ಜಾತಿ ಆಧಾರಿತ ನಿಗಮ ಮಂಡಳಿ ರಚನೆಗೆ ಎಚ್.ವಿಶ್ವನಾಥ್ ಅಸಮಾಧಾನ
ಮೈಸೂರು, ನವೆಂಬರ್ 20: ರಾಜ್ಯ ಸರ್ಕಾರ ಜಾತಿ ಆಧಾರಿತ ನಿಗಮ ಮಂಡಳಿ ರಚಿನೆಯ ಸರ್ಕಾರದ ನಿರ್ಧಾರಕ್ಕೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಪ್ರಾಧಿಕಾರಗಳನ್ನು ರಚಿಸುವುದು ಸರಿಯಲ್ಲ. ಕುವೆಂಪು ಅವರು ಹೇಳಿದಂತೆ ಚೆಲುವ ಕನ್ನಡ ನಾಡು, ಇದು ಶಾಂತಿಯ ನೆಲವೀಡು. ಇಂತಹ ನೆಲದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುವುದು ಸರಿಯಲ್ಲ ಎಂದು ತಿಳಿಸಿದರು.
ಬೇಜವಾಬ್ದಾರಿಯ ಸರ್ಕಾರ ಇದ್ದೂ ಸತ್ತಂತೆ; ಸಿದ್ದರಾಮಯ್ಯ
ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ, ಸಿದ್ದಿಪುರುಷರ ಕಲ್ಪನೆಯಲ್ಲಿ ಸಂವಿಧಾನ ರಚನೆಯಾಗಿದೆ. ಬಸವೇಶ್ವರ, ಅಂಬೇಡ್ಕರ್, ಮಹಾತ್ಮ ಗಾಂಧಿ ಹೆಸರಲ್ಲಿ ಅವರ ಆಶಯಗಳಂತೆ ಸರ್ಕಾರಗಳನ್ನು ನಡೆಸಬೇಕಿದೆ. ಆ ರೀತಿಯಲ್ಲಿ ಆಡಳಿತ ನಡೆಸುವಂತೆ ಕೇಳಿಕೊಳ್ಳುತ್ತೇನೆ ಎಂದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಸಂಪುಟ ವಿಸ್ತರಣೆಯೋ? ಪುನರಚನೆಯೋ? ಅದು ಯಾವಾಗ ಎಂಬುದೆಲ್ಲ ಅಮಿತ್ ಶಾ, ಮೋದಿ ಮತ್ತು ಆ ದೇವರಿಗೆ ಮಾತ್ರ ಗೊತ್ತು ಎಂದರು.
ಒಂದು ಪರಿಪೂರ್ಣವಾದ ಸಂಪುಟದ ಅವಶ್ಯಕತೆ ಇದೆ. ಜನರ ಜೊತೆಯಲ್ಲಿ ಇದ್ದು ಕೆಲಸ ಮಾಡುವ ಸದೃಢ ಸಂಪುಟ ಬೇಕು. ಅದು ಆದಾಗ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ದೇವರಾಜ ಅರಸ್ ಕಾಲದಲ್ಲಿ ಸದೃಢ ಸಂಪುಟ ಇದ್ದ ಕಾರಣ ಎರಡು ಬಾರಿ ಆಡಳಿತ ಮಾಡಲು ಸಾಧ್ಯವಾಯಿತು ಎಂದು ಎಂಎಲ್ಸಿ ಎಚ್.ವಿಶ್ವನಾಥ್ ಹೇಳಿದರು.
ಕಾಂಗ್ರೆಸ್ ಮತ್ತು ಬಿಜೆಪಿ ದೆಹಲಿ ಕೇಂದ್ರಿತ ಪಕ್ಷಗಳು. ಈಗಾಗಿ ಕೆಲವು ನಿರ್ಣಯ ತೆಗೆದುಕೊಳ್ಳಲು ವಿಳಂಬವಾಗುತ್ತದೆ. ಇಲ್ಲಿಯ ಲೆಕ್ಕಚಾರ ಬೇರೆ, ಅಲ್ಲಿಯದ್ದೇ ಬೇರೆ ಎಂದರು.
ಮಂಡ್ಯ ಡಿಸಿಸಿ ಬ್ಯಾಂಕ್ ನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಜೊತೆ ಒಪ್ಪಂದ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ""ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆಗಾಗ ಸಖರ ಹುಡುಕಾಟ ನಡೆಸುತ್ತಿರುತ್ತಾರೆ.''
""ಅವರಿಗೆ ಯಾರು, ಯಾವಾಗ ಸಖ ಆಗುತ್ತಾರೆ ಗೊತ್ತಿಲ್ಲ. ಸ್ಥಿರತೆ ಸದೃಢತೆಗಾಗಿ ಸಖರ ಹುಡುಕಾಟ ಇರುತ್ತದೆ. ಮುಂದೆ ಯಾರು ಅವರಿಗೆ ಸಖರಾಗುತ್ತಾರೆ ಎಂಬುದು ಗೊತ್ತಿಲ್ಲ'' ಎಂದು ಕಾಲೆಳೆದರು.