕೆ ಮಾಡುತ್ತೀರಾ ನೀವು? ಇದು ಸರಿನಾ? ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಚರಿತೆ ಗೊತ್ತಿಲ್ವಾ? ಹೆಡ್ಗೆವಾರ್ ಏನೂ ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ? ಬ್ರಿಟಿಷರ ಮುಂದೆ ಮಂಡಿಯೂರಿದ್ದು ಯಾರು? ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದವನು ಎಂದರು.
ಸಿದ್ದರಾಮಯ್ಯ ಅಧಿಕಾರದಲ್ಲಿದ್ದ ವೇಳೆ ಬೆಂಗಳೂರಿನ ರಾಜಕಾಲುವೆ ಒತ್ತುವರಿ ತೆರವು ಆರಂಭಿಸಿದ್ದರು. ಆ ಜಾಗದಲ್ಲಿ ಪ್ರಸಿದ್ಧ ನಟ, ಶ್ರೀಮಂತ ರಾಜಕಾರಣಿ ಮನೆ ಇದ್ದವು ಎಂದು ಕಾರ್ಯಾಚರಣೆ ನಿಲ್ಲಿಸಿದರು. ಬಡವರು ಮಾತ್ರ ಮನೆ ಕಳೆದು ಕೊಂಡು ಬೀದಿಗೆ ಬಿದ್ದರು. ಶ್ರೀಮಂತರ ಮನೆಗಳು ಹಾಗೇ ಉಳಿದವು. ಬೆಂಗಳೂರಿನ ಕೆ.ಆರ್. ಪುರಂಗೆ ಸಿಎಂ ಹೋದರೆ ಅಲ್ಲಿ ಹೂ ಎರಚುತ್ತಾರೆ. ಅಲ್ಲಿನ ಜನರ ಮನೆಗೆ ನೀರು ಹೋಗಿದೆ ಇವರು ಹೂ ಎರಚಿ ಸಂಭ್ರಮಿಸುತ್ತಾರೆ. ಇದು ಸರಿನಾ? ಮೂಲಭೂತ ಸೌಕರ್ಯಕ್ಕೆ ಎಲ್ಲಡೆ ಅತಿ ಹೆಚ್ಚು ಹಣ ಖರ್ಚಾಗ್ತಿದೆ. ಪ್ರತಿ ಲ ಮಾತ್ರ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲಾ ಮಂತ್ರಿ ಎಲ್ಲಿ ಹೋದ್ರು? ಜಿಲ್ಲೆಯಲ್ಲಿ ಮಳೆಯಿಂದ ಅನಾಹುತವಾಗಿದೆ. ನೀವು ಖುದ್ದು ಬಂದು ನೋಡಬೇಕು ತಾನೇ? ಸಿಎಂ ಎಲ್ಲಾ ಕಡೆ ಹೋಗಿ ಜನರ ಸಂಕಷ್ಟ ಅಲಿಸುತ್ತಿದ್ದಾರೆ. ಜಿಲ್ಲಾ ಮಂತ್ರಿಗಳು ಯಾಕೆ ಎಲ್ಲೂ ಹೋಗುತ್ತಿಲ್ಲ? ನಿಮಗೆ ಏನಾಗಿದೆ? ಜನಪ್ರತಿನಿಧಿಗಳ ಸಭೆ ನಡೆಸಿ ಸಮಸ್ಯೆ ಪರಿಹರಿಸಿ. ಹಿಂದೆ ಮೋದಿ ಮೈಸೂರಿಗೆ ಬಂದಾಗ ಮೈಸೂರು ಪ್ಯಾರಿಸ್ ಮಾಡ್ತಿನಿ ಅಂತ ಹೇಳಿದ್ದರು ಈಗ ಮೈಸೂರು ಕೊಳಚೆಯಾಗುತ್ತಿದೆ. ಇದನ್ನು ಮೋದಿ ಗಮನಿಸಲಿ ಎಂದರು.