ಎಚ್.ಡಿ. ಕುಮಾರಸ್ವಾಮಿ ಮುಡಾದಿಂದ ಅಕ್ರಮವಾಗಿ ವಸತಿ ನಿವೇಶನ ಪಡೆದಿಲ್ಲ: ಸಾರಾ ಮಹೇಶ್
ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ತಮ್ಮ ಪ್ರಭಾವ ಬಳಸಿ ಯಾವುದೇ ನಿವೇಶನ ಪಡೆದುಕೊಂಡಿಲ್ಲ. ಕಾಂಗ್ರೆಸ್ ನಾಯಕರು ಸಾರ್ವಜನಿಕರಿಗೆ ದಾರಿ ತಪ್ಪಿಸುವ ಹೇಳಿಕೆಯನ್ನು ನಿಲ್ಲಿಸಬೇಕು ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಹೇಳಿದರು.
ಮೈಸೂರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ಕೈಗಾರಿಕಾ ನಿವೇಶನ ಬಿಟ್ಟರೆ ಯಾವುದೇ ವಾಣಿಜ್ಯ, ವಸತಿ ನಿವೇಶನವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಳೆದ ಆರು ತಿಂಗಳ ಹಿಂದೆ ಕುಮಾರಸ್ವಾಮಿ ಅವರು ಬದಲಿ ನಿವೇಶನ ಕೇಳಿದ್ದಾರೆ. ಇದು 1984ರಲ್ಲಿ ಕುಮಾರಸ್ವಾಮಿ ಅವರು ಪಡೆದುಕೊಂಡಿದ್ದ ಕೈಗಾರಿಕಾ ನಿವೇಶನವಾಗಿದೆ. ಆದರೆ, ಈ ನಿವೇಶನವು ಭೌತಿಕವಾಗಿ ಇಲ್ಲದ ಕಾರಣ ಬದಲಿ ನಿವೇಶನ ಕೋರಿದ್ದರೆ ಹೊರತೂ ಅಧಿಕಾರ ದುರ್ಬಳಕೆ ಮಾಡಿಕೊಂಡು ನಿವೇಶನ ಪಡೆದಿಲ್ಲ. ಕೈಗಾರಿಕಾ ನಿವೇಶನ ಕೋರಿ ಕಟ್ಟಿರುವ ಹಣ ಮುಡಾದಲ್ಲಿ ಹಾಗೆಯೇ ಇದೆ ಎಂದರು.
ಸರಕಾರ ಆರ್ಟಿಐ ಕಾರ್ಯಕರ್ತರಿಗೆ ತೊಂದರೆ ಕೊಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ವ್ಯಕ್ತಿಗೆ ಸ್ವಾತಂತ್ರ್ಯ ಇರುತ್ತದೆ. ಆರ್ಟಿಐ ಕಾರ್ಯಕರ್ತನದ್ದು ಹುದ್ದೆಯಲ್ಲ. ಅದೊಂದು ಜವಾಬ್ದಾರಿಯಾಗಿದೆ. ಆರ್ಟಿಐ ಹೆಸರಿನಲ್ಲಿ ಕೆಲವರು ಸಾರ್ವಜನಿಕರಿಂದ ಸುಲಿಗೆ ಮಾಡುತ್ತಿದ್ದು, ಇದನ್ನು ಸರಕಾರ ಮತ್ತು ಪೊಲೀಸ್ ಇಲಾಖೆ ತಪ್ಪಿಸಬೇಕು ಎಂದರು.
ಮುಡಾ ಹಗರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸುವಂತೆ ನೀಡಿರುವ ಆದೇಶದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ನಗರಾಭಿವೃದ್ಧಿ ಸಚಿವರು ಆದೇಶ ಹಿಂದಕ್ಕೆ ವಾಪಸ್ ಪಡೆಯಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿ ಸುಮ್ಮನೆ ಕೂರಿಸಿ ಸಂಬಳ ಕೊಡುವ ಬದಲಿಗೆ ಇರುವ ಕೆಲಸ ಮಾಡಲು ಅವಕಾಶ ಕೊಡಬೇಕು ಎಂದು ಹೇಳಿದರು.












Click it and Unblock the Notifications